ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ಬಿಕ್ಕಟ್ಟು ಶಮನ ಆಗಿದೆಯೇ? ಬೆಳೆಯುತ್ತಿದೆ ಉದ್ಯೋಗದ ಭರವಸೆ

ಈಗ ಕೊಲಂಬೊದಲ್ಲಿ ಬೆಳೆಯುತ್ತಿದೆ ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡುವ ಉದ್ಯಮ!
Last Updated 14 ಫೆಬ್ರುವರಿ 2023, 12:29 IST
ಅಕ್ಷರ ಗಾತ್ರ

ಹಿಂದಿನ ವರ್ಷದ ಬೇಸಿಗೆಯ ಹೊತ್ತಿನಲ್ಲಿ ರಾಜಕೀಯ ಗೊಂದಲಗಳು ಹಾಗೂ ಆರ್ಥಿಕವಾಗಿ ಸರಿಸುಮಾರು ದಿವಾಳಿ ಸ್ಥಿತಿಗೆ ತಲುಪಿದ್ದ ಶ್ರೀಲಂಕಾದಲ್ಲಿ ಮೇಲ್ನೋಟಕ್ಕೆ ಪರಿಸ್ಥಿತಿ ಶಾಂತವಾಗಿದೆ. ಆದರೆ, ಒಂದು ಹಂತ ಮುಂದಕ್ಕೆ ಹೋಗಿ ಕಂಡರೆ, ಅಲ್ಲಿನ ಅರ್ಥ ವ್ಯವಸ್ಥೆಯು ಜೀವರಕ್ಷಕ ಉಪಕರಣಗಳನ್ನು ನೆಚ್ಚಿ ಮುಂದುವರಿಯುತ್ತಿರುವುದು ಗೊತ್ತಾಗುತ್ತದೆ. ಸಾಲದ ಸುಳಿಯಿಂದ ಹೊರಬರಲು ಅಲ್ಲಿನ ಸರ್ಕಾರವು ಮಾರ್ಗವೊಂದನ್ನು ಇನ್ನಷ್ಟೇ ಕಂಡುಕೊಳ್ಳಬೇಕಿದೆ. ಲಂಕನ್ನರು ವಾಸ್ತವವನ್ನು ಒಪ್ಪಿಕೊಂಡಿ
ದ್ದಾರೆ– ಅವರ ಆದಾಯ ಕಡಿಮೆಯಾಗಿದೆ, ನಿರೀಕ್ಷೆಗಳು ತಗ್ಗಿವೆ. ಅಲ್ಲಿನ ಯುವಕರಲ್ಲಿ ಹಲವರು ದೇಶದಿಂದ ಹೊರಹೋಗಲು ದಾರಿ ಅರಸುತ್ತಿದ್ದಾರೆ. ಹೊರಹೋಗಲು ಅವಕಾಶ ಇಲ್ಲದಿರುವವರು, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೂ ಅದು ದೊಡ್ಡ ಮಟ್ಟದಲ್ಲೇನೂ ಇರಲಾರದು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಮುಜೀಬ್ ಮಾಶಲ್,  ಸ್ಕಂದ ಗುಣಶೇಖರ
ಮುಜೀಬ್ ಮಾಶಲ್, ಸ್ಕಂದ ಗುಣಶೇಖರ

ಜುಲೈನಲ್ಲಿ ನಡೆದ ಜನಕ್ರಾಂತಿಯು ಅಲ್ಲಿನ ಅಧ್ಯಕ್ಷರನ್ನು ಪದಚ್ಯುತಗೊಳಿಸಿದರೂ, ಅದೇ ರಾಜಕೀಯ ಪ್ರಬಲ ವರ್ಗವು ದೇಶದಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತಿದೆ ಎಂಬುದು ಜನರನ್ನು ಹತಾಶೆಗೆ ನೂಕಿರುವಂತಿದೆ. ಜೀವನಮಟ್ಟ ತಗ್ಗಿರುವ ಚಿತ್ರಣವನ್ನು ಆರ್ಥಿಕತೆಗೆ ಸಂಬಂಧಿಸಿದ ಅಂಕಿ–ಅಂಶಗಳು ನೀಡುತ್ತಿವೆ. ಬಿಕ್ಕಟ್ಟು ತೀವ್ರವಾಗಿದ್ದಾಗ ಶೇಕಡ 90ಕ್ಕೆ ತಲುಪಿದ್ದ ಹಣದುಬ್ಬರ ಪ್ರಮಾಣವು ಈಗ ಶೇ 59ರ ಮಟ್ಟದಲ್ಲಿದೆ. ಅಲ್ಲಿನ ಪ್ರತೀ ಐದು ಕುಟುಂಬಗಳಲ್ಲಿ ಎರಡು ಕುಟುಂಬಗಳು, ಆಹಾರ ಪದಾರ್ಥಗಳ ಖರೀದಿಗೇ ಶೇ 75ರಷ್ಟು ಆದಾಯವನ್ನು ವ್ಯಯಿಸಬೇಕಾಗಿದೆ. ವಿಶ್ವಸಂಸ್ಥೆಯ ಪ್ರಕಾರ ಅಲ್ಲಿ ಶೇ 30ರಷ್ಟು ಜನ ಆಹಾರದ ಅಭದ್ರತೆ ಎದುರಿಸುತ್ತಿದ್ದಾರೆ.

ವ್ಯವಸ್ಥೆಯು ಸ್ಥಿರವಾಗಿರುವಂತೆ ಕಾಣಿಸುವ ರೀತಿಯಲ್ಲಿ ಕೆಲವು ಬದಲಾವಣೆಗಳು ಬಂದಿವೆ. ಆದರೆ ಹೀಗೆ ಆಗಿರುವುದು ಅರ್ಥ ವ್ಯವಸ್ಥೆಯನ್ನು ರಿಪೇರಿ ಮಾಡಿ ಅಲ್ಲ. ಬದಲಿಗೆ, ತೆರಿಗೆಗಳನ್ನು ಹೆಚ್ಚಿಸಿ, ಸಬ್ಸಿಡಿಗಳನ್ನು ಕಡಿತ ಮಾಡಿ ಈ ಸ್ಥಿತಿ ತರಲಾಗಿದೆ. ಈ ರೀತಿ ಮಾಡಿದ್ದರಿಂದಾಗಿ ಬೇಡಿಕೆ ಇನ್ನಷ್ಟು ತಗ್ಗಿದೆ. ಈ ಕ್ರಮಗಳು ಜನಪ್ರಿಯವಲ್ಲ. ರಾಜಕೀಯದಲ್ಲಿ ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷವನ್ನು ಟೀಕಿಸಲು ಒಂದು ಕಾರಣವನ್ನು ಕೊಟ್ಟಿದೆ ಇದು. ಆಡಳಿತಾರೂಢ ಪಕ್ಷ ಅಥವಾ ಮುಂದೆ ಆಡಳಿತಕ್ಕೆ ಬರುವವರು ಈ ಕ್ರಮಗಳನ್ನು ಹಿಂಪಡೆಯಬಹುದು.

ದೇಶದ ಮಧ್ಯಭಾಗದಲ್ಲಿ ಬದುಕು ಕಟ್ಟಿಕೊಂಡಿರುವ ರೈತ ಎಚ್.ಎಂ. ದಿಸ್ಸನಾಯಕೆ ಹಾಗೂ ಅವರ ಪತ್ನಿ ಮಲಾನಿ ಮಂಗಲಿಕಾ ಅವರು ಮೀನು ಮತ್ತು ಮಾಂಸವನ್ನು ಬಳಸುವುದನ್ನು ಕಡಿಮೆ ಮಾಡಿದ್ದಾರೆ. ಮೊದಲು ವಾರಕ್ಕೆ ಮೂರು ಬಾರಿ ಇವುಗಳನ್ನು ಬಳಸುತ್ತಿದ್ದ ದಂಪತಿ ಈಗ ತಿಂಗಳಿಗೆ ಒಮ್ಮೆ ಮಾತ್ರ ಬಳಸುತ್ತಿದ್ದಾರೆ. ಕಡೆಯ ಬಾರಿ ಹಾಲು ಕುಡಿದಿದ್ದು ಯಾವಾಗ ಎಂಬುದು ಇವರಿಗೆ ಸರಿಯಾಗಿ ನೆನಪಿಲ್ಲ. ಆರು ತಿಂಗಳ ಹಿಂದೆ ಎಂದು ಮಂಗಲಿಕಾ ಹೇಳುತ್ತಾರೆ. ಮೊಟ್ಟೆ ತಿಂದು ಎರಡು ತಿಂಗಳು ಕಳೆದಿದೆ.

2.2 ಕೋಟಿ ಜನಸಂಖ್ಯೆ ಹೊಂದಿರುವ ಶ್ರೀಲಂಕಾ ಪರಿಸ್ಥಿತಿಯನ್ನು ನಿಭಾಯಿಸಲಿದೆಯೇ ಅಥವಾ ಆರ್ಥಿಕವಾಗಿ ಇನ್ನಷ್ಟು ಆಳಕ್ಕೆ ಬೀಳಲಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹಲವು ಸಣ್ಣ ದೇಶಗಳು ನಿಭಾಯಿಸಲು ಆಗದಷ್ಟು ಸಾಲ ಮಾಡಿಕೊಂಡು ಕಷ್ಟಪಡುತ್ತಿವೆ. ಹೀಗೆ ಕಷ್ಟಪಡುತ್ತಿರುವ ಹಲವು ದೇಶಗಳು ದೊಡ್ಡ ಮಟ್ಟದಲ್ಲಿ ಸಾಲ ಪಡೆದಿರುವುದು ಚೀನಾದಿಂದ. ಸಾಲ ಮರುಪಾವತಿಗೆ ಹಣಕಾಸು ನೆರವು ಪಡೆಯಲು ಶ್ರೀಲಂಕಾ, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಜೊತೆ ಮಾತುಕತೆಯಲ್ಲಿ ತೊಡಗಿದೆ. ಇದಕ್ಕೆ ಐಎಂಎಫ್‌ ಒಡ್ಡಿರುವ ಷರತ್ತಿನ ಭಾಗವಾಗಿ ಶ್ರೀಲಂಕಾ, ತಾನು ಸಾಲ ಮರುಪಾವತಿಸಬೇಕಿರುವ ಚೀನಾದಂತಹ ದೇಶಗಳ ಜೊತೆ ಸಾಲಕ್ಕೆ ಸಂಬಂಧಿಸಿದ ನಿಬಂಧನೆಗಳಲ್ಲಿ ಮರುಹೊಂದಾಣಿಕೆ ಮಾಡಿಕೊಳ್ಳಬೇಕು. ಶ್ರೀಲಂಕಾಕ್ಕೆ ಅತಿಹೆಚ್ಚು ಸಾಲ ಕೊಟ್ಟಿರುವ ಚೀನಾದ ಕಡೆಯಿಂದ ಪ್ರತಿಕ್ರಿಯೆಯು ಕ್ಷಿಪ್ರವಾಗಿ ಸಿಕ್ಕಿಲ್ಲದ ಕಾರಣದಿಂದಾಗಿ, ಐಎಂಎಫ್‌ ಜೊತೆಗಿನ ಒಪ್ಪಂದವು ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಶ್ರೀಲಂಕಾಕ್ಕೆ ಹೆಚ್ಚಿನ ಸಾಲ ನೀಡಿರುವ ಭಾರತವು ಸಾಲದ ಮರುಹೊಂದಾಣಿಕೆ ವಿಚಾರವಾಗಿ ಭರವಸೆ ಕೊಟ್ಟಿದೆ.

ಚೀನಾದಿಂದ ಸ್ಪಷ್ಟ ಭರವಸೆಗೆ ಕಾಯುತ್ತಿರುವ ಹೊತ್ತಿನಲ್ಲಿ ಶ್ರೀಲಂಕಾ, ಐಎಂಎಫ್‌ನ ಇತರ ಷರತ್ತುಗಳನ್ನು ಪಾಲಿಸಲು ಮುಂದಾಗುತ್ತಿದೆ. ಬಜೆಟ್ ಕೊರತೆಯನ್ನು ತಗ್ಗಿಸಲು ಅದು ಕ್ರಮ ಕೈಗೊಳ್ಳುತ್ತಿದೆ. ಅಂದರೆ, ತೆರಿಗೆ ಹೆಚ್ಚಿಸುತ್ತಿದೆ, ಇಂಧನ ಹಾಗೂ ವಿದ್ಯುತ್ತಿನ ಮೇಲೆ ಸಬ್ಸಿಡಿಗಳನ್ನು ಕಡಿತ ಮಾಡುತ್ತಿದೆ. ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಸುಧಾರಣೆ ತರಲು ಯತ್ನಿಸುತ್ತಿದೆ.

ಬಿಕ್ಕಟ್ಟು ತೀವ್ರವಾಗಿದ್ದ ಸಂದರ್ಭಕ್ಕೆ ಹೋಲಿಸಿದರೆ ಈಗ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಲಭ್ಯತೆಯನ್ನು ಸರ್ಕಾರವು ಸುಧಾರಿಸಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಶೆಹನ್ ಸೇಮಸಿಂಘೆ ಹೇಳುತ್ತಾರೆ. ಆದರೆ ದೇಶದ ವಿದೇಶಿ ವಿನಿಮಯ ಮೀಸಲು ನಗಣ್ಯ ಪ್ರಮಾಣದಲ್ಲಿದೆ, ವೆಚ್ಚಗಳ ವಿಚಾರದಲ್ಲಿ ದೇಶವು ಈಗಲೂ ಬಹಳ ಹಿಡಿತದಲ್ಲಿ ಸಾಗಬೇಕಾಗಿದೆ ಎಂದು ಅವರು ವಿವರಿಸುತ್ತಾರೆ. ‘ನಾವು ಹಲವು ಕ್ರಮಗಳನ್ನು ಅನುಸರಿಸಿದ್ದೇವೆ. ನಾವು ಬೇಡಿಕೆಯನ್ನು ಬಹಳ ದೊಡ್ಡ ಮಟ್ಟದಲ್ಲಿ ಹತ್ತಿಕ್ಕಿದ್ದೇವೆ’ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ದಿಸ್ಸನಾಯಕೆ ಅವರಂತಹ ರೈತರು ವೆಚ್ಚಗಳನ್ನು ಈ ಹಿಂದೆ ಯಾವತ್ತೂ ಈ ಮಟ್ಟದಲ್ಲಿ ಕಡಿಮೆ ಮಾಡಬೇಕಾದ ಸಂದರ್ಭ ಎದುರಿಸಿರಲಿಲ್ಲ. ಅವರು ಅನುಭವಿಸಿದ ಆರ್ಥಿಕ ಬಿಕ್ಕಟ್ಟಿಗೆ ಒಂದಿಷ್ಟು ಕಾರಣ ಸರ್ಕಾರ ಕೈಗೊಂಡ ಕೆಲವು ಕ್ರಮಗಳು. ಗೊಟಬಯ ರಾಜಪಕ್ಸ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2021ರಲ್ಲಿ, ದೇಶದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಷೇಧಿಸಿದರು. ಅವರು ದೇಶದಲ್ಲಿ ಸಾವಯವ ಕೃಷಿ ಪದ್ಧತಿ ಬರಬೇಕು ಎಂದು ಹೇಳಿದರು. ಇದರ ಪರಿಣಾಮವಾಗಿ ದೊಡ್ಡ ದುರಂತವೇ ಎದುರಾಯಿತು. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ದೇಶದ ಕೃಷಿ ಉತ್ಪಾದನೆಯು ಶೇ 50ರಷ್ಟು ಕಡಿಮೆ ಆಯಿತು. ಪ್ರತಿಭಟನೆಗಳನ್ನು ಗಮನಿಸಿ, ತನ್ನ ತೀರ್ಮಾನವನ್ನು ಸರ್ಕಾರ ಹಿಂದಕ್ಕೆ ಪಡೆಯುವ ಹೊತ್ತಿಗೆ, ರಸಗೊಬ್ಬರ ಆಮದು ಮಾಡಿಕೊಳ್ಳಲು ಅಗತ್ಯವಿರುವಷ್ಟು ವಿದೇಶಿ ವಿನಿಮಯವೂ ದೇಶದಲ್ಲಿ ಇರಲಿಲ್ಲ.

ಈ ಹಂಗಾಮಿನಲ್ಲಿ ಸರ್ಕಾರವು ಭತ್ತ ಬೆಳೆಯುವ ರೈತರಿಗೆ ಯೂರಿಯಾವನ್ನು ರಿಯಾಯಿತಿ ದರದಲ್ಲಿ ಪೂರೈಸಿದೆ. ಹೀಗಿದ್ದರೂ ಅದರ ಬೆಲೆಯು ಈಗ, ರೈತರು ಹಿಂದೊಮ್ಮೆ ಪಾವತಿಸುತ್ತಿದ್ದ ಬೆಲೆಗೆ ಹೋಲಿಸಿದರೆ 20 ಪಟ್ಟು ಹೆಚ್ಚಿದೆ. ಈಗ ಭತ್ತದ ಬೆಳೆಯು ಮೊದಲಿದ್ದ ಹಂತಕ್ಕೆ ಬರಲಿದೆ ಎಂಬ ವಿಶ್ವಾಸವು ದಿಸ್ಸನಾಯಕೆ, ಅವರ ಊರಿನ ರೈತರು ಹಾಗೂ ಸರ್ಕಾರದ ಅಧಿಕಾರಿಗಳಲ್ಲಿ ಇದೆ. ಆದರೆ ಈಗ ತರಕಾರಿ ಹಾಗೂ ಹಣ್ಣು ಬೆಳೆಯುವವರು ಮಾರುಕಟ್ಟೆಯ ಕೃಪೆಯನ್ನು ನೆಚ್ಚಿಕೊಂಡು ಬದುಕುತ್ತಿದ್ದಾರೆ. ‘ನಾವು ಭತ್ತ ಬೆಳೆಗಾರರಲ್ಲ ಎಂಬ ಕಾರಣಕ್ಕೆ ಸರ್ಕಾರವು ನಮಗೆ ರಸಗೊಬ್ಬರ ನೀಡುತ್ತಿಲ್ಲ’ ಎಂದು ಎಂ.ಡಿ.ಎಸ್. ವಿಜೆಸಿಂಘೆ ಹೇಳುತ್ತಾರೆ. ಅವರು ಹಿಂದೊಮ್ಮೆ ಪಪ್ಪಾಯ ಹಾಗೂ ಟೊಮೆಟೊ ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದವರು. ಆದರೆ ಸಾವಯವ ಕೃಷಿ ಕುರಿತ ತೀರ್ಮಾನವು ಇವರಿಗೆ ಏಟು ಕೊಟ್ಟಿತು. ‘ನಮಗೆ ರಸಗೊಬ್ಬರವನ್ನು ಮಾರುಕಟ್ಟೆಯ ದುಬಾರಿ ಬೆಲೆಗೆ ಖರೀದಿಸಲು ಆಗದು’ ಎಂದು ಅವರು ಹೇಳುತ್ತಾರೆ.

ಈಗ ಕೊಲಂಬೊದಲ್ಲಿ, ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡುವ ಉದ್ಯಮವು ವ್ಯಾಪಕವಾಗಿ ಬೆಳೆಯುತ್ತಿದೆ. 2022ರಲ್ಲಿ ಶ್ರೀಲಂಕಾದ ಮೂರು ಲಕ್ಷ ಜನ ಉದ್ಯೋಗ ಅರಸಿ ವಿದೇಶಗಳಿಗೆ ತೆರಳಿದ್ದಾರೆ. ಟರ್ಕಿಯಲ್ಲಿ ಉದ್ಯೋಗ ಕೊಡಿಸುವ ಸುಳ್ಳು ಜಾಹೀರಾತೊಂದನ್ನು ನೋಡಿ 500 ಜನ ಕೊಲಂಬೊಕ್ಕೆ ಬಂದಿದ್ದರು. ಜನರಲ್ಲಿ ಹತಾಶೆ ಆ ಮಟ್ಟದಲ್ಲಿದೆ. ‘ಎಲ್ಲರಿಗೂ ದೇಶ ತೊರೆಯಬೇಕು ಅನ್ನಿಸುತ್ತಿದೆ’ ಎಂದು ರವಿ ಎಸ್. ಹೇಳುತ್ತಾರೆ. ಅವರು ನೇಮಕಾತಿ ಸಂಸ್ಥೆಯೊಂದರಲ್ಲಿ ಅಧಿಕಾರಿ. ವಿದೇಶಗಳಲ್ಲಿ ಕೆಲಸ ಇದೆಯೇ ಎಂದು ಬೇರೆ ಬೇರೆ ಕಂಪನಿಗಳ ಸಿಇಒ ಹುದ್ದೆಯಲ್ಲಿರುವವರೂ ವಿಚಾರಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.

ಕೆ. ಶಿವನಾಥನ್ ಅವರಿಗೆ ಬ್ಯಾಂಕ್‌ನಲ್ಲಿ ಉದ್ಯೋಗ ದೊರೆತಾಗ, ತಮ್ಮ ಸಂಬಳ ಹಾಗೂ ತಂದೆಯ ಸಂಬಳ ಜೊತೆಗೂಡಿದರೆ ಕುಟುಂಬಕ್ಕೆ ಬೇಕಾಗುವಷ್ಟಾಗುತ್ತದೆ ಎಂದು ಭಾವಿಸಿದ್ದರು. ಆದರೆ, ಬೆಲೆಗಳು ಗಗನಕ್ಕೇರಿರುವ ಪರಿಣಾಮವಾಗಿ ಶಿವನಾಥನ್ ಅವರ ಸಂಬಳದಲ್ಲಿ ಮೂರನೆಯ ಒಂದು ಪಾಲು ಬಸ್‌ ಖರ್ಚು ಹಾಗೂ ಮಧ್ಯಾಹ್ನದ ಊಟಕ್ಕೆ ವಿನಿಯೋಗವಾಗುತ್ತಿದೆ. ಬೇಡಿಕೆ ತಗ್ಗಿರುವ ಕಾರಣ ಅವರ ತಂದೆಯ ವೇತನ ಶೇ 80ರಷ್ಟು ಕಡಿಮೆಯಾಗಿದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT