ಬೆಂಗಳೂರು, ಅ. 3– ವಿಧಾನಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯ ಅವರ ನೂತನ ಪ್ರತಿಮೆಯನ್ನು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ಇಂದು ವಿಧಾನ ಸೌಧದ ಪಶ್ಚಿಮ ದ್ವಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅನಾವರಣ ಮಾಡಿದರು.
ಈ ಹಿಂದಿದ್ದ ಪ್ರತಿಮೆ ಕೆಂಗಲ್ ಅವರನ್ನು ಹೋಲುತ್ತಿರಲಿಲ್ಲ ಎಂಬ ವ್ಯಾಪಕ ಅತೃಪ್ತಿ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ತೆಗೆದು ಈ ಪ್ರತಿಮೆಯನ್ನು ಸ್ಥಾಪಿಸಲಾಯಿತು. ತಿರುವನಂತಪುರದಲ್ಲಿ ಶಿಲ್ಪಿ ಕುಞರಾಮನ್ ಅವರು ಕೆತ್ತಿರುವ ಈ ಪ್ರತಿಮೆಗೆ 8.5 ಲಕ್ಷ ರೂಪಾಯಿ ವೆಚ್ಚವಾಗಿದ್ದು ಸಾಗಣೆ ಖರ್ಚೂ ಸೇರಿ ಒಟ್ಟು ವೆಚ್ಚ 13.5 ಲಕ್ಷ ರೂಪಾಯಿ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸಾವಿರ ಮದ್ಯದಂಗಡಿ ‘ಬಂದ್’
ಬೆಂಗಳೂರು, ಅ. 3– ಶಾಲಾ– ಕಾಲೇಜು, ದೇವಸ್ಥಾನಗಳ ಸಮೀಪ ಇರುವ ಮದ್ಯದ ಅಂಗಡಿಗಳ ಪರವಾನಗಿಯನ್ನು ನವೀಕರಿಸದಿರಲು ಸರ್ಕಾರ ನಿರ್ಧರಿಸಿರುವು ದರಿಂದ ರಾಜ್ಯದ ಒಂದು ಸಾವಿರಕ್ಕೂ ಹೆಚ್ಚು ಮದ್ಯದ ಅಂಗಡಿಗಳು ಇಂದಿನಿಂದ ‘ಬಂದ್’ ಆಗಲಿವೆ.
ರಾಜ್ಯದಲ್ಲಿ ಹಬ್ಬಿದ ಪ್ಲೇಗ್ ಮಾರಿ
ಬೆಂಗಳೂರು, ಅ. 3– ರಾಜ್ಯದಲ್ಲಿ ಈವರೆಗೆ ಪ್ಲೇಗ್ ರೋಗಕ್ಕೆ ಒಬ್ಬ ವ್ಯಕ್ತಿ ಬಲಿಯಾಗಿದ್ದು, ವಿವಿಧ ಭಾಗಗಳಲ್ಲಿ ಹತ್ತೊಂಬತ್ತು ಜನರು ರೋಗದ ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ. ಎಲ್ಲರನ್ನೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.