ಕೊಲಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತವು ತನ್ನ ನೆರವನ್ನು ಮುಂದುವರಿಸಿದ್ದು, ಪ್ರಸ್ತುತ ಶ್ರೀಲಂಕಾ ಪೊಲೀಸರಿಗಾಗಿ125 ಎಸ್ಯುವಿಗಳನ್ನು ಹಸ್ತಾಂತರಿಸಿದೆ.
ನೆರೆ ರಾಷ್ಟ್ರಗಳಿಗೆ ಆದ್ಯತೆನೀತಿಯ ಭಾಗವಾಗಿ ಭಾರತ 12 ತಿಂಗಳಿಂದ ನೆರವು ವಿಸ್ತರಿಸಿದೆ. ‘ಲೈನ್ ಆಫ್ ಕ್ರೆಡಿಟ್’ ಅಡಿಯಲ್ಲಿ ಒಟ್ಟು 500 ಅತ್ಯಾಧುನಿಕ ಎಸ್ಯುವಿಗಳನ್ನು ನೀಡುವ ಒಪ್ಪಂದಕ್ಕೆ ಈ ವರ್ಷದ ಆರಂಭದಲ್ಲಿ ಸಹಿ ಹಾಕಲಾಗಿತ್ತು. ಅದರಂತೆ ಈಗ 125 ಎಸ್ಯುವಿಗಳನ್ನು ಕಳುಹಿಸಲಾಗಿದ್ದು, ಉಳಿದವನ್ನು ಶೀಘ್ರದಲ್ಲೇ ಕಳುಹಿಸಲಾಗುವುದು ಎಂದುಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಹೇಳಿದ್ದಾರೆ.
ಆಹಾರ, ಔಷಧ, ಇಂಧನ ಮತ್ತು ಸೀಮೆಎಣ್ಣೆಯಂತಹ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಶ್ರೀಲಂಕಾದ ಆಹಾರ, ಆರೋಗ್ಯ ಮತ್ತು ಇಂಧನ ಭದ್ರತೆಯನ್ನು ಸುರಕ್ಷಿತಗೊಳಿಸಲು ಸುಮಾರು 4 ಶತಕೋಟಿ ಡಾಲರ್ ಆರ್ಥಿಕ ನೆರವನ್ನು ಭಾರತ ನೀಡಿದೆ.