ಪಶ್ಚಿಮ ಬಂಗಾಳದ ಬಹುಕೋಟಿ ರೂಪಾಯಿ ಮೊತ್ತದ ಶಾರದಾ ಚಿಟ್ಫಂಡ್ ಹಗರಣ ಕುರಿತು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಹಣ ತೊಡಗಿಸಿದ ಜನರಿಗೆ ನ್ಯಾಯ ದೊರೆಯುವ ಮತ್ತು ಅವ್ಯವಹಾರ ನಡೆಸಿದವರಿಗೆ ಶಿಕ್ಷೆಯಾಗುವ ಆಶಾಭಾವ ಮೂಡಿಸಿದೆ. ಶಾರದಾ ಸಂಸ್ಥೆಯ ಎಲ್ಲ ವ್ಯವಹಾರಗಳ ತನಿಖೆಗೆ ಸಿಬಿಐ, ವಿಶೇಷ ತನಿಖಾ ತಂಡವನ್ನು ನೇಮಿಸಿದೆ.
ಹಗರಣ ಕುರಿತು ಈ ಹಿಂದೆ ನಡೆದ ರಾಜ್ಯಮಟ್ಟದ ತನಿಖೆ ಫಲ ನೀಡಿರಲಿಲ್ಲ. ಶಾರದಾ ಸಂಸ್ಥೆಗೆ ಸೇರಿದವರು ರಾಜಕೀಯವಾಗಿ ಶಕ್ತಿಶಾಲಿಯಾಗಿದ್ದು ಅವರನ್ನು ಮಣಿಸುವ ಕೆಲಸ ಕಷ್ಟಕರ ಎಂಬ ಪರಿಸ್ಥಿತಿ ಇದೆ. ಆದರೆ ಸುಪ್ರೀಂ ಕೋರ್ಟ್ ಕ್ರಮ ಜನರಲ್ಲಿ ಭರವಸೆ ಚಿಗುರಿಸಿದೆ. ಹಣ ತೊಡಗಿಸಿದವರಿಗೆ ಈ ಹಿಂದೆ ರಾಜ್ಯ ಸರ್ಕಾರ ಪರಿಹಾರ ಕೊಡಲು ಮುಂದಾಗಿದ್ದರೂ ಚಿಟ್ಫಂಡ್ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದ ಹಣಕ್ಕೂ ಪರಿಹಾರ ಮೊತ್ತಕ್ಕೂ ತಾಳೆಯಾಗುತ್ತಿರಲಿಲ್ಲ.
ಶಾರದಾ ಸಂಸ್ಥೆ ಜನರಿಂದ ₨ 20,000 ಕೋಟಿ ಸಂಗ್ರಹಿಸಿದೆ. ಆದರೆ ರಾಜ್ಯ ಸರ್ಕಾರ ಪ್ರಕಟಿಸಿದ ಪರಿಹಾರದ ಮೊತ್ತ ಕೇವಲ ₨ 500 ಕೋಟಿ. ಈ ಹಗರಣ ಮುಚ್ಚಿಹಾಕಲು ರಾಜ್ಯ ಸರ್ಕಾರವೇ ಯತ್ನಿಸುತ್ತಿದೆ ಎಂಬ ಆರೋಪವೂ ಎದುರಾಗಿತ್ತು. ತಮ್ಮ ಹಣ ಮರಳಿಸಬೇಕು ಎಂದು 20.5 ಲಕ್ಷ ಜನ ಕೋರಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಬಡವರು. ವಂಚನೆಗೆ ಒಳಗಾದವರಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ.
ಜನರು ಚಿಟ್ಫಂಡ್ ಸಂಸ್ಥೆಗಳಿಂದ ವಂಚನೆಗೆ ಒಳಗಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಹತ್ತುಹಲವು ಸಂಸ್ಥೆಗಳು ಜನರ ಅಮಾಯಕತೆಯ ಲಾಭ ಪಡೆದು ಅವರನ್ನು ಸಂಕಷ್ಟದ ಪ್ರಪಾತಕ್ಕೆ ತಳ್ಳಿರುವ ನಿದರ್ಶನಗಳಿವೆ. ಆಕರ್ಷಕ ಯೋಜನೆಗಳನ್ನು ಪ್ರಕಟಿಸಿ ಜನರನ್ನು ಸಹಸ್ರ ಸಂಖ್ಯೆಯಲ್ಲಿ ಸೆಳೆದು ಕೋಟ್ಯಂತರ ರೂಪಾಯಿ ಬಾಚಿಕೊಂಡ ವಂಚಕರು ಪರಾರಿಯಾಗಿದ್ದಾರೆ.
ಇಂತಹ ಸಂಸ್ಥೆಗಳ ನಿಯಂತ್ರಣಕ್ಕೆ ಸೂಕ್ತ ಕಾನೂನು ಇಲ್ಲದಿರುವುದು ಅವುಗಳಿಗೆ ಹಣ ಸಂಗ್ರಹಿಸಿ ನಾಪತ್ತೆಯಾಗಲು ಸಹಾಯವಾಗಿದೆ. ‘ಸೆಬಿ’, ಕಂಪೆನಿಗಳ ನೋಂದಣಿ ಇಲಾಖೆ ಮತ್ತು ರಿಸರ್ವ್ ಬ್ಯಾಂಕ್ ನಿರ್ಲಕ್ಷ್ಯ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗುತ್ತದೆ. ಇಂತಹವೇ ಸುಮಾರು 1,500 ಚಿಟ್ಫಂಡ್ ಸಂಸ್ಥೆಗಳು ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶದಲ್ಲಿವೆ ಎನ್ನಲಾಗಿದೆ.
ಜನರು ಉಳಿತಾಯದ ಹಣಕ್ಕೆ ಸೂಕ್ತ ಬಡ್ಡಿ ನೀಡುವ ಹಣಕಾಸು ಸಂಸ್ಥೆಯನ್ನು ಹುಡುಕುವಾಗ ದುರದೃಷ್ಟದಿಂದ ವಂಚಕರ ಬಣ್ಣದ ಮಾತಿಗೆ ಬಲಿಯಾಗಿ ಹಣ ತೊಡಗಿಸಿ ಕಳೆದುಕೊಳ್ಳುತ್ತಾರೆ. ಅನೇಕ ಸ್ಥಳಗಳಲ್ಲಿ ಬ್ಯಾಂಕ್ ಗಳು ಅಥವಾ ನಿಯಮಾನುಸಾರ ಕಾರ್ಯನಿರ್ವಹಿಸುವ ಹಣಕಾಸು ಸಂಸ್ಥೆಗಳಿಲ್ಲದಿರುವುದರಿಂದಲೂ ವಂಚಕ ಸಂಸ್ಥೆಗಳ ಬಲೆಗಳಿಗೆ ಸುಲಭವಾಗಿ ಬೀಳುತ್ತಿದ್ದಾರೆ.
ಕೆಲವು ರಾಜ್ಯಗಳಲ್ಲಿ ಸರ್ಕಾರ ನಡೆಸುವ ಚಿಟ್ ಫಂಡ್ಗಳು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಹಣ ತೊಡಗಿಸಲು ಮುಂದಾಗುವವರಿಗೆ ಅವರ ಹೂಡಿಕೆಹಣ ಜತನವಾಗಿರಿಸುವಂತಹ ಬಿಗಿ ನಿಯಂತ್ರಣ ಕ್ರಮಗಳು ಅತ್ಯಗತ್ಯ ಎನ್ನುವ ಪಾಠವನ್ನು ಸಹಾರಾ ಮತ್ತು ಶಾರದಾ ಹಗರಣಗಳಿಂದ ಕಲಿಯಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.