ವಾಷಿಂಗ್ಟನ್ (ಐಎಎನ್ಎಸ್): ಶ್ವೇತಭವನದ ಜತೆ ಸಮಾಲೋಚನೆ ನಡೆಸದೆ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವ-ರಿಗೆ ಸ್ಪೀಕರ್ ಜಾನ್ ಬೊಹ್ನೆರ್ ಆಮಂತ್ರಣ ನೀಡಬಾರದಿತ್ತು ಎಂದು ಅರ್ಧದಷ್ಟು ಅಮೆರಿಕ ಪ್ರಜೆಗಳು ಅಭಿಪ್ರಾಯಪಟ್ಟಿದ್ದಾರೆ.
ಅಧ್ಯಕ್ಷ ಬರಾಕ್ ಒಬಾಮ ಅವರ ಜತೆ ಚರ್ಚಿಸದೆ ಸ್ಪೀಕರ್ ಅವರು ನೆತನ್ಯಾಹು ಅವರನ್ನು ಆಮಂತ್ರಿಸಿರುವುದು ತಪ್ಪು ಎಂದು ಶೇಕಡ 48ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಶೇಕಡ 22ರಷ್ಟು ಜನರು ತಿಳಿಸಿದ್ದಾರೆ.
ಎನ್ಬಿಸಿ ನ್ಯೂಸ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ನಡೆಸಿದ ಸಮೀಕ್ಷೆಯಲ್ಲಿ ಶೇಕಡ 30ರಷ್ಟು ಜನರು ಶ್ವೇತಭವನದ ಜತೆ ಸಮಾಲೋಚಿಸಬಹುದಾಗಿತ್ತು ಎಂದು ಹೇಳಿದ್ದಾರೆ.
ನೆತನ್ಯಾಹು ಅವರನ್ನು ಭೇಟಿ ಮಾಡದಿರಲು ಒಬಾಮ ನಿರ್ಧರಿಸಿದ್ದು, ಎರಡೂ ರಾಷ್ಟ್ರಗಳ ಮಧ್ಯೆ ಒಂದು ರೀತಿಯಲ್ಲಿ ಭಿನ್ನಮತ ಹೆಚ್ಚಾಗಿರುವ ಸಂದರ್ಭದಲ್ಲಿ ಸಮೀಕ್ಷಾ ವರದಿ ಪ್ರಕಟವಾಗಿದೆ.
ಇರಾನ್ ಅಣ್ವಸ್ತ್ರ ಕಾರ್ಯಕ್ರಮವು ಇಸ್ರೇಲ್ಗೆ ಬೆದರಿಕೆ ಒಡ್ಡಿರುವುದರಿಂದ ಈ ಬಗ್ಗೆ ಸಂಧಾನ ಮಾತುಕತೆ ನಡೆಸುವುದು ಸರಿಯಲ್ಲ ಎಂದು ನೆತನ್ಯಾಹು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಈ ಮಾತನ್ನು ಅವರು ಕಾಂಗ್ರೆಸ್ ಉದ್ದೇಶಿಸಿ ಮಾತನಾಡುವಾಗ ಪುನರ್ ಉಚ್ಛರಿಸುವ ಸಾಧ್ಯತೆ ಇರುವುದರಿಂದ ಶ್ವೇತಭವನದ ಆಡಳಿತಕ್ಕೆ ಆತಂಕ ಉಂಟಾಗಿದೆ. ನೆತನ್ಯಾಹು ಅವರು ಮಂಗಳವಾರ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.