ನವದೆಹಲಿ, ಅ. 2 (ಯುಎನ್ಐ)– ಇಪ್ಪತ್ತನೇ ಶತಮಾನದ ಮಹಾನ್ ಮಾನವತಾವಾದಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ತತ್ವಾದರ್ಶಗಳನ್ನು ನಿಷ್ಠೆಯಿಂದ ಪಾಲಿಸುವಂತೆ ಹಾಗೂ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಬಲಪಡಿಸುವಂತೆ ರಾಷ್ಟ್ರಪತಿ ಡಾ. ಶಂಕರ ದಯಾಳ್ ಶರ್ಮಾ ಇಂದು ಕರೆ ನೀಡಿದರು.
ಗಾಂಧೀಜಿಯವರ 125ನೇ ಜಯಂತಿ ಅಂಗವಾಗಿ ಇಲ್ಲಿನ ವಿಜ್ಞಾನ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಡಾ. ಶರ್ಮಾ ಅವರು ಮಾತನಾಡಿದರು. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಸಮಾಜದಲ್ಲಿ ಅವರ ತತ್ವಗಳು ವಿಶ್ವಕ್ಕೇ ದಾರಿದೀಪವಾಗಿವೆ ಎಂದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ನೊಬೆಲ್ ಶಾಂತಿ ಪ್ರಶಸ್ತಿಯ ಮಾದರಿಯಲ್ಲೇ ‘ಗಾಂಧಿ ಶಾಂತಿ’ ಪ್ರಶಸ್ತಿಯನ್ನು ಸ್ಥಾಪಿಸುವುದಾಗಿ ಪ್ರಕಟಿಸಿದರು.
ಮುಂದಿನ ವರ್ಷದಿಂದ ಸಾರಾಯಿ ಮಾರಾಟ ರದ್ದು
ಬೆಂಗಳೂರು, ಅ. 2– ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು, ಮುಂದಿನ ಆರ್ಥಿಕ ವರ್ಷದಿಂದ ಸಾರಾಯಿ ತಯಾರಿಕೆ ಹಾಗೂ ಮಾರಾಟ ಸಂಪೂರ್ಣ ರದ್ದುಗೊಳಿಸುವುದಾಗಿ ಘೋಷಿಸಿದರು.
ಎರಡು ವರ್ಷದ ಅಧಿಕಾರದ ಅವಧಿಯಲ್ಲಿ ತಾವು ಸಾರಾಯಿ ತಯಾರಿಕೆ ಹಾಗೂ ಮಾರಾಟವನ್ನು ಶೇಕಡ 25ರಷ್ಟು ಕಡಿತಗೊಳಿಸುವಲ್ಲಿ ಯಶಸ್ವಿಯಾಗಿರುವುದಾಗಿ ನುಡಿದರು.