ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ 25 ವರ್ಷಗಳ ಮುನ್ನೋಟ | ನೀರಾವರಿಗೆ ಸರ್ಕಾರವೇ ಜನಾಂದೋಲನ ಮಾಡಬೇಕು

ಚಂದ್ರಶೇಖರ್ ಎನ್. ಸಿರಿವಂತೆ
Published 6 ಡಿಸೆಂಬರ್ 2023, 23:10 IST
Last Updated 6 ಡಿಸೆಂಬರ್ 2023, 23:10 IST
ಅಕ್ಷರ ಗಾತ್ರ

ಕರ್ನಾಟಕದ ಅಣೆಕಟ್ಟೆಗಳಲ್ಲಿ ಕೆಲವು ಹಳೆಯವಾಗಿದ್ದರೆ, ಇನ್ನು ಕೆಲವು ಹೂಳಿನಲ್ಲಿ ಹುದುಗುತ್ತಿವೆ. ಮುಂದಿನ ದಿನಗಳಲ್ಲಿ ಇವುಗಳಿಂದ ಪ್ರಯೋಜನಕ್ಕಿಂತ ಅಪಾಯಗಳೇ ಹೆಚ್ಚು ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿರುವ ಸಂಗತಿ. ನೀರಾವರಿ ಉದ್ದೇಶದಿಂದ ಕಟ್ಟಿದ ಉತ್ತರ ಕರ್ನಾಟಕದ ಜಲಾಶಯಗಳಿಂದ ಸತತ ಹರಿದ ನೀರು ಅಲ್ಲಿನ ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡಿದೆಯೆಂದರೆ ನಾವು ಮಾಡಿದ, ಮಾಡುತ್ತಿರುವ ಕೆಲಸದಲ್ಲಿ ಮುಂದಾಲೋಚನೆಯ ಕೊರತೆ ತೀವ್ರವಾಗಿದೆ ಎಂದೆನ್ನಿಸುತ್ತದೆ. ಹಿಂದಿನ ಇಂತಹ ಹಲವು ತಪ್ಪು ನಡೆಗಳು ನಮ್ಮ ಕಣ್ಣಮುಂದಿವೆ. ಆ ಕಾಲಕ್ಕೆ ಅದು ಕ್ರಾಂತಿಕಾರಕವಾಗಿತ್ತು ಎಂದೆನ್ನಿಸಿದರೂ ಮುಂದಿನ ಕೇವಲ ಕೆಲವೇ ದಶಕಗಳಲ್ಲಿ ಅವುಗಳ ವೈಫಲ್ಯ ಎದ್ದುಕಾಣುವಂತಾಗಿದೆ.

ಟೀಕೆ ಮಾಡುತ್ತಾ ಕೂರೋಣವೆ? ಪ್ರಯೋಜನವಿಲ್ಲ. ಆದರೆ ಪಾಠ ಕಲಿಯಬಹುದಲ್ಲವೆ? ತಿದ್ದಿಕೊಳ್ಳಬಹುದಲ್ಲವೆ?

ಪ್ರಸ್ತುತ ಕರ್ನಾಟಕದಲ್ಲಿ ಅಂದಾಜು ಮೂರುಕೋಟಿ ಎಕರೆ ಭೂಮಿಯಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಈ ಭೂಮಿಯಲ್ಲಿ ಪ್ರತಿ ಎಕರೆಗೆ ಒಂದು ಗುಂಟೆ ಜಾಗದಲ್ಲಿ ಅಂದರೆ 33×33 ಅಳತೆಯ ಜಾಗದಲ್ಲಿ ಕೇವಲ 5 ಅಡಿ ಆಳದ ಇಂಗುಗುಂಡಿ ತೋಡುವುದರಿಂದ ನಮ್ಮ ಅಂತರ್ಜಲವನ್ನು ಸಮೃದ್ಧವಾಗಿಸಬಹುದಲ್ಲವೆ? ಇದಕ್ಕೆ ಸರ್ಕಾರ ಬರಿದೇ ಆದೇಶ ಹೊರಡಿಸಿ, ಯಾವುದೋ ಇಲಾಖೆಗೆ ಜವಾಬ್ದಾರಿ ಹೊರಿಸಿದರೆ ಸಾಲದು. ಇದಕ್ಕಾಗಿ ಸರ್ಕಾರವೇ ಜನಾಂದೋಲನ ನಡೆಸಬೇಕು ಮತ್ತು ಒಂದು ಕಾರ್ಯಪಡೆ ಕಟ್ಟಬೇಕು. ಅದರಲ್ಲಿ ಸಾಹಿತಿಗಳು, ಸಮಾಜಸೇವಕರು, ಮಠಾಧೀಶರು, ಸಮಾಜ ವಿಜ್ಞಾನಿಗಳು, ಕಲಾವಿದರು (ಕೇವಲ ಚಿತ್ರನಟರಲ್ಲ), ಚಿಂತಕರು ಇರುವ ಜೊತೆಗೆ ಜನಸಾಮಾನ್ಯರನ್ನೂ ತೊಡಗಿಸಿಕೊಳ್ಳಬೇಕು.

ಅಂಬರದಿಂದ ಭೂಮಿಗೆ ಬೀಳುವ ಮಳೆಯ ಪ್ರಮಾಣ ಕಡಿಮೆಯೇನಾಗಿಲ್ಲ. ಆದರೆ ಬೀಳಬೇಕಾದ ಜಾಗದಲ್ಲಿ, ಸಮಯದಲ್ಲಿ ಬೀಳುತ್ತಿಲ್ಲವಷ್ಟೆ. ಬಿದ್ದಷ್ಟಾದರೂ ಮಳೆಯ ನೀರನ್ನು ನಾವು ಎಷ್ಟು ನಿಲ್ಲಿಸಿಕೊಳ್ಳಲು ಯತ್ನಿಸುತ್ತಿದ್ದೇವೆ? ಅದೇ ಒಂದಿಷ್ಟು ಅಣೆಕಟ್ಟುಗಳಲ್ಲಿ ಒಂದಿಷ್ಟು ಪ್ರಮಾಣ. ಆದರೆ ಈ ಅಣೆಕಟ್ಟುಗಳು ಏನು ಪರಿಣಾಮ ಬೀರುತ್ತಿವೆ ಎಂದು ಈಗಾಗಲೇ ಹೇಳಿ ಆಗಿದೆಯಲ್ಲ. ಅದಕ್ಕೆ ಒಂದು ಗುಂಟೆ, ಒಂದು ದೊಡ್ಡ ಪರ್ಯಾಯ ಪರಿಹಾರವಾದೀತು ಎಂಬುದು ಒಂದು ಅನಿಸಿಕೆ.

ಅದೇ ರೀತಿ ಕನಿಷ್ಠ ಒಂದುಕೋಟಿ ಮನೆಗಳಲ್ಲಿ ನೀರಿನ ಸಂಪನ್ನು ನಿರ್ಮಿಸುವಂತೆ ಕ್ರಮ ಕೈಗೊಂಡು ಬಿದ್ದ ಮಳೆನೀರನ್ನು ಸಂಗ್ರಹಿಸಿಕೊಳ್ಳುವಂತೆ ಸಮರೋಪಾದಿಯಲ್ಲಿ ಯೋಜನೆಯೊಂದನ್ನು ರೂಪಿಸಿ ಜನಾಂದೋಲನವಾಗಿಸುವುದು ಕೂಡಾ ಸರ್ಕಾರದ ಕೆಲಸದ ಭಾಗವಾಗಬೇಕು. ಬರಿದೇ ಆದೇಶ, ಅದಕ್ಕೊಂದಿಷ್ಟು ದುಡ್ಡು ಎತ್ತಿಡುವುದಾದರೆ ಸರ್ಕಾರಕ್ಕೆ ಈ ಉಸಾಬರಿ ಬೇಡ. ಈ ಯೋಜನೆ ಫಲಪ್ರದವಾಗಿ ಅನುಷ್ಠಾನಗೊಂಡಲ್ಲಿ ಕರ್ನಾಟಕದ ಜನರ 6 ತಿಂಗಳ ಕುಡಿವ ನೀರಿನ ಬವಣೆಯನ್ನು ತೊಲಗಿಸಿಬಿಡುತ್ತದೆ.

ಉಚಿತ ವಿದ್ಯುತ್ ಯೋಜನೆ ಬದಲಿಗೆ ಒಂದುಕೋಟಿ ಮನೆಗಳಿಗೆ ಪ್ರತ್ಯೇಕ-ಪ್ರತ್ಯೇಕವಾಗಿ ನಾಲ್ಕು ದೀಪಗಳ ಒಂದೊಂದು ಸೌರವಿದ್ಯುತ್ ಘಟಕಗಳನ್ನು ಕೊಟ್ಟಿದ್ದಲ್ಲಿ ವಿದ್ಯುತ್ ಸಮಸ್ಯೆಯೂ ನೀಗುತ್ತಿತ್ತು, ಕರ್ನಾಟಕ ಸೌರವಿದ್ಯುತ್ ಬೆಳಕಲ್ಲಿ ಮಿಂದೇಳುತ್ತಿತ್ತು. ಉಳಿತಾಯವಾದ ವಿದ್ಯುತ್ ಅನ್ನು ಹಗಲಲ್ಲೆ ರೈತರಿಗೆ ನೀಡಬಹುದಿತ್ತು. ನಗರಕ್ಕೆ, ಕೈಗಾರಿಕೆಗಳಿಗೆ ಬಳಸಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ.

ಹಾಗೆಯೇ ಮುಂದಿನ ದಿನಗಳಲ್ಲಿ ಸೌರ ಬಿಸಿನೀರ ಘಟಕ, ಸೌರ ಅಡುಗೆ ಘಟಕಗಳನ್ನು ಸರ್ಕಾರದಿಂದಲೇ ವಿತರಿಸುವುದರ ಮೂಲಕ ಸ್ವಚ್ಛ-ಸ್ವಸ್ಥ ಪರಿಸರಕ್ಕೂ ನಾಂದಿ ಹಾಡಬಹುದು. ಕಟ್ಟಿಗೆ ಉರುವುಲಾಗುವುದನ್ನು ಸಾಕಷ್ಟು ಕಮ್ಮಿಮಾಡಬಹುದು. ಪೆಟ್ರೋಲಿಯಂ ಗ್ಯಾಸ್ ಉರಿಸಿದಾಗ ಹೊಮ್ಮುವ ಕಾರ್ಬನ್ ಡೈಆಕ್ಸೈಡ್ ಎಂಬ ವಿಷದಿಂದ ಬಳಲುವ ನಾಡಿನ ಶೇ 98ರಷ್ಟು ಮಹಿಳೆಯರನ್ನು ಪಾರುಮಾಡಬಹುದು. ವಾಯು ವಿಷವಾಗುವುದನ್ನು ತಡೆಯಬಹುದು.

ಮುಂದಿನ 25 ವರ್ಷಗಳ ಬದುಕನ್ನು ಮುಂದಿಟ್ಟುಕೊಂಡು ಇಂದಿನಿಂದಲೇ ಅದಕ್ಕೆ ತಕ್ಕ ಹೆಜ್ಜೆ ಹಾಕುವತ್ತ ಈಗಿನ ಸರ್ಕಾರ ಮನಸ್ಸು ಮಾಡಬೇಕು. ಸರ್ವರನ್ನೂ ಒಳಗೊಂಡ ಜನಾಂದೋಲನವೊಂದನ್ನು ಸರ್ಕಾರವೇ ಪ್ರಾರಂಭಿಸಬೇಕು. ಬರಿದೇ ಸಭೆ-ಸಮಾರಂಭಗಳ ಮೂಲಕವಲ್ಲ, ಪ್ರತಿ ಮನೆಗೂ ಮುಟ್ಟುವ ಕಾರ್ಯಯೋಜನೆಯ ಮೂಲಕ. ಯೋಚಿಸಿ, ಇಂತವುಗಳೆಲ್ಲಾ ಅನುಷ್ಠಾನಗೊಂಡಲ್ಲಿ ‘ಸುವರ್ಣ ಕರ್ನಾಟಕ’ಕ್ಕೆ ವಿಶ್ವಮಾನ್ಯತೆ ದೊರೆಯುತ್ತದೆ.

ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಂಪುಟದ ಎಲ್ಲಾ ಸಚಿವರು ಈ ಕುರಿತು ಕಾರ್ಯೋನ್ಮುಖರಾಗುವರೆಂದು ಆಶಿಸೋಣವೆ?

-ಚಂದ್ರಶೇಖರ್ ಎನ್., ಸಿರಿವಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT