ಇಸ್ಲಾಮಾಬಾದ್: ಪಂಜಾಬ್ ಪ್ರಾಂತ್ಯದ ಚಾಕ್ವಾಲ್ ಜಿಲ್ಲೆಯಲ್ಲಿ ಐತಿಹಾಸಿಕ ಕಟಾಸ್ರಾಜ್ ಹಿಂದೂ ದೇವಾಲಯದ ಸಂಕೀರ್ಣದಲ್ಲಿ ಇರುವ ಪವಿತ್ರ ಕೊಳವನ್ನು ರಕ್ಷಿಸಲು ವಿಫಲವಾದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪಾಕಿಸ್ತಾನದ ಸುಪ್ರೀಂ ಕೋರ್ಟ್, ಒಂದು ವಾರದ ಒಳಗೆ ಕೊಳವನ್ನು ಹೇಗಾದರೂ ಮಾಡಿ ಭರ್ತಿ ಮಾಡುವಂತೆ ಗುರುವಾರ ಆದೇಶಿಸಿದೆ.
ಪಾಕಿಸ್ತಾನದಲ್ಲಿ ಹಿಂದೂಗಳ ಹಕ್ಕನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ಬಗ್ಗೆ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ನ್ಯಾಯಮೂರ್ತಿ ಸಾದಿಖ್ ನಿಸಾರ್ ಆದೇಶಿಸಿದ್ದಾರೆ.
ಈ ದೇವಾಲಯದ ಸುತ್ತಮುತ್ತಲೂ ಸಿಮೆಂಟ್ ಕಾರ್ಖಾನೆಗಳು ಹೆಚ್ಚಾಗಿರುವ ಕಾರಣ, ಹಲವಾರು ಕೊಳವೆ ಬಾವಿಗಳನ್ನು ತೆರೆಯಲಾಗಿದೆ. ಇದರಿಂದ ಅಂತರ್ಜಲ ಕುಸಿದು ಇಲ್ಲಿಯ ಕೊಳದ ನೀರು ಖಾಲಿಯಾಗಿದೆ. ಇದರ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಆಧರಿಸಿ, ಕೋರ್ಟ್ ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
‘ಕಟಾಸ್’ ಶಬ್ದವು ಸಂಸ್ಕೃತ ಶಬ್ದ ‘ಕಟಾಕ್ಷ’ದಿಂದ ಬಂದಿದೆ. ಇದರ ಅರ್ಥ ‘ನೀರು ಸುರಿಸುತ್ತಿರುವ ಕಣ್ಣು’. ಶಿವನ ಹೆಂಡತಿ ಸತಿ ಪ್ರಾಣ ಕಳೆದುಕೊಂಡಿದ್ದರಿಂದ ಶಿವ ಕಣ್ಣೀರು ಸುರಿಸಿದ ಜಾಗ ಇದು ಎಂಬ ನಂಬಿಕೆ ಇದೆ.