ಆ ಊರಿನಲ್ಲಿ ದೇವಿ ಜಾತ್ರೆ ಬಹಳ ಪ್ರಸಿದ್ಧವಾದದ್ದು. ಆ ಪ್ರತಿ ವರ್ಷ ಜಾತ್ರೆಯ ದಿನದಂದು ದೂರದೂರದಿಂದ ಜನರು ನಡೆದು ಬರುತ್ತಾರೆ, ಸಂಭ್ರಮಪಡುತ್ತಾರೆ. ಜಾತ್ರೆಯ ದಿನ ಬಂದಿತು. ರೈತ ಕೂಡ ಸಂಜೆಯಾದ ಮೇಲೆ ದೇವಸ್ಥಾನದ ಕಡೆಗೆ ಹೋಗುವುದೆಂದು ತೀರ್ಮಾನ ಮಾಡಿದ್ದ. ಪಾಪ! ಈ ವಯಸ್ಸಾದ ದನ ಕಣ್ಣು ಮುಚ್ಚಿಕೊಂಡು, ಮುಖವನ್ನು ಕೆಳಗೆ ಜೋಲಿಸಿಕೊಂಡು ಕುಳಿತಿತ್ತು. ಆಗ ಆದದ್ದು ಅನಾಹುತ. ದೇವಸ್ಥಾನದ ಕಡೆಗೆ ಹೋಗುತ್ತಿದ್ದ ಒಂದಷ್ಟು ತರುಣರು ತಾವು ತಂದಿದ್ದ ಪಟಾಕಿಗಳನ್ನು ಹೊಡೆಯತೊಡಗಿದರು. ಒಂದೇ ಸಲ ನೂರಾರು ಗುಂಡುಗಳು ಹಾರಿದಂತಾಯಿತು. ಆ ಭಾರೀ ಸದ್ದಿಗೆ ಎತ್ತಿನ ಗುಂಡಿಗೆ ಒಡೆದೇಹೋಯಿತು. ಅದಕ್ಕೆ ಪ್ರಪಂಚವೇ ಸಿಡಿದು ಹೋದಂತೆನಿಸಿತು. ಗಾಬರಿಯಿಂದ ಹಾರಿ ಹಗ್ಗ ಕಿತ್ತುಕೊಂಡು ದಿಕ್ಕು ತೋಚದೆ ಓಡತೊಡಗಿತು. ಸಂಜೆಯ ಮಬ್ಬು ಕತ್ತಲೆಯಲ್ಲಿ ಹೌಹಾರಿದ ಎತ್ತು ಸಿಕ್ಕಸಿಕ್ಕಲ್ಲಿ ಹಾರಾಡಿ ಓಡುತ್ತ ಹೊಲದ ಬದಿಗಿದ್ದ ಒಂದು ಹಾಳುಬಾವಿಯಲ್ಲಿ ಬಿದ್ದುಬಿಟ್ಟಿತು. ಕ್ಷಣಕಾಲ ಅದಕ್ಕೆ ತಾನು ಸತ್ತೇ ಹೋದೆ ಎನಿಸಿತು. ಆದರೆ ಅದೃಷ್ಟ ಚೆನ್ನಾಗಿತ್ತು, ಅಲ್ಲಲ್ಲಿ ಕೆಲವು ತರಚಿದ ಗಾಯಗಳನ್ನು ಬಿಟ್ಟರೆ ವಿಶೇಷ ಪೆಟ್ಟೇನೂ ಆಗಿರಲಿಲ್ಲ.