ಪ್ಯಾರಿಸ್ (ಪಿಟಿಐ): ಆಹಾರ ಧಾನ್ಯಗಳ ಬೆಲೆ ಏರಿಕೆಯ ವಿಷಯ ಶುಕ್ರವಾರದಿಂದ ಇಲ್ಲಿ ಆರಂಭವಾಗುವ ಜಿ-20ರಾಷ್ಟ್ರಗಳ ಹಣಕಾಸು ಸಚಿವರ ಎರಡು ದಿನಗಳ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.
ಆಹಾರ ಧಾನ್ಯಗಳ ಬೆಲೆ ಏರಿಕೆ ಪ್ರಮಾಣ ಅಪಾಯಕಾರಿ ಮಟ್ಟ ತಲುಪಿದೆ. ಜತೆಗೆ ಜಾಗತಿಕ ಆರ್ಥಿಕ ಚೇತರಿಕೆ ಕೂಡ ಉತ್ತೇಜನಕಾರಿಯಾಗಿಲ್ಲ. ಈ ವಿಷಯಗಳು ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಈ ಸಭೆಯಲ್ಲಿ ಭಾರತದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಭಾಗವಹಿಸಲಿದ್ದಾರೆ.
ಸತತವಾಗಿ ಏರುತ್ತಿರುವ ಇಂಧನ ದರ ನಿಯಂತ್ರಣ, ತೆರಿಗೆ ವಂಚನೆ ತಡೆಯುವುದು, ಬಂಡವಾಳ ಹೂಡಿಕೆಗೆ ಅಡ್ಡಿ ನಿವಾರಣೆ, ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವುದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ವಿಷಯಗಳು ಸಹ ಚರ್ಚೆಯಾಗುವ ಸಾಧ್ಯತೆ ಇದೆ.