ಹಾವೇರಿ: ಗೋವಿನಜೋಳ, ಹತ್ತಿ ಹೊಲಗಳ ಮಧ್ಯದ ಹಳ್ಳಿ ಹಾದಿಯಲ್ಲಿ ಬಿಸಿಲನ್ನೂ ಲೆಕ್ಕಿಸದೆ ಖಾದಿಧಾರಿ ರಾಹುಲ್ ಗಾಂಧಿ ಬಿರುಸಿನಿಂದ ನಡೆಯುತ್ತಿದ್ದರೆ ಅವರ ಜತೆ ಹೆಜ್ಜೆ ಹಾಕಲು ಅನೇಕರಿಗೆ ಸಾಧ್ಯವಾಗಲೇ ಇಲ್ಲ.
ರಾಣೆಬೆನ್ನೂರು ತಾಲ್ಲೂಕಿನ ಮೈದೂರ, ಗುಡಗೂರ, ಚನ್ನಾಪುರ ಗ್ರಾಮಗಳಲ್ಲಿ ರಾಹುಲ್ ಶನಿವಾರ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 2.30ರ ತನಕ ನಡೆಸಿದ 6 ಕಿ.ಮೀ ಪಾದಯಾತ್ರೆಯ ಝಲಕ್ ಇದು. ಅವರ ನಡಿಗೆಗೆ ಸಾಥ್ ನೀಡಲಾಗದ ಕೆಲ ಹಿರಿಯ ಸಚಿವರು, ಶಾಸಕರು ಹಿಂದೆ ಸರಿದು, ಬಳಿಕ ಹಿಂಭಾಗದಿಂದ ಬರುತ್ತಿದ್ದ ತಮ್ಮ ಕಾರುಗಳನ್ನು ಏರಿದರು. ಹೀಗಾಗಿ ಪಾದಯಾತ್ರೆಯ ಹಿಂದೆ ವಾಹನಗಳ ದಂಡೇ ಹೊರಟಿತ್ತು.
ಬೆಳಿಗ್ಗೆ 9.45ರ ಸುಮಾರಿಗೆ ರಾಣೆಬೆನ್ನೂರು ಹೆಲಿಪ್ಯಾಡ್ಗೆ ಬಂದಿಳಿದ ರಾಹುಲ್ ಅಲ್ಲಿ ಕಳಸಾ ಬಂಡೂರಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಬಳಿಕ ನೇರವಾಗಿ ಮೈದೂರ ಪ್ಲಾಟ್ನಲ್ಲಿರುವ ಆತ್ಮಹತ್ಯೆ ಮಾಡಿಕೊಂಡ ರೈತ ಅಶೋಕ ಮಡಿವಾಳರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ರೈತರು, ಮಹಿಳೆಯರು ಸೇರಿದಂತೆ ಸ್ಥಳದಲ್ಲಿದ್ದ ಕೆಲವರ ಮನವಿ ಆಲಿಸಿದರು.