ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆತ್ಮಕ್ಕೆ ಸಂಬಂಧಿಸಿದ ತೀರ್ಪು

ನ್ಯಾಯಮೂರ್ತಿ ಹುದ್ದೆಗೆ ಶ್ರೇಷ್ಠ ವ್ಯಕ್ತಿಗಳೇ ಶಿಫಾರಸು ಆಗುವಂತೆ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಕಾಲ
Last Updated 1 ನವೆಂಬರ್ 2015, 10:41 IST
ಅಕ್ಷರ ಗಾತ್ರ

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈಚೆಗೆ ನೀಡಿರುವ ತೀರ್ಪು ಐತಿಹಾಸಿಕ, ಅತ್ಯಂತ ಪ್ರಮುಖ. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ಹೇಗಿರಬೇಕು ಎಂಬ ಪ್ರಮುಖ ಪ್ರಶ್ನೆಗೆ ಸಂಬಂಧಿಸಿದ ತೀರ್ಪು ಇದು. ನ್ಯಾಯಮೂರ್ತಿಗಳ ನೇಮಕ ಕುರಿತ ಪ್ರಶ್ನೆ ನಮ್ಮ ಸಂವಿಧಾನದ ಆತ್ಮಕ್ಕೆ– ಅಂದರೆ, ನಮ್ಮ ವ್ಯವಸ್ಥೆಯ ಮೂರು ಅಂಗಗಳ ಕಾರ್ಯವ್ಯಾಪ್ತಿ ಮತ್ತು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ– ಸಂಬಂಧಿಸಿದ್ದು.

ನ್ಯಾಯಾಂಗದ ಉನ್ನತ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಹೇಗಿರಬೇಕು ಎಂಬ ವಿಚಾರದ ಬಗ್ಗೆ ದೇಶದಲ್ಲಿ ದಶಕಗಳಿಂದ ವಾಗ್ವಾದ ನಡೆದಿದೆ. ಎನ್‌ಜೆಎಸಿ ಕಾಯ್ದೆ ಮತ್ತು ಸಂವಿಧಾನದ 99ನೇ ತಿದ್ದುಪಡಿಯ ಕಾರಣ ಈ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿತ್ತು. ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಲು, ನೇಮಿಸಲು ನಮ್ಮಲ್ಲಿ ಅನುಸರಿಸುತ್ತಿರುವ ಪದ್ಧತಿ ಅತ್ಯಂತ ಭಿನ್ನ. ಕೆಲವೆಡೆ ಕಾರ್ಯಾಂಗವೇ ನ್ಯಾಯಮೂರ್ತಿಗಳನ್ನು ನೇಮಕ ಮಾಡುತ್ತದೆ. ಅಮೆರಿಕದಲ್ಲಿ ಅಧ್ಯಕ್ಷರು ನ್ಯಾಯಮೂರ್ತಿಗಳನ್ನು ನೇಮಿಸುತ್ತಾರೆ, ನಂತರ ಇದಕ್ಕೆ ಸೆನೆಟ್‌ನ ಅನುಮೋದನೆ ಕೇಳುತ್ತಾರೆ.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಜೊತೆ ಸಮಾಲೋಚನೆ ನಡೆಸಿ, ರಾಷ್ಟ್ರಪತಿಯವರು ನ್ಯಾಯಮೂರ್ತಿಗಳ ನೇಮಕ ಮಾಡಬೇಕು ಎಂದು ನಮ್ಮ ಸಂವಿಧಾನದ 124ನೇ ಅನುಚ್ಛೇದ ಹೇಳುತ್ತದೆ. ಸಂವಿಧಾನದ ಈ ಅನುಚ್ಛೇದದ ಅರ್ಥವೇನು?

ನ್ಯಾಯಾಂಗದ ಉನ್ನತ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಮೊದಲ ಬಾರಿಗೆ 1981ರಲ್ಲಿ ‘ಫಸ್ಟ್‌ ಜಡ್ಜಸ್‌ ಕೇಸ್‌’ನಲ್ಲಿ ನಿಕಷಕ್ಕೆ ಒಳಪಡಿಸಿತು. ನ್ಯಾಯಮೂರ್ತಿಗಳ ನೇಮಕದ ಸಂಪೂರ್ಣ ಅಧಿಕಾರ ಇರುವುದು ಕಾರ್ಯಾಂಗದ ಕೈಯಲ್ಲಿ ಎಂದು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತು. ಅಲ್ಲದೆ, ನೇಮಕ ಪ್ರಕ್ರಿಯೆಯ ಭಾಗವಾದ ಸಮಾಲೋಚನೆಯಲ್ಲಿ ಪಾಲ್ಗೊಳ್ಳುವುದು ಮಾತ್ರ ನ್ಯಾಯಾಂಗದ ಕೆಲಸ ಎಂದೂ ಹೇಳಿತು. ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನ್ಯಾಯಾಂಗದ ಹುದ್ದೆ ಹೊಂದಿರುವವರ ಬಳಿ ಇರುತ್ತದೆ. ಹಾಗಾಗಿ ರಾಷ್ಟ್ರಪತಿಯವರು ನ್ಯಾಯಾಂಗದವರ ಮಾತನ್ನು ಆಲಿಸಬೇಕು, ಪರಿಶೀಲಿಸಬೇಕು. ಆದರೆ, ಯಾವ ಅಭಿಪ್ರಾಯವನ್ನು ಸ್ವೀಕರಿಸಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರ ಕಾರ್ಯಾಂಗದ್ದು ಎಂದು ಸುಪ್ರೀಂ ಕೋರ್ಟ್‌ ಆಗ ಹೇಳಿತ್ತು.

ಈ ತೀರ್ಪಿನ ನಂತರ, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಪ್ರಧಾನಿ ಮತ್ತು ಕಾನೂನು ಸಚಿವರಿಗೆ ಅಪರಿಮಿತ ಅಧಿಕಾರ ದೊರೆಯಿತು. ನ್ಯಾಯಮೂರ್ತಿಗಳನ್ನು ನೇಮಿಸುವ ಅಧಿಕಾರ ಸಿಕ್ಕಿತು. ಸೇವಾ ಹಿರಿತನ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಶಿಫಾರಸು ಕಡೆಗಣಿಸಿ ನ್ಯಾಯಮೂರ್ತಿಗಳ ನೇಮಕ ಆದ ನಿದರ್ಶನಗಳೂ ಎದುರಾದವು. ಈ ಕಾರಣಗಳಿಂದ, ‘ಫಸ್ಟ್‌ ಜಡ್ಜಸ್‌ ಕೇಸ್‌’ ಅನ್ನು ಸುಪ್ರೀಂಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠ ಪುನರ್ ಪರಿಶೀಲನೆಗೆ ಒಳಪಡಿಸಿತು. ಇದನ್ನು ‘ಸೆಕೆಂಡ್ ಜಡ್ಜಸ್ ಕೇಸ್’ ಎನ್ನುತ್ತಾರೆ.

ಸಂವಿಧಾನದ 124, 217 ಮತ್ತು 222ನೇ ಅನುಚ್ಛೇದಗಳಲ್ಲಿ ಹೇಳಿರುವ ‘ಸಮಾಲೋಚನೆ’ ಎಂಬ ಪದ ‘ಸಿಜೆಐ ಸ್ಥಾನದಲ್ಲಿರುವವರು ನೀಡುವ ಅಭಿಪ್ರಾಯಕ್ಕೆ ಪರಮೋಚ್ಚ ಆದ್ಯತೆ ನೀಡಬೇಕು’ ಎಂಬ ಅರ್ಥವನ್ನು ಧ್ವನಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಈ ಪ್ರಕರಣದಲ್ಲಿ ಹೇಳಿತು. ಸಿಜೆಐ ಆದವರು ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಜೊತೆ ಸಮಾಲೋಚಿಸಿ, ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಇದನ್ನು 1998ರ ‘ಥರ್ಡ್‌ ಜಡ್ಜಸ್‌ ಕೇಸ್‌’ನಲ್ಲಿ ಕೇಂದ್ರ ಸರ್ಕಾರ ಒಪ್ಪಿಕೊಂಡಿತು.

ಹಾಗಾಗಿ, ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿ, ಸುಪ್ರೀಂ ಕೋರ್ಟ್‌ ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಜೊತೆ ಚರ್ಚಿಸಿದ ನಂತರ ಸಿಜೆಐ ಕಾರ್ಯಾಂಗಕ್ಕೆ ತಮ್ಮ ಅಭಿಪ್ರಾಯ ನೀಡುವ ‘ಕೊಲಿಜಿಯಂ’ ವ್ಯವಸ್ಥೆ ನಮ್ಮಲ್ಲಿದೆ. ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಉದ್ದೇಶ ಎನ್‌ಜೆಎಸಿ ಕಾಯ್ದೆ ಮತ್ತು ಸಂವಿಧಾನಕ್ಕೆ ಹೊಸದಾಗಿ ಸೇರಿಸಿದ 124(ಎ) ಅನುಚ್ಛೇದಕ್ಕೆ ಇತ್ತು. ಕೊಲಿಜಿಯಂ ಬದಲು ಎನ್‌ಜೆಎಸಿಯನ್ನು ಅಸ್ತಿತ್ವಕ್ಕೆ ತರುವ ಇರಾದೆ ಇತ್ತು.

ಎನ್‌ಜೆಎಸಿಯ ಮುಖ್ಯಸ್ಥರಾಗಿ ಸಿಜೆಐ ಇರುತ್ತಿದ್ದರು. ಇವರಲ್ಲದೆ, ಸುಪ್ರೀಂಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಕೇಂದ್ರ ಕಾನೂನು ಸಚಿವರು ಮತ್ತು ಇಬ್ಬರು ‘ಹಿರಿಯ ವ್ಯಕ್ತಿಗಳು’ ಇದರಲ್ಲಿ ಇರುತ್ತಿದ್ದರು. ನ್ಯಾಯಮೂರ್ತಿ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಇದಕ್ಕೆ ಇತ್ತು. ಇಬ್ಬರು ಸದಸ್ಯರು ಒಟ್ಟಾಗಿ ಒಬ್ಬ ವ್ಯಕ್ತಿಯ ವಿರುದ್ಧ ‘ವಿಟೊ’ ಅಧಿಕಾರ ಚಲಾಯಿಸಿದರೆ ಅಂಥವರನ್ನು ನ್ಯಾಯಮೂರ್ತಿಯನ್ನಾಗಿ ನೇಮಿಸಲು ಅವಕಾಶ ಇರುತ್ತಿರಲಿಲ್ಲ.

ಹೊಸದಾಗಿ ತಂದ ಕಾಯ್ದೆ ಮತ್ತು ಸಂವಿಧಾನ ತಿದ್ದುಪಡಿಯ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಇವು ಅಸಾಂವಿಧಾನಿಕ ಎಂದು ಕೋರ್ಟ್‌ ಹೇಳಿದೆ. ಈ ತೀರ್ಪಿನ ಬಗ್ಗೆ ಸಾಕಷ್ಟು ಟೀಕೆಗಳು ಬಂದಿರಬಹುದು. ಆದರೆ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೀಡಿರುವ ತೀರ್ಪನ್ನು ನಾನು ಒಪ್ಪುತ್ತೇನೆ. ನ್ಯಾಯಾಂಗಕ್ಕೆ ನಡೆಯುವ ನೇಮಕಾತಿಗಳು ಇನ್ನಷ್ಟು ಪಾರ್ದರ್ಶಕವಾಗಿ, ಉತ್ತರದಾಯಿ ಆಗಿ ಮತ್ತು ಪ್ರತಿಭೆಯ ಮಾನದಂಡದ ಅಡಿ ನಡೆಯುವಂತೆ ಮಾಡುವ ಉದ್ದೇಶ ಕಾಯ್ದೆಗೆ ಇದ್ದಿತ್ತೇನೋ. ಆದರೆ, ಹೀಗೆ ಮಾಡಲು ಬೇಕಿರುವ ಯಾವುದೇ ಅಂಶ ಕಾನೂನಿನಲ್ಲಿ ಅಡಕವಾಗಿರಲಿಲ್ಲ.

‘ಹಿರಿಯ ವ್ಯಕ್ತಿಗಳು’ ಎಂಬುದಕ್ಕೆ ವ್ಯಾಖ್ಯಾನವೇ ಇರಲಿಲ್ಲ. ಅವರನ್ನು ಎನ್‌ಜೆಎಸಿಗೆ ‘ಹೇಗೆ’ ಆಯ್ಕೆ ಮಾಡಲಾಗುತ್ತದೆ ಎಂಬ ವಿವರವೂ ಕಾಯ್ದೆಯಲ್ಲಿ ಇರಲಿಲ್ಲ. ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸಿಜೆಐ ಇರುವ ಸಮಿತಿ ಅವರನ್ನು ನೇಮಿಸುತ್ತದೆ ಎಂದು ಕಾನೂನು ಹೇಳಿತ್ತು. ಅವರು ಕೇಂದ್ರ ಸರ್ಕಾರಕ್ಕೆ ಬೇಕಾದವರಾಗಿರುವ ಸಾಧ್ಯತೆ ಇತ್ತು. ಆವಾಗ, ನ್ಯಾಯಮೂರ್ತಿಗಳ ನೇಮಕವನ್ನು ಕಾರ್ಯಾಂಗವೇ ನಿಯಂತ್ರಿಸುವಂತೆ ಆಗುತ್ತಿತ್ತು.

ನ್ಯಾಯಾಂಗಕ್ಕೆ ಸಂಬಂಧವೇ ಇಲ್ಲದವರನ್ನು, ವಕೀಲಿ ವೃತ್ತಿಯ ಅರಿವೇ ಇಲ್ಲದವರನ್ನು ‘ಹಿರಿಯ ವ್ಯಕ್ತಿಗಳು’ ಎಂದು ನೇಮಿಸಬಹುದಿತ್ತು. ಈ ಇಬ್ಬರು ಹಿರಿಯ ವ್ಯಕ್ತಿಗಳು, ಸಿಜೆಐ ಮತ್ತು ಎನ್‌ಜೆಎಸಿಯಲ್ಲಿರುತ್ತಿದ್ದ ಇತರ ಇಬ್ಬರು ಹಿರಿಯ ನ್ಯಾಯಮೂರ್ತಿಗಳು ಅವಿರೋಧವಾಗಿ ಆಯ್ಕೆ ಮಾಡಿದ ವ್ಯಕ್ತಿಯೊಬ್ಬರು ನ್ಯಾಯಮೂರ್ತಿ ಸ್ಥಾನಕ್ಕೆ ಬರದಂತೆ ಮಾಡಬಹುದಿತ್ತು. ಇದು ಆಘಾತಕಾರಿ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು ಸರಿಯಾಗಿಯೇ ಇದೆ.

ಈ ವ್ಯವಸ್ಥೆಯಿಂದ ಕಾರ್ಯಾಂಗಕ್ಕೆ ಅತಿಯಾದ ಅಧಿಕಾರ ಸಿಗುತ್ತಿತ್ತು. ಹೀಗಾಗಬೇಕು ಎಂದು ನಮ್ಮ ಸಂವಿಧಾನ ನಿರ್ಮಾತೃಗಳು ಬಯಸಿರಲಿಲ್ಲ. ನ್ಯಾಯಮೂರ್ತಿಗಳ ನೇಮಕ ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ನಡುವೆ ನೇರ ನಂಟಿದೆ ಎಂಬ ಬಗ್ಗೆ ಅನುಮಾನವೇ ಇಲ್ಲ. ಎನ್‌ಜೆಎಸಿ ಕಾಯ್ದೆಯನ್ನು ಅಸಿಂಧುಗೊಳಿಸಿದ್ದರೂ, ಕೊಲಿಜಿಯಂ ವ್ಯವಸ್ಥೆಯ ಸುಧಾರಣೆಗೆ ಸುಪ್ರೀಂ ಕೋರ್ಟ್‌ ಸಲಹೆ ಕೇಳಿದೆ. ಇದೊಂದು ಉತ್ತಮ ಬೆಳವಣಿಗೆ.

ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯನ್ನು ನಿಜಕ್ಕೂ ಪಾರದರ್ಶಕ ಆಗಿ, ಅರ್ಹತೆಯ ನೆಲೆಯಲ್ಲಿ ಮತ್ತು ಎಲ್ಲ ವರ್ಗಗಳನ್ನು ಪ್ರತಿನಿಧಿಸುವಂತೆ ಮಾಡುವುದು ಹೇಗೆ ಎಂಬ ಬಗ್ಗೆ ಸಲಹೆ ನೀಡುವ ಅವಕಾಶ ಇದೆ. ಕೊಲಿಜಿಯಂ ವ್ಯವಸ್ಥೆಯ ಮೂಲಕ ನ್ಯಾಯಮೂರ್ತಿಗಳು ತಮಗೆ ಬೇಕಾದವರನ್ನೇ ನೇಮಿಸುತ್ತಾರೆ, ನೇಮಕ ಪ್ರಕ್ರಿಯೆ ಅತ್ಯಂತ ಗೋಪ್ಯವಾಗಿರುತ್ತದೆ, ಅಲ್ಲಿ ಪ್ರತಿಭೆಯ ಆಧಾರದಲ್ಲಿ ನೇಮಕ ನಡೆಯುವುದಿಲ್ಲ ಎಂಬುದು ಈ ವ್ಯವಸ್ಥೆ ಬಗ್ಗೆ ಇರುವ ಅತಿದೊಡ್ಡ ಆರೋಪ.

ನ್ಯಾಯಮೂರ್ತಿಗಳ ಹುದ್ದೆಗೆ ಅತ್ಯಂತ ಶ್ರೇಷ್ಠ ವ್ಯಕ್ತಿಗಳ ಹೆಸರೇ ಶಿಫಾರಸು ಆಗುವಂತೆ ಕೊಲಿಜಿಯಂ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಇದು ಸಕಾಲ. ಕೊಲಿಜಿಯಂ ಮೂಲಕ ನಡೆಯುವ ನೇಮಕ ಪಾರ್ದರ್ಶಕ ಆಗಬೇಕು, ನ್ಯಾಯಮೂರ್ತಿ ಸ್ಥಾನ ನಿಭಾಯಿಸುವ ಇಚ್ಛೆ ಇರುವವರು ಕೊಲಿಜಿಯಂಗೆ ಅರ್ಜಿ ಸಲ್ಲಿಸುವ ಅವಕಾಶ ದೊರೆಯಬೇಕು, ನೇಮಕ ಪ್ರಕ್ರಿಯೆಯಲ್ಲಿ ಜಾತಿ, ಲಿಂಗ ಮತ್ತು ಧರ್ಮಗಳ ನೆಲೆಯಲ್ಲಿ ಪ್ರಾತಿನಿಧ್ಯ ಇರುವಂತಾಗಬೇಕು... ಇವೆಲ್ಲಕ್ಕಿಂತ ಮಿಗಿಲಾಗಿ, ವ್ಯಕ್ತಿಯ ಪ್ರತಿಭೆ ಮತ್ತು ಪ್ರಾಮಾಣಿಕತೆಯನ್ನು ಪರಿಗಣಿಸಿ ನೇಮಕ ಮಾಡುವ ಮುಕ್ತ ಮತ್ತು ನ್ಯಾಯಸಮ್ಮತ ವ್ಯವಸ್ಥೆ ಬರಬೇಕು.

ಲೇಖಕಿ ಹೈಕೋರ್ಟ್‌ನಲ್ಲಿ ವಕೀಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT