ನವದೆಹಲಿ: ರಷ್ಯಾ ಸೇನೆಗೆ ನೇಮಕಗೊಂಡಿದ್ದ ಇಬ್ಬರು ಭಾರತೀಯ ಪ್ರಜೆಗಳು ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
ಈ ವಿಷಯವನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಸೇನೆಗೆ ನಿಯೋಜಿಸಿಕೊಂಡಿರುವ ಎಲ್ಲ ಭಾರತೀಯ ಪ್ರಜೆಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು ಹಾಗೂ ಭಾರತಕ್ಕೆ ವಾಪಸು ಕಳುಹಿಸಬೇಕು ಎಂದು ಆಗ್ರಹಪಡಿಸಿದೆ ಎಂದು ಸಚಿವಾಲಯ ತಿಳಿಸಿದೆ.
‘ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸಲ್ಲಿಸುತ್ತೇವೆ. ಮಾಸ್ಕೊದಲ್ಲಿನ ಭಾರತದ ರಾಯಭಾರ ಕಚೇರಿಯು ರಷ್ಯಾದ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದು, ತ್ವರಿತಗತಿಯಲ್ಲಿ ಪಾರ್ಥಿವ ಶರೀರ ಪಡೆಯಲು ಒತ್ತು ನೀಡಲಾಗಿದೆ’ ಎಂದೂ ಸಚಿವಾಲಯವು ವಿವರಿಸಿದೆ.
ರಷ್ಯಾದ ಸೇನೆಯಲ್ಲಿ ಅನೇಕ ಭಾರತೀಯರು ರಕ್ಷಣಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಷ್ಯಾದ ಸೈನಿಕರ ಜೊತೆಗೂಡಿ ಉಕ್ರೇನ್ನ ಗಡಿಯಲ್ಲಿ ಯುದ್ಧದಲ್ಲಿ ಭಾಗಿಯಾಗುವಂತೆ ಇವರಿಗೆ ಒತ್ತಡ ಹೇರಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ರಷ್ಯಾದ ಸೇನೆಗೆ ಭಾರತೀಯ ಪ್ರಜೆಗಳನ್ನು ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಇಂತಹ ಚಟುವಟಿಕೆಗಳು ಉಭಯ ದೇಶಗಳ ಪಾಲುದಾರಿಕೆಗೆ ವಿರುದ್ಧವಾದುದು ಎಂದು ಭಾರತವು ಸ್ಪಷ್ಟ ಮಾತುಗಳಲ್ಲಿ ಹೇಳಿದೆ.