ಜೊಹಾನ್ಸ್ಬರ್ಗ್: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ವಾಂಗ್ ಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಪುನರ್ಸ್ಥಾಪನೆಗೆ ಇನ್ನಷ್ಟು ಪ್ರಯತ್ನಿಸಬೇಕಾದ ಅಗತ್ಯವಿದೆ ಮತ್ತು ಉಭಯ ದೇಶಗಳ ನಡುವೆ ಸಹಜ ದ್ವಿಪಕ್ಷೀಯ ಸಂಬಂಧ ಮುಂದುವರಿಕೆಗೆ ಇರುವ ಅಡೆತಡೆಗಳನ್ನು ನಿವಾರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಆಫ್ರಿಕಾದಲ್ಲಿ ಸೋಮವಾರ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ಆಫ್ರಿಕಾ) ದೇಶಗಳ ಸಭೆ ನಡೆದ ನಂತರ ಭಾರತ–ಚೀನಾ ದೇಶಗಳ ನಾಯಕರು ಭೇಟಿಯಾಗಿ ಚರ್ಚಿಸಿದರು.
ಈ ವೇಳೆ ಡೊಭಾಲ್ ಅವರು, ‘2020ರಿಂದ ಭಾರತ–ಚೀನಾ ಗಡಿಯಲ್ಲಿ ನಂಬಿಕೆ, ವಿಶ್ವಾಸ ಹಾಗೂ ಸಾರ್ವಜನಿಕ ಮತ್ತು ರಾಜಕೀಯ ಆಧಾರಿತ ಸಂಬಂಧವೇ ಮಾಯವಾಗಿದೆ ಎಂದು ತಿಳಿಸಿದರು’ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯವು ಎರಡು ದೇಶಗಳಿಗೆ ಮಾತ್ರವಲ್ಲ, ಇಡೀ ಜಗತ್ತಿಗೇ ಮುಖ್ಯ ಎಂದು ಅಜಿತ್ ಡೊಭಾಲ್– ವಾಂಗ್ ಯಿ ಅಭಿಪ್ರಾಯಪಟ್ಟರು ಎಂದು ತಿಳಿಸಿದೆ.