ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಚಾರ್‌ಧಾಮ್ ಸುರಂಗ ಕುಸಿತ–ಅಸಮತೋಲನಕ್ಕೆ ಉತ್ತರ ಹೇಳುತ್ತಿದೆ ಪ್ರಕೃತಿ

ಸಂಪಾದಕೀಯ
Published 15 ನವೆಂಬರ್ 2023, 19:38 IST
Last Updated 15 ನವೆಂಬರ್ 2023, 19:38 IST
ಅಕ್ಷರ ಗಾತ್ರ

ಹಿಮಾಲಯದ ತಪ್ಪಲಿನಲ್ಲಿ ದುರ್ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿವೆ. ಇಂತಹ ಪ್ರಕರಣಗಳು ಅಲ್ಲಿ ಕಟ್ಟಡ ಹಾಗೂ ಇತರ ನಿರ್ಮಾಣ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಬೇಕಾದ ಅಗತ್ಯ ಇದೆ ಎಂಬುದನ್ನು ಹೇಳುತ್ತಿವೆ. ಉತ್ತರಾಖಂಡದಲ್ಲಿ ಚಾರ್‌ಧಾಮ್ ಹೆದ್ದಾರಿಯ ಭಾಗವಾದ ಸುರಂಗದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 40 ಜನ ಕಾರ್ಮಿಕರು ಭಾನುವಾರದಿಂದ ಆ ಸುರಂಗದಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆದಿದೆ.

ಅವರನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಉತ್ತರಕಾಶಿ ಪ್ರದೇಶದ ಬ್ರಹ್ಮಖಾಲ್‌ ಮತ್ತು ಯಮುನೋತ್ರಿ ನಡುವಿನ ಪ್ರದೇಶದಲ್ಲಿನ ಈ ಸುರಂಗ ಕುಸಿದು ಕಾರ್ಮಿಕರು ಅದರ ಒಳಗೆ ಸಿಲುಕಿದ್ದಾರೆ. ಈ ಯೋಜನೆಯ ಬಗ್ಗೆ ವಿವಾದಗಳು ಇವೆ ಎಂಬುದು ಇಲ್ಲಿ ಗಮನಾರ್ಹ. ಈ ಪ್ರದೇಶದ ನಾಲ್ಕು ಯಾತ್ರಾಸ್ಥಳಗಳನ್ನು ಅಗಲವಾದ ರಸ್ತೆಗಳೊಂದಿಗೆ ಸಂಪರ್ಕಿಸುವ ಉದ್ದೇಶದ ಯೋಜನೆಯು ತೀವ್ರ ಟೀಕೆಗೆ ಗುರಿಯಾಗಿದೆ.

ಇದು ಪರಿಸರದ ದೃಷ್ಟಿಯಿಂದ ಅಪಾಯಕಾರಿ ಎಂದು ತಜ್ಞರು ಹೇಳಿದ್ದಾರೆ. ಆದರೆ ಸರ್ಕಾರವು ಹಲವು ನಿಯಮಗಳನ್ನು ಉಲ್ಲಂಘಿಸಿ, ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸರಿಯಾದ ಅಧ್ಯಯನ ನಡೆಸದೆ ಈ ಯೋಜನೆಯ ಅನುಷ್ಠಾನವನ್ನುಮುಂದುವರಿಸಿದೆ. ಯೋಜನೆಯ ಜಾರಿಗಾಗಿ ಅಂದಾಜು 690 ಹೆಕ್ಟೇರ್ ಅರಣ್ಯ ನಾಶವಾಗುತ್ತದೆ, 55 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ, ಅಂದಾಜು 2 ಕೋಟಿ ಕ್ಯೂಬಿಕ್ ಮೀಟರ್‌ನಷ್ಟು ಮಣ್ಣನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಎತ್ತಿಹಾಕಬೇಕಾಗುತ್ತದೆ. ಇಳಿಜಾರು ಪ್ರದೇಶದಲ್ಲಿ ಮಣ್ಣನ್ನು ತೆಗೆಯುವುದು, ಸುರಂಗ ನಿರ್ಮಾಣ, ತ್ಯಾಜ್ಯದ ಸೃಷ್ಟಿಯು ಈ ಸೂಕ್ಷ್ಮ ಪ್ರದೇಶದ ಮೇಲೆ ಅಗಾಧ ಒತ್ತಡವನ್ನು ಸೃಷ್ಟಿಸುತ್ತವೆ.

ಹಿಮಾಲಯ ಪ್ರದೇಶದ ಎತ್ತರದ ಸ್ಥಳಗಳು ಹಾಗೂ ತಪ್ಪಲಿನ ಜಾಗಗಳು ಮಣ್ಣು ಕುಸಿಯುವ ಅಪಾಯವನ್ನು ಎದುರಿಸುತ್ತಿವೆ. ಹಠಾತ್ ಪ್ರವಾಹ ಮತ್ತು ಭೂಕಂಪನದ ಅಪಾಯಗಳೂ ಇಲ್ಲಿ ಹೆಚ್ಚು. ಇಂತಹ ಘಟನೆಗಳು ಈ ಪ್ರದೇಶಗಳಲ್ಲಿ ಈಚಿನ ತಿಂಗಳುಗಳಲ್ಲಿ ಆಗುತ್ತಲೇ ಇವೆ. ಇದರಿಂದಾಗಿ ದುರ್ಘಟನೆಗಳು ಸಹ ಹೆಚ್ಚುತ್ತಿವೆ. ಜೋಶಿಮಠ ಪ್ರದೇಶದ ಹಲವೆಡೆ ಕಳೆದ ವರ್ಷ ಬಿರುಕುಗಳು ಮೂಡಿದ್ದವು, ಕೆಲವು ಪ್ರದೇಶಗಳು ಕುಸಿದಿದ್ದವು. ಅಲ್ಲಿ ನೆಲ ಕುಸಿಯುವುದು ಮುಂದುವರಿದಿದೆ.

ತೀರಾ ಈಚೆಗೆ ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು. ಒಂದೆರಡು ತಿಂಗಳ ಹಿಂದೆ ಸಿಕ್ಕಿಂನಲ್ಲಿ ನಡೆದ ನೀರ್ಗಲ್ಲು ಸ್ಫೋಟದ ಪರಿಣಾಮವಾಗಿ ತೀಸ್ತಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಇದರಿಂದಾಗಿ ಜನ ಪ್ರಾಣ ಕಳೆದುಕೊಂಡರು, ಆಸ್ತಿ–ಪಾಸ್ತಿ ನಷ್ಟ ಆಯಿತು. ಚುಂಗ್‌ಥಾಂಗ್‌ ಅಣೆಕಟ್ಟಿನ ಕೆಲವು ಭಾಗಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದವು.

ಅಸ್ಸಾಂ–ಅರುಣಾಚಲ ಪ್ರದೇಶ ಗಡಿಯ ಸುಬನ್‌ಸಿರಿ ಕೆಳದಂಡೆ ವಿದ್ಯುತ್ ಯೋಜನೆ ಪ್ರದೇಶದಲ್ಲಿ ಈಚೆಗೆ ಆದ ಭೂಕುಸಿತದ ಪರಿಣಾಮವಾಗಿ ನಿರ್ಮಾಣ ಕಾರ್ಯಗಳಿಗೆ ತೊಂದರೆ ಉಂಟಾಗಿತ್ತು, ಇಂತಹ ಯೋಜನೆಗಳ ಕುರಿತು ಇರುವ ಕಳವಳವನ್ನು ಇನ್ನಷ್ಟು ಹೆಚ್ಚು ಮಾಡಿತ್ತು. ನೀರಿನ ಹರಿವನ್ನು ಈ ಸ್ಥಳದಿಂದ ಬೇರೆಡೆಗೆ ತಿರುಗಿಸಲು ನಿರ್ಮಿಸಿದ್ದ ಸುರಂಗಕ್ಕೆ ಹಾನಿಯಾಗಿದೆ. ಹಿಮಾಲಯದ ಪರ್ವತ ಪ್ರದೇಶದಲ್ಲಿ ಪ್ರಕೃತಿಗೆ ತನ್ನ ಮೇಲಿನ ಒತ್ತಡವನ್ನು ತಾಳಿಕೊಳ್ಳಲು ಆಗುತ್ತಿಲ್ಲ.

ಅದನ್ನು ಪ್ರಕೃತಿಯು ಭೂಕುಸಿತ, ಹಠಾತ್ ಪ್ರವಾಹ ಹಾಗೂ ಇತರ ವಿಕೋಪಗಳ ರೂಪದಲ್ಲಿ ತೋರಿಸುತ್ತಿದ್ದಾಳೆ. ಮನುಷ್ಯ ನಡೆಸಿದ ದಾಳಿಯ ಕಾರಣದಿಂದಾಗಿ ಉಂಟಾಗಿರುವ ಅಸಮತೋಲನವನ್ನು ಸರಿಪಡಿಸಲು ಹಿಮಾಲಯ ಪರ್ವತ ಶ್ರೇಣಿಗಳು ಪ್ರಯತ್ನ ನಡೆಸಿವೆ. ಈ ಸಂಘರ್ಷದಲ್ಲಿ ಜಯ ಗಳಿಸುವುದು ಯಾರು ಎಂಬ ಬಗ್ಗೆ ಅನುಮಾನ ಬೇಕಿಲ್ಲ. ಆದರೆ ಸೋಲುವುದು ಖಚಿತ ಎಂಬುದು ಗೊತ್ತಿದ್ದೂ ಮನುಷ್ಯನು ಪ್ರಕೃತಿಯ ಮೇಲಿನ ತನ್ನ ಪ್ರಹಾರವನ್ನು ಮುಂದುವರಿಸಿದ್ದಾನೆ.

ಮೂಲಸೌಕರ್ಯ ನಿರ್ಮಾಣ ಹಾಗೂ ಅಭಿವೃದ್ಧಿ ಕೆಲಸಗಳು ದೇಶದ ಎಲ್ಲ ಕಡೆಗಳಲ್ಲಿಯೂ ಆಗಬೇಕು ಎಂಬುದು ನಿಜ. ಆದರೆ, ಅಂತಹ ಚಟುವಟಿಕೆಗಳಿಂದ ಒಳಿತಿಗಿಂತ ಹೆಚ್ಚಾಗಿ ಕೆಡುಕು ಸಂಭವಿಸಿದಾಗ, ಮಾಡಿದ ಕೆಲಸದ ಕುರಿತು ಪುನರ್ ಅವಲೋಕಿಸುವ ಹಾಗೂ ತಪ್ಪು ತಿದ್ದಿಕೊಳ್ಳುವ ಧೋರಣೆಯು ಮನುಷ್ಯನಿಗೆ ಇರಬೇಕು. ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ಅಭಿವೃದ್ಧಿ ಸೂತ್ರಗಳ ಅಗತ್ಯ ಇದೆ. ಚಾರ್‌ಧಾಮ್ ಯೋಜನೆಯ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಬಹಳ ದೊಡ್ಡವೇ ಆಗಿವೆ. ಇಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಒಂದು ಆದ್ಯತೆ ಮಾತ್ರ. ಪರಿಸರ ಹಿತವನ್ನು ಮನಸ್ಸಿನಲ್ಲಿ ಇರಿಸಿಕೊಳ್ಳದೇ ಹೋದರೆ ಇಡೀ ಹಿಮಾಲಯ ಪ್ರದೇಶ ಹಾಗೂ ಇಡೀ ದೇಶ ತೊಂದರೆಗೆ ಸಿಲುಕುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT