ಕೇಂದ್ರ ಸರ್ಕಾರ ರೂಪಿಸಿ ಜಾರಿಗೊಳಿಸಿರುವ ಭೂಸ್ವಾಧೀನ ಕಾಯ್ದೆಗೆ ಅನುಗುಣವಾಗಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ‘ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ನಿರ್ಮಾಣ ಮತ್ತು ಪುನರ್ವಸತಿ (ಕರ್ನಾಟಕ) ನಿಯಮಗಳು -2014’ರ ಕರಡನ್ನು ಶನಿವಾರ (21 ಜೂನ್, 2014) ಪ್ರಕಟಿಸಿದೆ. ಈ ಮಾಹಿತಿ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಜೊತೆಗೆ ಈ ಕರಡು ನಿಯಮಗಳ ಪ್ರತಿ ಕರ್ನಾಟಕ ಕಂದಾಯ ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿದೆಯೆಂದು ಪತ್ರಿಕಾ ವರದಿಗಳು ಹೇಳುತ್ತಿವೆ. ಯಾವ ವರದಿಯೂ ನಿರ್ದಿಷ್ಟ ಯುಆರ್ಎಲ್ ಅಥವಾ ಅಂತರ್ಜಾಲ ವಿಳಾಸವನ್ನು ನೀಡಿಲ್ಲ. ಸರ್ಕಾರವೂ ತನ್ನ ಪ್ರಕಟಣೆಯಲ್ಲಿ ಈ ವಿವರವನ್ನು ಒದಗಿಸುವ ಗೋಜಿಗೆ ಹೋಗಿಲ್ಲ ಅನ್ನಿಸುತ್ತದೆ.
ಸರ್ಕಾರದ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಗೂಗಲಿಸಿ ಕಂದಾಯ ಇಲಾಖೆಯ ವೆಬ್ಸೈಟ್ ಹುಡುಕಿದರೆ ಸಿಗುವುದು ಭೂದಾಖಲೆಗಳನ್ನು ಕಂಪ್ಯೂಟರೀಕರಿಸಿದ ‘ಭೂಮಿ’ ಯೋಜನೆಯ ವೆಬ್ಸೈಟ್(www.bhoomi.karnataka.gov.in/landrecordsonweb/). ಗೂಗಲ್ ಅನ್ನು ನಂಬದೆ ಕರ್ನಾಟಕ ಸರ್ಕಾರದ ಅಧಿಕೃತ ಪೋರ್ಟಲ್ ಆದ www.karnataka.gov.inನಲ್ಲಿ ನೀಡಲಾಗಿರುವ ವಿವಿಧ ಇಲಾಖೆಗಳ ಅಧಿಕೃತ ವೆಬ್ಸೈಟ್ಗಳ ಪಟ್ಟಿಯಲ್ಲಿ ಕಂದಾಯ ಇಲಾಖೆಯನ್ನು ಆರಿಸಿಕೊಂಡರೆ ಅಲ್ಲಿ ಮೂರು ಆಯ್ಕೆಗಳಿವೆ. ಮೊದಲನೆಯದ್ದು ‘ಭೂಮಿ’ ಯೋಜನೆಯ ವೆಬ್ಸೈಟ್, ಎರಡನೆಯದ್ದು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ವೆಬ್ಸೈಟ್, ಮೂರನೆಯದ್ದು ‘ಅಟಲ್ಜಿ ಜನಸ್ನೇಹಿ ಕೇಂದ್ರ’ ಅರ್ಥಾತ್ ನಾಡ ಕಚೇರಿಗಳಿಗೆ ಸಂಬಂಧಿಸಿದ ವೆಬ್ಸೈಟ್. ಈ ಮೂರೂ ವೆಬ್ಸೈಟ್ಗಳು ಕಂದಾಯ ಇಲಾಖೆಯ ಅಡಿಯಲ್ಲಿಯೇ ಬರುತ್ತವೆ ಎಂದು ಭಾವಿಸಿ ಮೂರನ್ನೂ ಶೋಧಿಸಿದಾಗಲೂ ಕರ್ನಾಟಕ ಸರ್ಕಾರ ರೂಪಿಸಿರುವ ಹೊಸ ಭೂಸ್ವಾಧೀನ ನಿಯಮಗಳ ಕರಡು ಕಾಣಿಸಲೇ ಇಲ್ಲ.
ಸರ್ಕಾರಿ ಇಲಾಖೆಗಳಲ್ಲಿ ಅತ್ಯಂತ ಹಳೆಯ ಇಲಾಖೆಯೊಂದಿದ್ದರೆ ಅದು ಕಂದಾಯ ಇಲಾಖೆ. ಭೂಕಂದಾಯವೇ ಸರ್ಕಾರಗಳ ಮುಖ್ಯ ಆದಾಯವಾಗಿದ್ದ ಕಾಲದಲ್ಲಿ ರೂಪುಗೊಂಡ ಈ ಇಲಾಖೆ ರಾಜರ ಆಡಳಿತ, ವಸಾಹತು ಶಾಹಿ ಆಡಳಿತವನ್ನು ದಾಟಿ ಬಂದು ಸ್ವಾತಂತ್ರ್ಯೋತ್ತರ ಭಾರತಕ್ಕೂ ಬಂತು. ತಾಲೂಕು ದಂಡಾಧಿಕಾರಿಯಾಗಿರುವ ತಹಶೀಲ್ದಾರ್ ಕಂದಾಯ ಇಲಾಖೆಗೆ ಸೇರಿದವರು, ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೂಡಾ ಕಂದಾಯ ಇಲಾಖೆಗೆ ಸೇರಿದವರೇ. ಜಿಲ್ಲೆಯ ಇತರ ಎಲ್ಲಾ ಇಲಾಖೆಗಳ ಮೇಲೂ ಜಿಲ್ಲಾಧಿಕಾರಿಗೆ ಒಂದು ಬಗೆಯ ನಿಯಂತ್ರಣವಿರುತ್ತದೆ. ಈ ಕಾರಣದಿಂದಾಗಿಯೇ ಕಂದಾಯ ಇಲಾಖೆಯನ್ನು ಎಲ್ಲಾ ಇಲಾಖೆಗಳ ತಾಯಿ ಎಂದೂ ಕರೆಯುತ್ತಾರೆ.
ಭಾರತದ ನಾಗರಿಕನೊಬ್ಬನಿಗೆ ಕಂದಾಯ ಇಲಾಖೆಯ ಜೊತೆಗಿನ ಸಂಬಂಧ ಅವನ ಹುಟ್ಟಿನೊಂದಿಗೇ ಆರಂಭವಾಗಿಬಿಡುತ್ತದೆ. ಒಬ್ಬನ ಪೌರತ್ವವನ್ನು ಖಾತರಿ ಪಡಿಸುವುದರಿಂದ ಆರಂಭಿಸಿ ಅವನ ಜಾತಿ, ಆದಾಯ, ಧರ್ಮ ಎಲ್ಲದಕ್ಕೂ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಪಡೆಯಬೇಕಿರುವುದು ಇದೇ ಇಲಾಖೆಯಿಂದ. ರೈತರಿಗೂ ಕಂದಾಯ ಇಲಾಖೆಗೂ ಇರುವ ಸಂಬಂಧ ಇನ್ನೂ ದೊಡ್ಡದು. ತಮ್ಮ ಜಮೀನುಗಳ ದಾಖಲೆಗಳಿಂತ ಆರಂಭಿಸಿ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಆಗುವ ಬೆಳೆ ನಾಶಕ್ಕೆ ಪರಿಹಾರ ಪಡೆಯುವುದಕ್ಕೂ ಇದೇ ಇಲಾಖೆಯನ್ನು ಸಂಪರ್ಕಿಸಬೇಕು. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಿಂದ ತೊಡಗಿ ಚುನಾವಣೆಗಳನ್ನು ನಡೆಸುವ ತನಕದ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆಯನ್ನು ನಡೆಸುವುದೂ ಇದೇ ಇಲಾಖೆಯ ಅಧಿಕಾರಿಗಳು. ಸರಳವಾಗಿ ಹೇಳಬೇಕೆಂದರೆ ಜನರಿಗೆ ಅಗತ್ಯವಾಗಿರುವ ಅನೇಕ ಮಾಹಿತಿಗಳು ಈ ಇಲಾಖೆಗೆ ಸಂಬಂಧಿಸಿದ್ದು. ಇಷ್ಟಾಗಿಯೂ ಕಂದಾಯ ಇಲಾಖೆಯ ಒಟ್ಟೂ ಕೆಲಸವನ್ನು ವಿವರಿಸುವ ಮತ್ತು ಅದು ಆಗಾಗ ಹೊರಡಿಸುವ ಸುತ್ತೋಲೆ, ಆದೇಶ ಇತ್ಯಾದಿಗಳನ್ನು ಒಂದೆಡೆ ನೀಡುವ ಒಂದು ವೆಬ್ಸೈಟ್ ಇಲ್ಲ.
ಕಂದಾಯ ಇಲಾಖೆಗೆ ವೆಬ್ಸೈಟ್ ಇಲ್ಲ ಎಂದರೆ ಅದು ತಂತ್ರಜ್ಞಾನಕ್ಕೆ ವಿಮುಖವಾಗಿದೆ ಎಂದು ಭಾವಿಸಬೇಕಾಗಿಲ್ಲ. ಭೂದಾಖಲೆಗಳ ಗಣಕೀಕರಣದಲ್ಲಿ ಭಾರತದಲ್ಲೇ ಮೊದಲ ಹೆಜ್ಜೆಯನ್ನಿಟ್ಟದ್ದು ಕರ್ನಾಟಕದ ಕಂದಾಯ ಇಲಾಖೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆಗಳೂ ದೊರೆತಿವೆ. ಅದರ ಹಿಂದೆಯೇ ನೋಂದಣಿ ಪ್ರಕ್ರಿಯೆಯನ್ನು ಗಣಕೀಕರಣಗೊಳಿಸ ಖ್ಯಾತಿಯೂ ಇದೇ ಇಲಾಖೆಗೆ ಸೇರಿದೆ. ಭೂದಾಖಲೆಗಳನ್ನು ನೀಡುವ ‘ಭೂಮಿ’ ಮತ್ತು ನೋಂದಣಿ ಪ್ರಕ್ರಿಯೆಗೆ ಬಳಸುವ ‘ಕಾವೇರಿ’ ತಂತ್ರಾಂಶಗಳಿಗೆ ಪರಸ್ಪರ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಅಷ್ಟು ಸಾಲದು ಎಂಬಂತೆ ವಿವಿಧ ಪ್ರಮಾಣ ಪತ್ರಗಳನ್ನು ವಿತರಿಸುವ ಕೆಲಸ ಕೂಡಾ ಈಗ ಕಂಪ್ಯೂಟರೀಕರಣಗೊಂಡಿದೆ. ಆದರೂ ಕಂದಾಯ ಇಲಾಖೆಗೆ ವೆಬ್ಸೈಟ್ ಮಾತ್ರ ಇಲ್ಲ!
ಕಂದಾಯ ಇಲಾಖೆಗೆ ವೆಬ್ಸೈಟ್ ಇಲ್ಲದೇ ಇರುವುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಹೀಗಾಗುವುದಕ್ಕೆ ಮಾಹಿತಿಯನ್ನು ಜನರಿಗೆ ಒದಗಿಸುವುದು ಅಪಾಯಕಾರಿ ಎಂದು ಭಾವಿಸಿರುವುದ ವರ್ಗವೊಂದು ಕೆಲಸ ಮಾಡುತ್ತಿದೆ ಎಂದು ಊಹಿಸುವುದು ತಪ್ಪಾಗಲಾರದು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಭೂಸ್ವಾಧೀನ ಕಾಯ್ದೆಗೆ ಅನುಗುಣವಾಗಿ ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಗಳು ಕರ್ನಾಟಕದ ಎಲ್ಲಾ ರೈತರಿಗೂ ಅವರೊಂದಿಗೆ ಸಂಬಂಧಗಳನ್ನಿಟ್ಟುಕೊಂಡಿರುವ ವಕೀಲರಿಗೆ ತಲುಪಬೇಕಿರುವುದು ಅಗತ್ಯ. ಅದು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿದ್ದರೆ ಎಲ್ಲರಿಗೂ ಸುಲಭದಲ್ಲಿ ಸಿಗುತ್ತಿತ್ತು. ಆದರೀಗ ಅದು ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಕರಡನ್ನೇ ಓದದೆ ಅದಕ್ಕೆ ಆಕ್ಷೇಪಣೆ ಸಲ್ಲಿಸುವುದು ಹೇಗೆ ಎಂಬುದನ್ನು ಕಂದಾಯ ಇಲಾಖೆ ಅಧಿಕಾರಿಗಳೇ ವಿವರಿಸಬೇಕು.
ಇದು ಕೇವಲ ಭೂಸ್ವಾಧೀನ ಕಾಯ್ದೆಯ ಹೊಸ ನಿಯಮಾವಳಿಗಳ ಕರಡು ಪ್ರಕಟಣೆಗೆ ಸಂಬಂಧಿಸಿದ ಸಮಸ್ಯೆಯಲ್ಲ. ಸರ್ಕಾರದ ಎಲ್ಲಾ ಇಲಾಖೆಗಳ ಮಾಹಿತಿಗೆ ಸಂಬಂಧಿಸಿದ ಸಮಸ್ಯೆ. ಉದಾಹರಣೆಗೆ ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದುಳಿದ ವರ್ಗಗಳಿಗೆ ಲಭ್ಯವಿರುವ ಮೀಸಲಾತಿಯನ್ನು ಪಡೆಯಬೇಕಾದರೆ ಅದಕ್ಕೆ ನಿರ್ದಿಷ್ಟ ನಮೂನೆಯೊಂದರಲ್ಲಿ ‘ಹಿಂದುಳಿದ ವರ್ಗಗಳಿಗೆ ಸೇರಿರುವ ಪ್ರಮಾಣ ಪತ್ರ’ ಪಡೆಯಬೇಕಾಗುತ್ತದೆ. ರಾಜ್ಯದ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಜಾತಿಗಳಿಗೂ ಕೇಂದ್ರ ಪಟ್ಟಿಯಲ್ಲಿರುವ ಜಾತಿಗಳಿಗೂ ವ್ಯತ್ಯಾಸವಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರಗಳಿಗಾಗಿ ರೂಪಿಸಿರುವ ತಂತ್ರಾಂಶದಲ್ಲಿ ಈ ಎಲ್ಲಾ ವಿವರಗಳೂ ಇವೆ. ಆದರೆ ಕರ್ನಾಟಕದ ಅನೇಕ ನಾಡ ಕಚೇರಿಗಳಲ್ಲಿ ಅರ್ಜಿ ಸ್ವೀಕರಿಸುವ ಎಷ್ಟು ಮಂದಿ ಸಿಬ್ಬಂದಿಗೆ ಈ ವಿಚಾರ ತಿಳಿದಿದೆ? ತಮಗೆ ಗೊತ್ತಿಲ್ಲದ ಎಲ್ಲವನ್ನೂ ಅವರು ‘ಇದು ಸಾಧ್ಯವಿಲ್ಲ’ ಎಂದು ಹೇಳುತ್ತಾರಷ್ಟೆ.
ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಕೇಂದ್ರ ಮತ್ತು ರಾಜ್ಯ ಪಟ್ಟಿಯಲ್ಲಿರುವ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಅನೇಕ ಸುತ್ತೋಲೆಗಳನ್ನು ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳಿವೆ. ಇದನ್ನೆಲ್ಲಾ ‘ಜನಸ್ನೇಹಿ ಕೇಂದ್ರ’ಗಳ ಸಿಬ್ಬಂದಿಗೆ ಅರ್ಥ ಮಾಡಿಸಬೇಕಾದರೆ ಕನಿಷ್ಠ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಬರಬೇಕಾಗುತ್ತದೆ. ಸರ್ಕಾರಿ ಸುತ್ತೋಲೆಗಳು, ಆದೇಶಗಳು ಇತ್ಯಾದಿಗಳೆಲ್ಲವೂ ಒಂದು ನಿರ್ದಿಷ್ಟ ಜಾಲತಾಣದಲ್ಲಿ ದೊರೆತರೆ ಅವುಗಳನ್ನು ಬಳಸಿಕೊಂಡಾದರೂ ಜನರು ಸರ್ಕಾರಿ ಸಿಬ್ಬಂದಿಯ ಜೊತೆಗೆ ಸೆಣಸಬಹುದಿತ್ತು. ಸುತ್ತೋಲೆ, ಆದೇಶ ಇತ್ಯಾದಿಗಳೆಲ್ಲವೂ ಒಂದೆಡೆ ಒದಗಿಸುವ ಯಾವ ಪ್ರಯತ್ನವನ್ನೂ ಕರ್ನಾಟಕ ಸರ್ಕಾರ ಮಾಡಿಲ್ಲ ಎಂದು ಹೇಳಲೂ ಸಾಧ್ಯವಿಲ್ಲ. ಹುಡುಕಾಟದಲ್ಲಿ ನಿಮಗೆ ನಿಜಕ್ಕೂ ನಂಬಿಕೆಯಿದ್ದರೆ ಸುತ್ತೋಲೆ ಮತ್ತು ಆದೇಶಗಳನ್ನು ಒದಗಿಸುವುದಕ್ಕಾಗಿಯೇ ಸರ್ಕಾರ ರೂಪಿಸಿರುವ ಒಂದು ವೆಬ್ಸೈಟ್ ನಮಗೆ ಕಾಣಸಿಗುತ್ತದೆ. ಅದರ ಯುಆರ್ಎಲ್ ಅಥವಾ ವೆಬ್ ವಿಳಾಸ ಹೀಗಿದೆ:http://202.138.105.13/svsearch/. ಇದನ್ನು ಹುಡುಕಿ ಕೊಡುವುದಕ್ಕೆ ಗೂಗಲ್ ಬಿಡಿ ದೇವರಿಗೂ ಕಷ್ಟ. ಕೊನೆಗೂ ನೀವಿದನ್ನು ಕಂಡುಕೊಂಡು ನಿಮಗೆ ಬೇಕಿರುವ ಇಲಾಖೆಯ ಬೇಕಿರುವ ಸುತ್ತೋಲೆ ಅಥವಾ ಆದೇಶವನ್ನು ಹುಡುಕಬೇಕೆಂದರೆ ಅದೂ ಸುಲಭವಲ್ಲ. ಅಂದಾಜಿನ ಮೇಲೆ ಹುಡುಕಿದರೆ ನಿಮಗೆ ಏನೂ ಸಿಗುವುದಿಲ್ಲ. ಅಂದರೆ ಕೇವಲ ಪದಗಳನ್ನು ಬಳಸಿ ಹುಡುಕುವುದು ಇದರಲ್ಲಿ ಅಸಾಧ್ಯ ಎನಿಸುವಷ್ಟು ಕಷ್ಟ. ಸುತ್ತೋಲೆಯ ದಿನಾಂಕ, ಇಲಾಖೆ, ವಿಷಯ ಇತ್ಯಾದಿಗಳು ಸರಿಯಾಗಿ ಗೊತ್ತಿದ್ದರೆ ಹುಡುಕಬಹುದು. ಆಗಲೂ ನಿಮಗೆ ಸಿಗುವುದು 2004ರಿಂದ ಈಚೆಗಿನ ಕೆಲವು ದಾಖಲೆಗಳು ಮಾತ್ರ.
ಮಾಹಿತಿಗಳನ್ನು ಚಕ್ರವ್ಯೂಹದೊಳಗೆ ಬಂಧಿಸಿಡುವ ಸರ್ಕಾರಿ ವರ್ತನೆ ವ್ಯಾಪಕವಾಗಿದ್ದರೂ ಇದಕ್ಕೆ ಸಂಪೂರ್ಣ ಅಪವಾದವೆನಿಸುವಂಥ ಕೆಲವು ಉದಾಹರಣೆಗಳೂ ಸಿಗುತ್ತವೆ. ಇಂಥದ್ದರಲ್ಲಿ ಒಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಆಡಳಿತದ ವೆಬ್ಸೈಟ್ (http://channarayapatna.kar.nic.in/). ಕರ್ನಾಟಕ ಯಾವ ತಾಲೂಕು ಆಡಳಿತಕ್ಕೂ ಇಂಥದ್ದೊಂದು ಅಧಿಕೃತ ವೆಬ್ಸೈಟ್ ಇಲ್ಲ. ಸರ್ಕಾರಿ ವ್ಯವಸ್ಥೆಯಾದ ಎನ್ಐಸಿ (ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್) ಬಳಸಿಕೊಂಡೇ ಈ ವೆಬ್ಸೈಟ್ ರೂಪಿಸಲಾಗಿದೆ. ತಾಲೂಕು ಕಚೇರಿಗೆ ಸಂಬಂಧಿಸಿದಂತೆ ಇದರಲ್ಲಿ ಸಂಪೂರ್ಣ ಮಾಹಿತಿಗಳು ಲಭ್ಯ. ಕಂದಾಯ ಇಲಾಖೆಯಿಂದ ತಾಲೂಕು ಕಚೇರಿಗೆ ಬಂದ ಸುತ್ತೋಲೆಗಳು, ಆದೇಶಗಳು ಮತ್ತಿತರ ಅಧಿಕೃತ ಮಾಹಿತಿಗಳನ್ನೆಲ್ಲಾ ಇಲ್ಲಿ ವಿಷಯವಾರು ನೀಡಲಾಗಿದೆ. ಜೊತೆಗೆ ತಾಲೂಕು ಕಚೇರಿ ಸಿಬ್ಬಂದಿಯ ಸಂಬಳದ ವಿವರಗಳನ್ನೂ ಇಲ್ಲಿ ನೋಡಬಹುದು. ತಹಶೀಲ್ದಾರ್ ಅವರ ಫೋಟೋ ಮತ್ತು ಮೊಬೈಲ್ ದೂರವಾಣಿ ಸಂಖ್ಯೆಯೂ ಇಲ್ಲಿದೆ. ಆದರೆ ಈ ವೆಬ್ಸೈಟ್ಗೆ ಮಾಹಿತಿಯನ್ನು ಊಡಿಸುವ ಈಗ ನಿಂತು ಹೋಗಿರುವಂತಿದೆ. ಈ ವೆಬ್ಸೈಟ್ನಲ್ಲಿರುವ ಮಾಹಿತಿಯಂತೆ ಚನ್ನರಾಯಪಟ್ಟಣದ ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು. ಅವರ ಫೋಟೋ ಕೂಡಾ ಇದೆ. ಆದರೆ ನಾಗರಾಜು ಅವರು ಚನ್ನರಾಯಪಟ್ಟಣದಿಂದ ಈ ವರ್ಷ ಫೆಬ್ರವರಿಯಲ್ಲೇ ವರ್ಗಾವಣೆಯಾಗಿದ್ದಾರೆ.
ಕರ್ನಾಟಕದ ಯಾವ ತಾಲೂಕಿಗೂ ಇಲ್ಲದ ಅಧಿಕೃತ ವೆಬ್ಸೈಟ್ ಚನ್ನರಾಯಪಟ್ಟಣ ತಾಲೂಕಿಗೆ ಹೇಗೆ ದೊರೆಯಿತು ಎಂದು ಶೋಧಿಸಿದಾಗ ಅನಾವರಣಗೊಂಡದ್ದು ವರಪ್ರಸಾದ್ ರೆಡ್ಡಿ ಎಂಬ ಉತ್ಸಾಹಿ ಯುವ ತಹಶೀಲ್ದಾರ್ ಒಬ್ಬರ ಪ್ರಯತ್ನ. ಚನ್ನರಾಯಪಟ್ಟಣ ತಾಲೂಕಿಗೊಂದು ಅಧಿಕೃತ ವೆಬ್ಸೈಟ್ ರೂಪಿಸಿ ಅದಕ್ಕೆ ಮಾಹಿತಿಯನ್ನು ಊಡಿಸಿದ್ದು ಈ ಯುವ ಅಧಿಕಾರಿ. ತಾಲೂಕು ಮಟ್ಟದಲ್ಲಿ ಜನಸಾಮನ್ಯರಿಗೆ ಅಗತ್ಯವಿರುವ ಎಲ್ಲಾ ಸುತ್ತೋಲೆ ಆದೇಶಗಳನ್ನು ಅವರು ಈ ವೆಬ್ಸೈಟ್ನಲ್ಲಿ ಒದಗಿಸಿದ್ದಾರೆ. 2012ರಲ್ಲಿ ಅವರು ಅಲ್ಲಿಂದ ವರ್ಗಾವಣೆಯಾದ ನಂತರ ಬಂದವರು ಈ ಕೆಲಸವನ್ನು ಮುಂದುವರಿಸಿದರು. ಡಾ.ಎಚ್.ಎಲ್.ನಾಗರಾಜು ಅವರು ವರ್ಗಾವಣೆಯಾದ ಮೇಲೆ ವೆಬ್ಸೈಟ್ಗೆ ಯಾವುದೇ ಹೊಸ ಮಾಹಿತಿ ಊಡಿಸಿದಂತಿಲ್ಲ. ಮಾಹಿತಿಯನ್ನು ಚಕ್ರವ್ಯೂಹದೊಳಗೆ ಅಡಗಿಸಿ ಹುಡುಕಿಕೊಳ್ಳಿ ಎಂದು ಸವಾಲು ಹಾಕುವ ಸರ್ಕಾರಿ ಮನೋವೃತ್ತಿಯ ಮಧ್ಯೆ ಇಂಥ ಪ್ರಯತ್ನಗಳು ಹೆಚ್ಚು ಕಾಲ ಬಾಳುವುದಿಲ್ಲ ಎಂಬುದಕ್ಕೂ ಚನ್ನರಾಯಪಟ್ಟಣ ತಾಲೂಕಿನ ವೆಬ್ಸೈಟ್ ಸಾಕ್ಷಿಯಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.