ಬೆಂಗಳೂರು: `ಸೆರೆಬ್ರಲ್ ಪಾಲ್ಸಿ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ. ನಾನಾ ಬಗೆಯ ಕಾಯಿಲೆ ಪೀಡಿತರಿಗೆ ನೆರವಾಗಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ರೋಗ ನಿಯಂತ್ರಣಕ್ಕೆ ಸಂಘ ಸಂಸ್ಥೆಗಳು ಮುಂದಾಗಬೇಕು~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಲಹೆ ನೀಡಿದರು.
ಸ್ಪಾಸ್ಟಿಕ್ ಸೊಸೈಟಿ ಆಫ್ ಕರ್ನಾಟಕದ ಆಶ್ರಯದಲ್ಲಿ `ಸೆರೆಬ್ರಲ್ ಪಾಲ್ಸಿ~ ದಿನಾಚರಣೆಯ ಅಂಗವಾಗಿ ರಾಜಭವನದಲ್ಲಿ ಶನಿವಾರ `ಅರಿವಿಗಾಗಿ ನಡಿಗೆ~ಗೆ ಚಾಲನೆ ನೀಡಿ ಅವರು ಮಾತನಾಡಿದರು.
`ಪೋಲಿಯೊ ಬಗ್ಗೆ ರೋಟರಿ ಸಂಸ್ಥೆ ನಿರಂತರವಾಗಿ ಜಾಗೃತಿ ಮೂಡಿಸಿದೆ. ಅದೇ ಮಾದರಿಯಲ್ಲಿ ಸೆರೆಬ್ರಲ್ ಪಾಲ್ಸಿ ಬಗ್ಗೆಯೂ ರೋಟರಿ ಜಾಗೃತಿ ಮೂಡಿಸಬೇಕು~ ಎಂದು ಕಿವಿಮಾತು ಹೇಳಿದರು.
ಅರಿವಿಗಾಗಿ ನಡಿಗೆಯ ಸಂಯೋಜಕ ಡಾ.ಎಂ.ಎಸ್.ಮಹಾದೇವಯ್ಯ, `ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ಕುಟುಂಬದ ಸದಸ್ಯರಲ್ಲಿ ಜಾಗೃತಿ ಮೂಡಿಸಿ ಇಂಡಿಯನ್ ಅಕಾಡೆಮಿ ಆಫ್ ಸೆರೆಬ್ರಲ್ ಪಾಲ್ಸಿ ಅಗತ್ಯ ಸೇವೆಗಳನ್ನು ಒದಗಿಸುತ್ತಿದೆ. ಪ್ರತಿವರ್ಷ ದೇಶದಾದ್ಯಂತ ಅಕ್ಟೋಬರ್ 3ರಂದು ಸೆರೆಬ್ರಲ್ ಪಾಲ್ಸಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ~ ಎಂದರು.
`ಐಸಾಕ್~ ಸಂಘಟನಾ ಕಾರ್ಯದರ್ಶಿ ರಬೀಂದ್ರನ್, ರೋಟರಿ ಇಂಟರ್ನ್ಯಾಷನಲ್ ಅಧ್ಯಕ್ಷ ಅತುಲ್ ಗುರ್ಜಾರ್ ಮತ್ತಿತರರು ಉಪಸ್ಥಿತರಿದ್ದರು. ರಾಜಭವನದಿಂದ ಆರಂಭಗೊಂಡ ನಡಿಗೆ ಲ್ಯಾವೆಲ್ಲೆ ರಸ್ತೆಯ ರೋಟರಿ ಕ್ಲಬ್ ಕಟ್ಟಡದ ವರೆಗೆ ಸಾಗಿಬಂತು. ನಡಿಗೆಯಲ್ಲಿ ಸೆರೆಬ್ರಲ್ ಪಾಲ್ಸಿ ಪೀಡಿತರು ಸೇರಿದಂತೆ ಸುಮಾರು 200 ಜನರು ಪಾಲ್ಗೊಂಡಿದ್ದರು.