ವಿಶ್ವಸಂಸ್ಥೆ (ಪಿಟಿಐ): ಶ್ರೀಲಂಕಾದಲ್ಲಿ 2009ರಲ್ಲಿ ನಡೆದಿದ್ದ ಜನಾಂಗೀಯ ಸಮರದ ಕೊನೆಯ ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಿಶ್ವಸಂಸ್ಥೆ ವಿಫಲವಾಗಿತ್ತು ಎಂದು ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಒಪ್ಪಿಕೊಂಡಿದ್ದಾರೆ.
ವಿಶ್ವಸಂಸ್ಥೆಯ 68ನೇ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಸಂದರ್ಭದಲ್ಲಿ ಬಾನ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಕೂಡ ಈ ವೇಳೆ ಉಪಸ್ಥಿತರಿದ್ದರು.
ಶ್ರೀಲಂಕಾದಲ್ಲಿ ವಿಶ್ವಸಂಸ್ಥೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಅಧ್ಯಯನ ನಡೆಸಲು ನೇಮಿಸಲಾಗಿದ್ದ ಆಂತರಿಕ ಸಮಿತಿಯು ‘ವ್ಯವಸ್ಥೆ ವಿಫಲ’ಗೊಂಡಿರುವುದರ ಬಗ್ಗೆ ಪ್ರಸ್ತಾಪಿಸಿದೆ. ಸದಸ್ಯ ರಾಷ್ಟ್ರಗಳು ಕೂಡ ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಗೆ ಬೆಂಬಲ ನೀಡಲಿಲ್ಲ. ನಮ್ಮ ಯೋಜನೆ, ಕಾರ್ಯಕ್ರಮಗಳನ್ನು ಅಲ್ಲಿ ಪೂರ್ಣವಾಗಿ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಬಾನ್ ಹೇಳಿದ್ದಾರೆ.
ಎಲ್ಟಿಟಿಇ ವಿರುದ್ಧ ಶ್ರೀಲಂಕಾದಲ್ಲಿ ಸೇನೆ ಕೈಗೊಂಡಿದ್ದ ಯುದ್ಧದ ಸಂದರ್ಭದಲ್ಲಿ ವಿಶ್ವಸಂಸ್ಥೆ ಕೈಗೊಂಡಿದ್ದ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಬಾನ್, 2012ರಲ್ಲಿ ಆಂತರಿಕ ಪರಿಶೀಲನಾ ಸಮಿತಿ (ಐಆರ್ಪಿ) ನೇಮಿಸಿದ್ದರು.