ಇಸ್ಲಾಮಾಬಾದ್ (ಪಿಟಿಐ): ಗಡಿಯ ಲ್ಲಿಯ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು 2003ರ ಕದನ ವಿರಾಮ ಒಪ್ಪಂದವನ್ನು ಪಾಲಿಸುವುದೂ ಸೇರಿದಂತೆ ವಿಶ್ವಾಸ ಮೂಡಿಸುವ ಕ್ರಮಗಳನ್ನು ಮಂಗಳವಾರ ನಡೆಯಲಿರುವ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆಯ ಮುಂದಿಡಲು ಪಾಕಿಸ್ತಾನ ಬಯಸಿದೆ.
ಸಾರ್ಕ್ ದೇಶಗಳ ಪ್ರವಾಸದಲ್ಲಿ ಇರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಎರಡು ದಿನಗಳ ಭೇಟಿಗಾಗಿ ಮಂಗಳವಾರ ಇಸ್ಲಾಮಾಬಾದ್ಗೆ ಆಗಮಿಸಲಿದ್ದಾರೆ. ಥಿಂಪು ಮತ್ತು ಢಾಕಾಗೆ ಭೇಟಿ ನೀಡಿರುವ ಜೈಶಂಕರ್ ಅವರು ಇಸ್ಲಾಮಾಬಾದ್ ಸಭೆಯ ನಂತರ ಆಫ್ಘಾನಿಸ್ತಾನಕ್ಕೆ ತೆರಳಲಿದ್ದಾರೆ.
ಕಳೆದ ಹಲವಾರು ತಿಂಗಳಿಂದ ಗಡಿಯಲ್ಲಿ ಇರುವ ದ್ವೇಷಮಯ ವಾತಾವರಣಕ್ಕೆ ಪೂರ್ಣವಿರಾಮ ಹಾಕಲು ಪಾಕಿಸ್ತಾನ ಬಯಸಿದೆ ಎಂದು ಹಿರಿಯ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ‘ಎಕ್ಸ್ಪ್ರೆಸ್ ಟ್ರಿಬೂನ್’ ವರದಿ ಮಾಡಿದೆ.
ಅಧಿಕಾರಿಗಳ ಮಟ್ಟದಲ್ಲಿ ಮಾಧ್ಯಮಗಳಿಗೆ ಪರಸ್ಪರ ವಿರೋಧದ ಹೇಳಿಕೆ ನೀಡುವುದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂತಹ ಹೇಳಿಕೆ ನೀಡುವುದನ್ನು ತಡೆಯಬೇಕು ಎಂಬ ಪ್ರಸ್ತಾವವನ್ನು ಪಾಕಿಸ್ತಾನ ಮಂಡಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ಏಳು ತಿಂಗಳ ಹಿಂದೆ ದೆಹಲಿಯಲ್ಲಿ ಇರುವ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ಕಾಶ್ಮೀರ ಪ್ರತ್ಯೇಕತಾ ವಾದಿಗಳ ಜತೆ ಮಾತುಕತೆ ನಡೆಸಿದ್ದರಿಂದ ಭಾರತ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ರದ್ದುಪಡಿಸಿತ್ತು. ಜೈಶಂಕರ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ತಕ್ಷಣ ನಾಟಕೀಯ ಫಲಿತಾಂಶ ದೊರಕುತ್ತದೆ ಎಂಬ ನಿರೀಕ್ಷೆ ಇಲ್ಲ ಎನ್ನಲಾಗಿದೆ,
ಗುಣಾತ್ಮಕ ಬದಲಾವಣೆ: ಕಳೆದ ವರ್ಷ ಕಾಬೂಲ್ನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದ್ವಿಪಕ್ಷೀಯ ಸಂಬಂಧದಲ್ಲಿ ಅದರಲ್ಲೂ ಭದ್ರತೆಯ ವಿಚಾರದಲ್ಲಿ ಗುಣಾತ್ಮಕ ಬದಲಾವಣೆ ಆಗಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದಲ್ಲಿಯ ಆಫ್ಘಾನಿಸ್ತಾನದ ರಾಯಭಾರಿ ಜನಾನ ಮೊಸಾಜಾಯಿ ಜತೆ ಮಾತನಾಡಿದ ಷರೀಫ್ ಅವರು, ಆಫ್ಘಾನಿಸ್ತಾನದಲ್ಲಿ ಹಿಮಕುಸಿತದಿಂದ ಆಗಿರುವ ಅನಾಹುತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.