ಹೊಸ ಹಣಕಾಸು ವರ್ಷಕ್ಕೆ (2014–15) ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಪ್ರಕಟಿಸಿದ ಮೊದಲ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಯಥಾಸ್ಥಿತಿ ಹೊರತುಪಡಿಸಿದರೆ ಹೊಸತೇನೂ ಕಾಣುವುದಿಲ್ಲ. ಅಲ್ಪಾವಧಿ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡದಿರುವುದಕ್ಕೆ ಚುನಾವಣಾ ನೀತಿ ಸಂಹಿತೆ ಕಾರಣವಾಗಿರಬಹುದು.
ಆರ್ಬಿಐನ ಈ ನಡೆಯು, ಕೈಗಾರಿಕೆ ಮತ್ತು ಉದ್ಯಮ ವಲಯದಲ್ಲಿ ಸಹಜವಾಗಿಯೇ ನಿರಾಶೆ ಮೂಡಿಸಿದೆ. ಕೇಂದ್ರೀಯ ಬ್ಯಾಂಕ್ನ ಹಾದಿಯಲ್ಲಿಯೇ ಸಾಗಲು ನಿರ್ಧರಿಸಿರುವ ವಾಣಿಜ್ಯ ಬ್ಯಾಂಕ್ಗಳು, ಗೃಹ, ವಾಹನ, ವಾಣಿಜ್ಯ ಮತ್ತಿತರ ಸಾಲಗಳ ಮೇಲಿನ ಬಡ್ಡಿ ದರ ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವುದು ಗ್ರಾಹಕರ ಪಾಲಿಗೆ ಕಹಿಯಾಗಿ ಪರಿಣಮಿಸಲಿದೆ. ಹಣದುಬ್ಬರ ನಿಗ್ರಹಕ್ಕೆ ಮತ್ತೆ ಆದ್ಯತೆ ನೀಡಿರುವುದು ಈ ಬಾರಿಯೂ ಸ್ಪಷ್ಟಗೊಳ್ಳುತ್ತದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ಮತ್ತು ಚಿಲ್ಲರೆ ಹಣದುಬ್ಬರವು ‘ಹಿತಕರ ಮಟ್ಟ’ದಲ್ಲಿ ಇರುವಾಗ, ಅಲ್ಪಾವಧಿ ಬಡ್ಡಿ ದರ ಕಡಿಮೆಯಾಗಲಿದೆ ಎಂದೇ ಉದ್ಯಮ ವಲಯ ಬಹುವಾಗಿ ನಿರೀಕ್ಷಿಸಿತ್ತು.
ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಬಡ್ಡಿ ದರಗಳು ಕಡಿಮೆಯಾಗುವುದು ಸದ್ಯಕ್ಕೆ ಅನಿವಾರ್ಯವೂ ಆಗಿದೆ. ಕೈಗಾರಿಕಾ ಬೆಳವಣಿಗೆ ಕುಂಠಿತಗೊಂಡಿರುವ ಸದ್ಯದ ನಿರಾಶಾದಾಯಕ ಸಂದರ್ಭದಲ್ಲಿ ಬಡ್ಡಿ ದರಗಳಲ್ಲಿ ಕಡಿತ ಮಾಡಿದ್ದರೆ ಅದರಿಂದ ಸರಕುಗಳಿಗೆ ಬೇಡಿಕೆ ಹೆಚ್ಚಳಗೊಂಡು ಬಂಡವಾಳ ಹೂಡಿಕೆ ಪ್ರಕ್ರಿಯೆಗೆ ಚಾಲನೆ ಸಿಗುತ್ತಿತ್ತು. ಅಂತಹ ನಿರೀಕ್ಷೆಯನ್ನು ಕೇಂದ್ರೀಯ ಬ್ಯಾಂಕ್ ಹುಸಿ ಮಾಡಿದೆ. ಇನ್ನೊಂದು ಅರ್ಥದಲ್ಲಿ ಅಲ್ಪಾವಧಿ ಬಡ್ಡಿ ದರಗಳು ಈಗಾಗಲೇ ಗರಿಷ್ಠ ಮಟ್ಟ ತಲುಪಿದ್ದು, ಮುಂಬರುವ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆಗಳಿವೆ ಎನ್ನುವ ಆಶಾಭಾವನೆಯನ್ನೂ ಮೂಡಿಸಿದೆ. ಅಂತಹ ನಿರೀಕ್ಷೆ ಆದಷ್ಟು ಬೇಗ ಕಾರ್ಯಗತಗೊಳ್ಳಲಿ.
ಸದ್ಯದ ಆರ್ಥಿಕ ಪರಿಸ್ಥಿತಿಯ ನಿರಾಶಾದಾಯಕ ಚಿತ್ರಣ ಏನೇ ಇರಲಿ, 2014–15ನೇ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 5.5 ರಷ್ಟಾಗಲಿದೆ ಎಂದು ಅಂದಾಜಿಸಿರುವುದು ಮಾತ್ರ ಆಶಾದಾಯಕವಾಗಿದೆ. ಕೈಗಾರಿಕೆ ಮತ್ತು ಸೇವಾ ವಲಯದಲ್ಲಿನ ಸುಧಾರಣೆಯು ವೃದ್ಧಿ ದರ ಹೆಚ್ಚಿಸಲು ಖಂಡಿತವಾಗಿಯೂ ನೆರವಾಗಲಿದೆ.
ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಗೆ ಯಾವುದೇ ದಂಡ ವಿಧಿಸಬಾರದು ಎಂದು ಆರ್ಬಿಐ, ಸ್ಪಷ್ಟ ಸೂಚನೆ ನೀಡಿರುವುದು ‘ಗ್ರಾಹಕ ಸ್ನೇಹಿ’ ನಿರ್ಧಾರವಾಗಿದೆ. ಅದರಲ್ಲೂ ವಿಶೇಷವಾಗಿ ಖಾಸಗಿ ಬ್ಯಾಂಕ್ಗಳು ವಿಧಿಸುತ್ತಿದ್ದ ದಂಡ ಈಗ ಕೊನೆಯಾಗಲಿದ್ದು, ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ. ಹೊಸ ಬ್ಯಾಂಕ್ಗಳ ಲೈಸನ್ಸ್ ನೀಡಿಕೆಗೆ ಸಂಬಂಧಿಸಿದ ವಿವಾದವೂ ಈಗ ಬಗೆಹರಿದಿರುವುದು ಇನ್ನೊಂದು ಸಕಾರಾತ್ಮಕ ಬೆಳವಣಿಗೆ.
ಚುನಾವಣಾ ಆಯೋಗವು ಆರ್ಬಿಐಗೆ ಹಸಿರು ನಿಶಾನೆ ನೀಡಿರುವುದರಿಂದ ಹೊಸ ಬ್ಯಾಂಕ್ಗಳು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿವೆ. ಹೊಸ ಬ್ಯಾಂಕ್ ಸ್ಥಾಪನೆಗೆ ಒಟ್ಟು 25 ಅರ್ಜಿಗಳು ಬಂದಿದ್ದು, ಅರ್ಹತೆ ಆಧರಿಸಿ ಅನುಮತಿ ನೀಡುವ ವಿಚಾರವು ಸಾರ್ವಜನಿಕ ವಲಯದಲ್ಲಿ ಸಹಜವಾಗಿಯೇ ಸಾಕಷ್ಟು ಕುತೂಹಲ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.