ತುರೇಮಣೆ ತ್ವಾಟಕ್ಕೋಗಿದ್ದಾಗ ಒಬ್ಬ ಟೀವಿ ಕ್ಯಾಮೆರಾ ಹೊತಗಂಡೋನು, ಇನ್ನೊಬ್ಬ ಮೈಕ್ ಹಿಡಕಂಡೋನು ನಮ್ಮ ಹಿಂದುಗಡೆಲೆ ಮೆಲ್ಲಗೆ ಬಂದು ‘ಸಾ, ನೀವು ರೈತರಾ?’ ಅಂತ ಕೇಳಿದ್ದಕ್ಕೆ ತುರೇಮಣೆ ‘ಹ್ಞೂಂ ಕನ್ಲಾ’ ಅಂದರು.
‘ಸಾ, ನಾವು ಬಳಂಗ್ ಚಾನಲ್ ವದರಿಗಾರರು. ರೈತರ ಆತ್ಮಹತ್ಯೆಯ ಲೈವ್ ತಕ್ಕಬರಬೇಕು ಅಂತ ಆಪೀಸಲ್ಲಿ ಯೇಳ್ಯವುರೆ. ನೀವಿಬ್ರೂ ಎಲ್ಲಿಗೋಯ್ತಾ ಇದೀರ?’ ಅಂತಂದ. ತುರೇಮಣೆಗೆ ಸಿಟ್ಟು ಬಂದು ‘ನಿನ್ನಯ್ಯನ್! ಸುಡುಗಾಡಿಗೆ ಹೋಯ್ತಾ ಇದೀವಿ ಬತ್ತೀಲಾ?’ ಅಂದ್ರು.
ಬಳಂಗಿಗೆ ಇದು ಜೋಡಿ ಆತ್ಮಹತ್ಯೆ ಕೇಸು ಅಂತ ಕನ್ಫರ್ಮ್ ಆಯ್ತು. ‘ರೈತರು ಆತ್ಮಹತ್ಯೆ ಯಾಕೆ ಮಾಡಿಕ್ಯತರೆ ಸಾ’ ಅಂತು ಬಳಂಗು.
‘ರೈತರಿಗೆ ದನ-ಕರ, ಒಳ್ಳೆ ಬೀಜ, ಗೊಬ್ಬರ, ಬೆಳೆಗೆ ಒಳ್ಳೆ ಬೆಲೆ, ಕೋಲ್ಡ್ ಸ್ಟೋರೇಜು ಮಾಡಿಕೊಡಿರ್ಲಾ! ರೈತರ ಜಮೀನು ಅವರ ತಾವೇ ಇರಲಿ’ ಅಂದ್ರು ತುರೇಮಣೆ.