ವಿಶ್ವ ವಾಣಿಜ್ಯ ಸಂಘಟನೆಯ ಮಾತುಕತೆಗೆ (ಡಬ್ಲ್ಯುಟಿಒ) ಸಂಬಂಧಿಸಿದಂತೆ ಜಿನಿವಾದಲ್ಲಿ ನಡೆದ ಸಭೆಯಲ್ಲಿ ಆಹಾರ ಭದ್ರತೆ ಕುರಿತು ಭಾರತ ತನ್ನ ದೃಢ ನಿಲುವು ಸ್ಪಷ್ಟಪಡಿಸಿ,ಒಪ್ಪಂದಕ್ಕೆ ಸಹಿ ಹಾಕದಿರಲು ನಿರ್ಧರಿಸಿದೆ. ಡಿಸೆಂಬರ್ನಲ್ಲಿ ಬಾಲಿಯಲ್ಲಿ ನಡೆದಿದ್ದ ಒಪ್ಪಂದಕ್ಕೆ ಸಮ್ಮತಿ ಮುದ್ರೆ ಒತ್ತಬೇಕಾಗಿದ್ದ ಈ ಸಭೆಯಲ್ಲಿ, ಭಾರತ ತನ್ನ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದರಲ್ಲಿ ದೇಶದ ರೈತರ, ಬಡವರ ಹಿತಾಸಕ್ತಿ ರಕ್ಷಣೆಯೇ ಮುಖ್ಯವಾಗಿರುವುದು ಸರಿಯಾಗಿಯೇ ಇದೆ. ಬಾಲಿ ಸಮಾವೇಶದ ಆಶಯಕ್ಕೆ ಬೆಂಬಲ ಸಿಗದಿರುವುದರಿಂದ ಭಾರತ ಸಹಜವಾಗಿಯೇ ಪಟ್ಟು ಸಡಿಲಿಸಿಲ್ಲ.
ಭಾರತ ತಳೆದಿರುವ ನಿಲುವಿನಿಂದಾಗಿ, ಈ ತಿಂಗಳ ಅಂತ್ಯದೊಳಗೆ ವಾಣಿಜ್ಯ ಸೌಲಭ್ಯ ಒಪ್ಪಂದಕ್ಕೆ (ಟಿಎಫ್ಎ) ಎಲ್ಲ ಸದಸ್ಯ ದೇಶಗಳಿಂದ ಸಹಿ ಹಾಕಿಸಿಕೊಳ್ಳುವ ಉದ್ದೇಶಕ್ಕೆ ಈಗ ಮತ್ತೊಂದು ವಿಘ್ನ ಎದುರಾಗಿದೆ. ನನೆಗುದಿಗೆ ಬಿದ್ದಿದ್ದ ಮಾತುಕತೆಗಳಿಗೆ ಚಾಲನೆ ಸಿಕ್ಕ ಸಂದರ್ಭದಲ್ಲಿಯೇ ಈ ಅಡ್ಡಿ ಎದುರಾಗಿರುವುದು ಅಪೇಕ್ಷಣೀಯವಲ್ಲ. ದೇಶಗಳ ಮಧ್ಯೆ ಆಹಾರ ಧಾನ್ಯಗಳ ತ್ವರಿತಗತಿಯ ಆಮದು – ರಫ್ತಿಗೆ ಅವಕಾಶ ಕಲ್ಪಿಸಿಕೊಡುವುದೇ ಟಿಎಫ್ಎ ಮುಖ್ಯ ಉದ್ದೇಶ. ಇಲ್ಲಿ ಸದಸ್ಯ ದೇಶಗಳ ಸಮಾನ ಹಿತಾಸಕ್ತಿ ರಕ್ಷಣೆಯೂ ಮುಖ್ಯವಾಗಿರಬೇಕು. ಈ ಒಪ್ಪಂದವು ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಗಳ ಬಡವರ ಆಹಾರ ಭದ್ರತೆಗೆ ಬೆದರಿಕೆ ಒಡ್ಡಲಿದೆ. ಯಾವುದೇ ದೇಶವು ತನ್ನ ಕೃಷಿ ಉತ್ಪನ್ನಗಳಿಗೆ ನೀಡುವ ಸಬ್ಸಿಡಿಯು ಕೃಷಿ ಉತ್ಪಾದನೆಯ ಒಟ್ಟು ಮೌಲ್ಯದ ಶೇ 10ಕ್ಕಿಂತ ಹೆಚ್ಚಿಗೆ ಇರಬಾರದು ಎನ್ನುವ ಷರತ್ತು ಉಲ್ಲಂಘಿಸಿದರೆ ವಾಣಿಜ್ಯ ನಿಷೇಧದ ದಂಡನೆ ಇರುವುದೇ ಬಡ ದೇಶಗಳ ಚಿಂತೆಗೆ ಕಾರಣವಾಗಿದೆ.
ನಮ್ಮಲ್ಲಿ ಪಡಿತರ ವ್ಯವಸ್ಥೆ ಮೂಲಕ ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ವಿದ್ಯುತ್, ರಸಗೊಬ್ಬರ ಖರೀದಿಯಲ್ಲಿಯೂ ಸಬ್ಸಿಡಿ ನೀಡುತ್ತಿರುವಾಗ ಶೇ 10 ಮಿತಿ ಪಾಲನೆ ಸಾಧ್ಯವಾಗುವುದಿಲ್ಲ ಎನ್ನುವುದು ಭಾರತದ ನಿಲುವಾಗಿದೆ. ಇದಕ್ಕೆ ಕಿವಿಗೊಡದ ಶ್ರೀಮಂತ ದೇಶಗಳು ತಮ್ಮ ವ್ಯಾಪಾರ ಹಿತಾಸಕ್ತಿಗೆ ಆದ್ಯತೆ ನೀಡಿ, ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಹಕ್ಕೊತ್ತಾಯಕ್ಕೆ ಕಿವಿಗೊಡುತ್ತಿಲ್ಲ. ರೈತರಿಗೆ ಸಬ್ಸಿಡಿ ನೀಡಿಕೆ ಮತ್ತು ಆಹಾರ ಸಂಗ್ರಹ ವಿಚಾರದಲ್ಲಿ ಡಬ್ಲ್ಯುಟಿಒ, ಶ್ರೀಮಂತ ದೇಶಗಳ ಮರ್ಜಿ ಕಾಯುವುದನ್ನೂ ಬಿಟ್ಟು, ಸ್ಪಷ್ಟ ನಿಲುವು ತಳೆಯಬೇಕಾಗಿದೆ.
ಜಾಗತಿಕ ವ್ಯಾಪಾರ ಸುಧಾರಣೆ ಪ್ರಯತ್ನಗಳಿಗೆ ಭಾರತ ನೇತೃತ್ವದಲ್ಲಿನ ಬಡ ದೇಶಗಳ ನಿಲುವು ಪ್ರಮುಖ ಅಡ್ಡಿಯಾಗಬಾರದು ಎಂದರೆ, ಅಭಿವೃದ್ಧಿ ಹೊಂದಿದ ದೇಶಗಳೂ ವ್ಯಾಪಾರ ಮತ್ತು ಸಬ್ಸಿಡಿಗೆ ಸಂಬಂಧಿಸಿದಂತೆ ತಮ್ಮದೇ ಹಿತಾಸಕ್ತಿ ರಕ್ಷಿಸುವ ಮತ್ತು ಇತರ ದೇಶಗಳ ಬೇಡಿಕೆ ನಿರ್ಲಕ್ಷಿಸುವ ನಿಲುವನ್ನು ಕೈಬಿಡಬೇಕಾಗುತ್ತದೆ. ತನ್ನ ಪ್ರಜೆಗಳಿಗೆ ಆಹಾರ ಭದ್ರತೆ ಒದಗಿಸುವ ಭಾರತದ ಬದ್ಧತೆಯನ್ನು ಆರ್ಥಿಕವಾಗಿ ಸದೃಢವಾಗಿರುವ ದೇಶಗಳು ಗೌರವಿಸಲೇಬೇಕು. ಬಹುರಾಷ್ಟ್ರೀಯ ವ್ಯಾಪಾರ ಒಪ್ಪಂದವು ಮತ್ತೆ ನನೆಗುದಿಗೆ ಬೀಳದಂತೆ ನೋಡಿಕೊಳ್ಳಲು ಸಂಘಟಿತ ಪ್ರಯತ್ನ ಮಾಡಿದರೆ ಮಾತ್ರ ವಿಶ್ವ ವಾಣಿಜ್ಯ ಸುಧಾರಣಾ ಪ್ರಯತ್ನಗಳು ಮತ್ತೆ ಸರಿದಾರಿಗೆ ಬಂದಾವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.