ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಮೃದ್ಧಿ ಮರಳೀತೇ ಮೇಲ್ಮಣ್ಣಿಗೆ? ಡಾ. ಕೇಶವ ಎಚ್ ಕೊರ್ಸೆ ಲೇಖನ

ಕಸ, ಕೊಳಚೆ, ಕೃಷಿತ್ಯಾಜ್ಯಗಳನ್ನೆಲ್ಲ ಗೊಬ್ಬರವಾಗಿಸಿ ಮೇಲ್ಮಣ್ಣಿನ ಫಲವತ್ತತೆ ಹೆಚ್ಚಿಸಲೇಬೇಕಿದೆ ಈಗ
Last Updated 5 ಫೆಬ್ರುವರಿ 2023, 23:45 IST
ಅಕ್ಷರ ಗಾತ್ರ

ಒಂದು ಹಿಡಿ ಮಣ್ಣನ್ನು ಕೈಯಲ್ಲಿ ಹಿಡಿದು ಅದರ ಗುಣಾವ ಗುಣಗಳನ್ನೆಲ್ಲ ಖಚಿತವಾಗಿ ಊಹಿಸಬಲ್ಲ ಸಾಮರ್ಥ್ಯದ ರೈತರು ನಾಡಿನಲ್ಲಿದ್ದಾರೆ. ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ಒಯ್ದರೆ, ಅದರ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಲಕ್ಷಣಗಳನ್ನೆಲ್ಲ ವಿಶ್ಲೇಷಿಸಿ, ಮೇಲ್ಮಣ್ಣಿನ ಸಂಪೂರ್ಣ ಜಾತಕವನ್ನೂ ಪಡೆಯಬಹುದು. ಆದರೆ, ಕೆಲವು ದಶಕಗಳಿಂದ ಭೂಸಾರ ಅದೆಷ್ಟು ನಷ್ಟವಾಗುತ್ತಿದೆ ಎಂದರೆ, ಹೊಲ, ತೋಟಗಳಿಗೆ ಕಾಲಿಟ್ಟೊಡನೆ, ಮಣ್ಣು ಬಡವಾಗುತ್ತಿರುವುದನ್ನು ಮೇಲ್ನೋಟದಲ್ಲಿಯೇ ಗುರುತಿಸಿಬಿಡಬಹುದು! ಸ್ವಾತಂತ್ರ್ಯ ಬಂದ ನಂತರ ಆಹಾರ ಉತ್ಪಾದನೆ ಹೆಚ್ಚಿಸಲೆಂದು ದೇಶದಲ್ಲಿ ಅಳ ವಡಿಸಿಕೊಂಡ ಹಸಿರುಕ್ರಾಂತಿ ತಂತ್ರಜ್ಞಾನಗಳನ್ನು ಆನಂತರದಲ್ಲೂ ದಿಕ್ಕುದೆಸೆಯಿಲ್ಲದೆ ವಿಸ್ತರಿಸಿದ್ದರ ಫಲಶ್ರುತಿಯಿದು.

ಮಿತಿಮೀರಿದ ರಸಗೊಬ್ಬರ ಬಳಕೆಯೂ ಅದರ ಘೋರ ಪರಿಣಾಮಗಳಲ್ಲಿ ಒಂದು. ಬೆಳೆಗಳಿಗೆ ಅಗತ್ಯವಾದ ಹಲವು ಪೋಷಕಾಂಶಗಳಲ್ಲಿ ಸಾರಜನಕ, ರಂಜಕ ಹಾಗೂ ಪೊಟ್ಯಾಶ್‌ (ಎನ್.ಪಿ.ಕೆ.) ಮಾತ್ರ ಮುಖ್ಯವೆಂದು ಪರಿಗಣಿಸಿ, ಅವುಗಳ ರಸಗೊಬ್ಬರವನ್ನಷ್ಟೇ ಅಧಿಕವಾಗಿ ನೀಡತೊಡಗಿದೆವು. ಮಿತಿಯಿಲ್ಲದೆ ಸುರಿಯುವ ಎನ್.ಪಿ.ಕೆ.ಯಿಂದಾಗಿ, ಹೆಚ್ಚುವರಿ ಸಾರಜನಕವು ಹರಿಯುವ ನೀರಿನ ಜೊತೆ ಕೆರೆ, ನದಿಗಳನ್ನು ಸೇರಿ ಹುಲುಸಾದ ಕಳೆ ಬೆಳೆಸುತ್ತಿದೆ!

ರಂಜಕವು ಹೆಚ್ಚಾಗಿ ಮಣ್ಣಿನ ಸೂಕ್ಷ್ಮಾಣುಜೀವಿ ಲೋಕವನ್ನು ನಾಶ ಮಾಡುತ್ತಿದೆ. ಅತಿಯಾದ ಪೊಟ್ಯಾಶ್ ಬಳಕೆಯು ರಸಸಾರವನ್ನು ಹೆಚ್ಚಿಸಿ ಮಣ್ಣನ್ನು ಬರಡಾಗಿಸು ತ್ತಿದೆ. ರಸಗೊಬ್ಬರದ ಪರಿಣಾಮ ಹಿಗ್ಗಿಸಲು ಒಣ ಭೂಮಿಯಲ್ಲೂ ಅಗತ್ಯ ಮೀರಿ ನೀರಾವರಿ ಕೈಗೊಂಡೆವು. ಹೊಳೆ, ಕೆರೆ, ಕಾಲುವೆಗಳ ನೀರು ಸಾಲದಾಗಿ, ಕೊಳವೆ ಬಾವಿಗಳು ವ್ಯಾಪಕವಾಗಿ ಅಂತರ್ಜಲವು ಅಪಾಯಕಾರಿ ಹಂತಕ್ಕೆ ಕುಸಿಯುತ್ತಿದೆ. ಅತಿ ನೀರಾವರಿಯು ಮಣ್ಣನ್ನು ಜೌಗನ್ನಾಗಿಸಿ, ಕ್ಷಾರತೆ ಹೆಚ್ಚಿಸುತ್ತಿದೆ. ರಸಸಾರ, ಪೋಷಕಾಂಶ, ನೀರು ಹಿಡಿದಿಡುವ ಗುಣ, ಸೂಕ್ಷ್ಮಾಣು ಜೀವಿಗಳ ಲಭ್ಯತೆ, ಇಳುವರಿ- ಈ ಯಾವುದನ್ನು ಪರಿಗಣಿಸಿ ದರೂ ಮಣ್ಣಿನ ಸಾಮರ್ಥ್ಯ ತೀವ್ರವಾಗಿ ಕುಸಿದಿರು
ವುದನ್ನು ರೈತರು ಈಗ ಅನುಭವಿಸುತ್ತಿದ್ದಾರೆ.

ಮಣ್ಣಿನ ಸಾರ ನಾಶವಾಗುತ್ತಿರುವುದು ಈಗ ಕೃಷಿ ಕ್ಷೇತ್ರದ ಒಂದು ದೊಡ್ಡ ಬಿಕ್ಕಟ್ಟೇ ಸರಿ. ಹೀಗಾಗಿಯೇ ‘ಮೇಲ್ಮಣ್ಣು ಸಂರಕ್ಷಿಸಿ’ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿರು ವುದು. ಭವಿಷ್ಯದಲ್ಲಿ ಇದನ್ನು ಸುಸ್ಥಿತಿಗೆ ತರಬೇಕೆಂದರೆ, ದಶಕಗಳ ಹಿಂದಿನ ಆರೋಗ್ಯಕರ ಸ್ಥಿತಿಗೆ ಮಣ್ಣನ್ನು ಹಿಂತಿರುಗಿಸಲೇಬೇಕಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಮಂಡಿಸಿರುವ ಮುಂಗಡಪತ್ರದಲ್ಲಿರುವ ‘ಪ್ರಧಾನಮಂತ್ರಿ- ಪ್ರಣಾಮ’ ಎಂಬ ನೂತನ ಯೋಜನೆಯ ಹಿಂದಿರುವುದು ಈ ಚಿಂತನೆ. ಮಣ್ಣಿನ ಸಾಮರ್ಥ್ಯವನ್ನು ಬಹು ಆಯಾಮ ಗಳಲ್ಲಿ ಪುನರುಜ್ಜೀವನಗೊಳಿಸುವ, ಕೃತಕ ರಸಗೊಬ್ಬರಗಳ ಅತಿಬಳಕೆಯ ಅನಾಹುತಗಳನ್ನು ನಿಯಂತ್ರಿ ಸಲು, ಕೃಷಿಕ್ಷೇತ್ರವನ್ನು ಹಂತಹಂತವಾಗಿ ಸಜ್ಜುಗೊಳಿಸುವ ಈ ಯೋಜನೆ ಸ್ವಾಗತಾರ್ಹವೇ. ಆದರೆ, ಈ ಬಗೆಯ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುವ ಒಂದು ಪ್ರಮುಖ ಸವಾಲಿದೆ. ಕೃತಕ ರಾಸಾಯನಿಕ ಬಳಸದೆ ಕೃಷಿಯು ಸಾಧ್ಯವೇ ಇಲ್ಲ ಎಂದು ಬಲವಾಗಿ ನಂಬುವವರ ಪ್ರತಿರೋಧವದು. ರಾಜಕೀಯವರ್ಗ, ಅಧಿಕಾರಶಾಹಿ, ಉದ್ಯಮಿಗಳು, ಕೃಷಿವಿಜ್ಞಾನಿಗಳು- ಎಲ್ಲೆಡೆಯೂ ಈ ಮನಃಸ್ಥಿತಿಯವರಿದ್ದಾರೆ. ಹಿಂದಿನ ವರ್ಷ ಶ್ರೀಲಂಕಾ ಅನುಭವಿಸಿದ ಆರ್ಥಿಕ ಕುಸಿತಕ್ಕೆ ಇದುವೇ ಕಾರಣ ಎಂದೂ ಅವರು ವಾದಿಸಿಯಾರು. ಆದರೆ ಅದು ತೀರಾ ಸರಳೀಕೃತ ತಿಳಿವಳಿಕೆ ಮತ್ತು ಅರ್ಧಸತ್ಯ ಎಂಬುದನ್ನು ಇತ್ತೀಚಿನ ಅಧ್ಯಯನಗಳು ಸಾಬೀತುಮಾಡಿವೆ. ದಶಕಗಳ ಕಾಲ ಸತತವಾಗಿ ಆ ದೇಶವು ಕೈಗೊಂಡ ತಪ್ಪು ಆರ್ಥಿಕ ನೀತಿ ನಿರ್ಧಾರಗಳು, ಭ್ರಷ್ಟಾಚಾರ, ಜಾಗತಿಕ ರಾಜಕಾರಣ- ಇವೆಲ್ಲವುಗಳಿಂದ ಉಂಟಾದ ಆ ವಿದ್ಯಮಾನವು ಭಿನ್ನ ಸಂದರ್ಭದ್ದು ಎಂಬುದನ್ನು ಗಮನಿಸಬೇಕಿದೆ.

ಮಣ್ಣಿನ ಸಹಜಗುಣಗಳನ್ನೆಲ್ಲ ಕಸಿಯುವ ಕೃತಕ ರಸ ಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಸೂಕ್ತ ಪೋಷಕಾಂಶ ಗಳನ್ನು ಪೂರೈಸಬಲ್ಲ ಹಲವಾರು ಜೈವಿಕ ವಿಧಾನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ದಶಕಗಳಲ್ಲಾಗಿವೆ. ಅಂಥವನ್ನು ಅನುಸರಿಸಿ ಯಶಸ್ಸು ಕಂಡ ಪ್ರಗತಿಪರ ರೈತರೂ ಬಹಳಷ್ಟಿದ್ದಾರೆ. ಬೆಳೆ ಹಾಗೂ ಕೃಷಿ ಕ್ಷೇತ್ರದ ಸ್ವರೂಪವನ್ನಾಧರಿಸಿ ಹಂತಹಂತವಾಗಿ ಕೃತಕ ರಸಗೊಬ್ಬರಗಳ ಬಳಕೆ ಕಡಿಮೆ ಮಾಡುವ ಬೇಸಾಯ ಕ್ರಮಗಳನ್ನು ಅವರು ಕಂಡುಕೊಳ್ಳುತ್ತಿದ್ದಾರೆ. ಈ ದಿಸೆ ಯಲ್ಲಿ ರೈತರಿಗೆ ಸಹಾಯಹಸ್ತ ನೀಡುವ ಹೊಣೆ ಸರ್ಕಾರ, ಕೃಷಿ ಇಲಾಖೆ ಹಾಗೂ ಕೃಷಿವಿಜ್ಞಾನದ್ದಾಗಬೇಕಿದೆ.

ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವ ಆ ಪ್ರಯೋಗಸಿದ್ಧ ಮಾದರಿಗಳು ಯಾವುವು? ಅಂಥ ಕೆಲವು ಪ್ರಮುಖ ಜೈವಿಕ ವಿಧಾನಗಳನ್ನು ನಾವಿಲ್ಲಿ ಪರಿಶೀಲಿಸಬಹುದು. ಮುಖ್ಯ ಪೋಷಕಾಂಶಗಳಾದ ಎನ್.ಪಿ.ಕೆ.ಯನ್ನು ಒದಗಿಸಬಲ್ಲ ನಿಸರ್ಗಸ್ನೇಹಿ ಒಳಸುರಿಗಳನ್ನೇ ಮೊದಲು ನೋಡೋಣ. ಕಾಡಿನ ಸೊಪ್ಪು, ಹೊಲದಂಚಿನಲ್ಲಿ ಬೆಳೆಸಿದ ಗಿಡಮರಗಳ ಹಸಿರೆಲೆ, ಕೃಷಿಭೂಮಿ ತ್ಯಾಜ್ಯ, ಗೋಮಾಳದ ಹುಲ್ಲು, ಸಗಣಿಗೊಬ್ಬರ, ಹಟ್ಟಿಯಲ್ಲಿ ತಯಾರಿಸುವ ಕಂಪೋಸ್ಟ್, ಸಂಸ್ಕರಿಸಿದ ಕೊಳಚೆ- ಇವೆಲ್ಲ, ಬೆಳೆಗಳಿಗೆ ಸಾರಜನಕ ಉಣಿಸಬಲ್ಲವು. ಬಯೋಗ್ಯಾಸ್ ಸ್ಥಾವರ ಸ್ಥಾಪಿಸಿ ಸಗಣಿಯಿಂದ ಸಾರಜನಕಭರಿತ ಸ್ಲರಿಗೊಬ್ಬರದ ಜೊತೆಗೆ, ಮಿಥೇನ್ ಅನಿಲದ ಅಡುಗೆ ಇಂಧನವನ್ನೂ ಪಡೆಯಲಾಗುತ್ತಿದೆ. ಸಾರಜನಕದ ಈ ಮೂಲಗಳನ್ನೆಲ್ಲ ಸೂಕ್ತ ಸಂಯೋಜನೆಯಲ್ಲಿ ಬಳಸಿದರೆ, ಮಣ್ಣಿನಲ್ಲಿ ಗಣನೀಯವಾಗಿ ಕುಸಿಯುತ್ತಿರುವ ‘ಸಾವಯವ ಇಂಗಾಲ’ದ ಪ್ರಮಾಣವನ್ನು ಹೆಚ್ಚಿಸಬಹುದು. ಬೆಳೆಗಳಿಗೆ ಅಗತ್ಯವಿರುವ ‘ಸಾರಜನಕ-ಇಂಗಾಲ’ದ ಪ್ರಮಾಣವನ್ನೂ ನಿರ್ವಹಿಸಬಹುದು. ರಂಜಕವನ್ನು ಸಾಕುಪ್ರಾಣಿಗಳ ಅವಶೇಷ, ಮಾಂಸ ಉತ್ಪಾದನಾ ಘಟಕಗಳಲ್ಲಿ ದೊರೆ ಯುವ ಎಲುಬಿನಪುಡಿ ಮಿಶ್ರಣದಿಂದ ಪಡೆಯಬಹುದು. ಹಸಿರೆಲೆ ಗೊಬ್ಬರದಲ್ಲೂ ಅದು ಧಾರಾಳವಾಗಿದೆ. ಹೊಲ ತೋಟಗಳ ಒಣತ್ಯಾಜ್ಯವನ್ನು ಸುಟ್ಟು ತಯಾರಿಸುವ ಸುಡುಬೂದಿ ಹಾಗೂ ಕಂಪೋಸ್ಟ್ ಗೊಬ್ಬರಗಳು ಪೊಟ್ಯಾಶ್ ಪೂರೈಸಬಲ್ಲವು. ಈ ಎಲ್ಲ ಸುರಕ್ಷಿತ
ಎನ್.ಪಿ.ಕೆ. ಒಳಸುರಿಗಳು ಬೇಸಾಯ ಸಂಸ್ಕೃತಿಯ ಮುನ್ನೆಲೆಗೆ ಬರಬೇಕಿದೆ ಈಗ.

ಎನ್.ಪಿ.ಕೆ ಹೊರತಾಗಿಯೂ ಮಣ್ಣಿನ ಪೋಷಕಾಂಶಗಳನ್ನು ನಿರ್ಧರಿಸುವ ಅನೇಕ ಅಂಶಗಳಿವೆ. ಕ್ಯಾಲ್ಸಿಯಂ, ಮ್ಯಾಂಗನೀಸ್, ಕಬ್ಬಿಣ, ಝಿಂಕ್, ಬೋರಾನ್‌ ನಂತಹವೂ ಅಗತ್ಯ. ಇವನ್ನು ಸಹ ಸಗಣಿ ಹಾಗೂ ಕಂಪೋಸ್ಟ್ ಗೊಬ್ಬರಗಳು ಪೂರೈಸಬಲ್ಲವು. ಮಣ್ಣಿನ ಸಂರಚನೆ ರೂಪಿಸುವಲ್ಲಿ ಅಸಂಖ್ಯಾತ ಸೂಕ್ಷ್ಮಾಣುಜೀವಿಗಳ ಪಾತ್ರವೂ ಇದೆ. ಇದನ್ನು ಬಲ್ಲ ರೈತರು ರೈಝೋಬಿಯಂ, ಅಜೋಸ್ಪೈರಿಲ್ಲಮ್, ಅಝಟೊಬ್ಯಾಕ್ಟರ್‌ನಂತಹ ಜೈವಿಕಗೊಬ್ಬರಗಳನ್ನು ಈಗಾಗಲೇ ಬಳಸುತ್ತಿದ್ದಾರೆ.

ಕಸಕಡ್ಡಿ, ಕಟ್ಟಿಗೆಯಂತಹ ವಸ್ತುಗಳನ್ನು ಸೀಮಿತ ಆಮ್ಲಜನಕದೊಂದಿಗೆ ಸುಟ್ಟು ಉತ್ಪಾದಿಸುವ ‘ಜೈವಿಕ ಇಂಗಾಲ’ವನ್ನು (ಬಯೋಚಾರ್) ಕೃಷಿಯ ಕಪ್ಪುಬಂಗಾರ ಎಂದೇ ಜಾಗತಿಕವಾಗಿ ಗುರುತಿಸಲಾಗುತ್ತಿದೆ. ಇಂಗಾಲದ ಈ ಮಿದುಪುಡಿಯನ್ನು ಮಣ್ಣಿಗೆ ನಿಯಮಿತವಾಗಿ ಬೆರೆಸು ವುದರಿಂದ ತೇವಾಂಶ ಹಿಡಿದಿಡುವ ಸಾಮರ್ಥ್ಯ, ಗಾಳಿ ತೂರಿಕೊಳ್ಳುವ ಪ್ರಮಾಣ, ಪೋಷಕಾಂಶಗಳ ಕರಗುವಿಕೆ, ಸೂಕ್ಷ್ಮಾಣುಜೀವಿಗಳ ವರ್ಧನೆ ಇವೆಲ್ಲವನ್ನೂ ಹೆಚ್ಚಿಸಬಹುದು. ಹಳ್ಳಿ, ಪಟ್ಟಣಗಳ ಜೈವಿಕತ್ಯಾಜ್ಯವನ್ನೆಲ್ಲ ಸಮೃದ್ಧ ಗೊಬ್ಬರವಾಗಿಸುವ ಈ ‘ಹಸಿರು ತಂತ್ರಜ್ಞಾನ’ಗಳನ್ನೆಲ್ಲ ರೈತರ ಅಂಗಳಕ್ಕೆ ತರಬೇಕಿದೆ.

ಕೃತಕ ರಸಗೊಬ್ಬರಗಳಿಂದ ಜೈವಿಕ ಗೊಬ್ಬರ ಗಳೆಡೆಗೆ ರೂಪಾಂತರಗೊಳ್ಳಬೇಕಾದ ಈ ಪ್ರಕ್ರಿಯೆಯು, ಭವಿಷ್ಯದ ಆಹಾರ ಭದ್ರತೆಗಾಗಿ ಅನಿವಾರ್ಯವಾಗಿ ತುಳಿಯಲೇಬೇಕಾದ ದಾರಿ. ಇದು ಸಾಧ್ಯವಾಗಲು ಸಂತು ಲಿತ ಬೇಸಾಯಕ್ರಮಗಳು, ಸುರಕ್ಷಿತ ಒಳಸುರಿಗಳು ಕೃಷಿಯ ಮುಖ್ಯವಾಹಿನಿಗೆ ಯಶಸ್ವಿಯಾಗಿ ಬರಬೇಕು. ಇದನ್ನು ಸಾಧಿಸಲು, ಸರ್ಕಾರಿ ಯೋಜನೆಗಳ ಅನುಷ್ಠಾನ ದಲ್ಲಿ ರೈತರ ಸಹಭಾಗಿತ್ವ ಸಾಧ್ಯವಾಗಬೇಕು. ಪರಿಸರದ ಹಿತ ಹಾಗೂ ನಿರಂತರ ಕೃಷಿ ಉತ್ಪಾದನೆ ಪರಸ್ಪರ ಪೂರಕ ಎಂಬ ಅಂಶವನ್ನು ಒಪ್ಪುವ ಕೃಷಿ ನೀತಿ ನಮ್ಮದಾದರೆ ಈ ಗುರಿಯೇನೂ ಕಷ್ಟವಲ್ಲ. ಕೃಷಿಯ ಪರಿಣಾಮವನ್ನು ಸುರಕ್ಷಿತವಾಗಿಸುತ್ತಲೇ ಇಳುವರಿಯನ್ನು ಸುಸ್ಥಿರವಾಗಿಸುವ ದಿಕ್ಕಿನಲ್ಲಿ ಸಾಗಬೇಕಾದ ಈ ಸಂಕೀರ್ಣ ಪಯಣಕ್ಕೆ, ‘ಪ್ರಧಾನಮಂತ್ರಿ- ಪ್ರಣಾಮ’ ಯೋಜನೆ ಬಲ ನೀಡೀತೇ?

ಮಣ್ಣಿಗೆ ಸೂಕ್ತ ಪೋಷಕಾಂಶಗಳೂ ಕೃಷಿಗೆ ವಿವೇಕವೂ ಮರಳಬೇಕಿದೆ ಈಗ!

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT