ಸಿಯಾಂಜೂರ್ (ಇಂಡೊನೇಷ್ಯಾ): ಇಂಡೊನೇಷ್ಯಾದ ಜಾವಾ ದ್ವೀಪದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 271ಕ್ಕೆ ತಲುಪಿದೆ.
ಕುಸಿದ ಮನೆಯ ಅವಶೇಷಗಳಡಿ ತನ್ನ ಅಜ್ಜಿಯ ಶವದ ಪಕ್ಕವೇ ಎರಡು ದಿನಗಳಿಂದ ಸಿಲುಕಿದ್ದ ಆರು ವರ್ಷದ ಬಾಲಕನನ್ನು ರಕ್ಷಣಾ ತಂಡಗಳು ಬುಧವಾರ ಜೀವಂತವಾಗಿ ರಕ್ಷಿಸಿವೆ.ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದ್ದ ಮೂರು ಮೃತ ದೇಹಗಳನ್ನು ಹೊರತೆಗೆದಿವೆ.
ಭೂಕಂಪದ ನಂತರ ಸುರಿಯುತ್ತಿರುವ ಭಾರಿ ಮಳೆಯಿಂದ ಬುಧವಾರ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಯಿತು.
ಗಾಯಗೊಂಡಿರುವ 2,043 ಜನರ ಪೈಕಿ 600 ಮಂದಿ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಬದುಕುಳಿದ 58 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.
ರಕ್ಷಣಾ ತಂಡಕ್ಕೆ ಬಲ ತುಂಬಲು12 ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿ ನಿಯೋಜಿಸಲಾಗಿದೆ. ಸಂತ್ರಸ್ತರು ಆಶ್ರಯಿಸಿರುವ ಪ್ರದೇಶಗಳಿಗೆ ನೀರು, ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಪೂರೈಸಲಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿ ಮುಖ್ಯಸ್ಥ ಸುಹಾರಿಯಂಟೊ ತಿಳಿಸಿದ್ದಾರೆ.