ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅರಸೋಣ ಆತ್ಮಶುದ್ಧಿಯ ದಿವ್ಯಮಾರ್ಗ

ತಮ್ಮಲ್ಲಿಗೆ ಭೇಟಿ ನೀಡುವ ಗಾಂಧಿ ದ್ವೇಷಿಗಳನ್ನೂ ಹೊರ ದೇಶಗಳು ‘ಗಾಂಧಿ ನಾಡಿನಿಂದ ಬಂದವರು’ ಎಂದೇ ಆದರಣೀಯವಾಗಿ ನ
Last Updated 30 ಜನವರಿ 2023, 19:30 IST
ಅಕ್ಷರ ಗಾತ್ರ

ಮತ್ತೆ ಮತ್ತೆ ಸಂದಿಗ್ಧಗೊಳ್ಳುವ ಜಗತ್ತು ಬಿಡುಗಡೆಗೆ ಮುಖ ಮಾಡುವುದು ಅವರೆಡೆಗೇ, ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಮಾತನ್ನು ಕೃತಿಯಲ್ಲಿಯೂ ನಿರೂಪಿಸಿ, ಸಮಕಾಲೀನ ಜಾಗತಿಕ ಸ್ಮೃತಿಯಲ್ಲಿ ಅಚ್ಚೊತ್ತಿದ ಅಪರೂಪದ ದಾರ್ಶನಿಕನತ್ತ... ಹೌದು, ಇವತ್ತು ಸಾರ್ವಕಾಲಿಕ ಶ್ರೇಷ್ಠ ಮಾನವೀಯ ಸಂತ ಮಹಾತ್ಮ ಗಾಂಧೀಜಿಯನ್ನು ಜಗತ್ತು ಮತ್ತೊಮ್ಮೆ ಎದೆಯೊಳಗೆ ಬೆಳಕಾಗಿ ತಂದುಕೊಳ್ಳುತ್ತಿದೆ.

ಸರಳತೆಯ ತತ್ವಗಳು ಹಾಗೂ ಅಹಿಂಸಾಚರಣೆಯ ಬದ್ಧತೆಗಳನ್ನು ಹಾಗೆಲ್ಲಾ ಪರಿಪೂರ್ಣವಾಗಿ ಬಾಳಿ, ಬೋಧಿಸಿ, ಜನಸಾಮಾನ್ಯನೊಬ್ಬ ವಿಶ್ವಚರಿತ್ರೆಯಲ್ಲಿ ಅಸಾಮಾನ್ಯನಾಗಿ ಬೆಳೆದುನಿಂತ ಪರಿಯೇ ಕಾಲದ ಅಚ್ಚರಿ. ಗಾಂಧಿಯ ಬದುಕು ಮತ್ತು ಹೋರಾಟದ ಮಾದರಿಗಳು ಮಾನವಜಗತ್ತಿಗೆ ಎಂದಿಗೂ ದಾರಿದೀಪ ವಾಗಿ ಉಳಿಯುವಂತಹವು. ತಮ್ಮೊಳಗಿನ ಸಹಜ ದೌರ್ಬಲ್ಯಗಳನ್ನು ಮೀರಿ, ವಿನೂತನ ಆತ್ಮಸಂಯಮದ ಮಾರ್ಗವೊಂದನ್ನು ಅನ್ವೇಷಿಸಿಕೊಂಡು ಮಾದರಿ ಚಳವಳಿಯನ್ನು ಮುನ್ನಡೆಸುತ್ತಲೇ ಅವರು ಮಹಾತ್ಮ ರಾದರು.

ಚರಿತ್ರೆಯಲ್ಲಿನ ಅಸಂಖ್ಯ ಹೋರಾಟಗಳು ರಕ್ತಪಾತ ದಿಂದ ಕೊನೆಗೊಂಡು ಅಲ್ಪಾಯುಷಿಯಾದದ್ದರ ಸ್ಪಷ್ಟ ಅರಿವಿದ್ದ ಗಾಂಧೀಜಿ, ತಾತ್ವಿಕ ಅಂತ್ಯದೆಡೆಗೆ ಕೊಂಡೊಯ್ಯಬಲ್ಲ ಅಹಿಂಸಾತ್ಮಕ ಹೋರಾಟಕ್ಕೆ ಮುನ್ನುಡಿ ಬರೆದರು. ಬುದ್ಧನ ಶಾಂತಿ, ಏಸುವಿನ ಪ್ರೀತಿ, ಮಹಾವೀರನ ಅಹಿಂಸಾ ತತ್ವಗಳನ್ನು ಒಳಗೊಂಡ ಸತ್ಯಾಗ್ರಹ, ಮೌನ ಪ್ರತಿಭಟನೆ, ಅಸಹಕಾರಗಳಂತಹ ಮೃದುಹರಿತ ಸಾತ್ವಿಕಾಸ್ತ್ರಗಳನ್ನು ಪರಿಚಯಿಸಿದ ಕಾಲಪುರುಷರು. ಎದುರಾಳಿಯ ಹಿಂಸೆ, ದೌರ್ಜನ್ಯ, ಅಟ್ಟಹಾಸಗಳನ್ನು ತಮ್ಮ ಸತ್ಯ, ಶಾಂತಿ, ಅಹಿಂಸೆಯ ಅಸ್ತ್ರದೊಂದಿಗೆ ಗೆಲ್ಲುವ ಹೋರಾಟದ ಮಾದರಿಯೇ ದೈವಿಕ ಎನಿಸುವಂತಹದ್ದು!

‘ನನ್ನೊಟ್ಟಿಗಿರುವ ಎಲ್ಲರಿಗೂ ಕನಿಷ್ಠ ಅಗತ್ಯಗಳು ದೊರಕುವವರೆಗೂ ನಾನು ಸರಳವಾಗಿ ಬದುಕುತ್ತೇನೆ’ ಅಂದುಕೊಂಡ ಗಾಂಧಿ ನಿಲುವಿಗಿಂತ ದೊಡ್ಡ ಅಧ್ಯಾತ್ಮ ವೇನಿದೆ ಈ ಜಗತ್ತಿನಲ್ಲಿ? ಕುಟುಂಬದೊಟ್ಟಿಗಿದ್ದು, ಜೀವನಸಂಗ್ರಾಮವನ್ನು ಕಂಡುಂಡು ಲೌಕಿಕದ ಲೋಭವನ್ನು ಅಂಟಿಸಿಕೊಳ್ಳದೆ, ‘ಇರಬೇಕು ಇಲ್ಲದಂತಿರಬೇಕು’ ಎಂಬಂತೆ ಸಾರ್ವಜನಿಕ ಬದುಕಲ್ಲಿ ತಾತ್ವಿಕತೆಯ ದೀಪಧಾರಿಯಾಗಿ ಸದಾಕಾಲ ಉಳಿದಿರು ವುದೂ ‘ಗಾಂಧಿ’ ಎಂಬ ಸೋಜಿಗವೇ. ಸರಳತೆಯಲ್ಲಿ ದಿವ್ಯತೆಯನ್ನೂ ಸಹಜತೆಯಲ್ಲಿ ಸೌಂದರ್ಯವನ್ನೂ ಸ್ವಚ್ಛತೆಯಲ್ಲಿ ದೈವತ್ವವನ್ನೂ ಕಂಡವರು ಗಾಂಧಿ. ಬದುಕಿನುದ್ದಕ್ಕೂ ಆಡಂಬರಕ್ಕಿಂತ ಆಚರಣೆಗೆ, ವಿಜೃಂಭಣೆಗಿಂತ ವಿಚಾರಗಳಿಗೆ ಪ್ರಾಶಸ್ತ್ಯ ಸಿಗಬೇಕು, ‘ಅದ್ಧೂರಿಯ ನೆಪದಲ್ಲಿ ಮಿತಿರಹಿತವಾಗಿ, ಮತಿ ರಹಿತವಾಗಿ ಮಾಡುವ ದುಂದುವೆಚ್ಚ ಮತ್ತು ವಸ್ತು ಗಳನ್ನು ಅರ್ಧಂಬರ್ಧ ಬಳಸಿ ಬಿಸಾಕುವ ಪ್ರವೃತ್ತಿ ಅಪಾಯಕಾರಿ’ ಎಂದು ಎಚ್ಚರಿಸಿದ್ದರು ಗಾಂಧಿ.

ಗೀತೆ, ಕುರಾನ್, ಬೈಬಲ್, ಟಾಲ್‍ಸ್ಟಾಯ್ ಮತ್ತು ರಸ್ಕಿನ್ ಕೃತಿಗಳ ಆಳ ಅಧ್ಯಯನದಲ್ಲಿ ಮಾನವ ಜಗತ್ತಿನ ಅಭ್ಯುದಯವನ್ನು ಕಂಡುಕೊಂಡರು ಗಾಂಧೀಜಿ. ಅವರ ವ್ಯಕ್ತಿತ್ವ ಸ್ವಾತಂತ್ರ್ಯ ಹೋರಾಟಕ್ಕಷ್ಟೇ ಸೀಮಿತವಾಗದೆ ಅಸ್ಪೃಶ್ಯತೆ ನಿವಾರಣೆ, ನೀಲಿ ಬೆಳೆಗಾರರ ಸಂಕಷ್ಟ, ಗ್ರಾಮೋದ್ಧಾರ, ಶಿಕ್ಷಣ, ಆರ್ಥಿಕತೆ, ಪರಿಸರ ರಕ್ಷಣೆ, ಪತ್ರಿಕಾ ರಂಗ, ಮೌಲ್ಯಗಳ ಮರುಸ್ಥಾಪನೆಯಂತಹ ಕಾರ್ಯಗಳಲ್ಲೂ ಗಾಂಧೀಜಿಯ ಪ್ರಭಾವಗಳು ಢಾಳಾ ಗಿವೆ.

‘ವ್ಯಕ್ತಿಯೊಬ್ಬ ತನ್ನೊಳಗೆ ಬೆಳೆಯುತ್ತಾ ಸಮಾಜದ ಬೆಳವಣಿಗೆಯ ಭಾಗವಾಗಬೇಕು. ಅಂತಹ ಬದುಕಲ್ಲಿ ಸಮಾಧಾನ, ಸಂತೃಪ್ತಿ, ಧನ್ಯತೆಯು ಪ್ರಾಪ್ತಿಯಾಗುತ್ತದೆ’ ಅನ್ನುವುದು ಗಾಂಧಿಗ್ರಹಿಕೆ. ಪರಿಸರ ಪ್ರಜ್ಞೆಯೆಂಬುದೇ ಹುಟ್ಟಿರದ ಕಾಲದಲ್ಲಿ ‘ಪಶ್ಚಿಮದ ಆಧುನಿಕ ನಾಗರಿಕತೆ’ಯು ಉಳಿದ ಜಗತ್ತನ್ನು ತನ್ನ ಅನುಭೋಗ ಕ್ಕಿರುವ ಭೌತವಸ್ತುವೆಂಬಂತೆ ಪರಿಗಣಿಸುವ ಮೂಲಕ ಅವುಗಳ ಆಧ್ಯಾತ್ಮಿಕ ಅಸ್ತಿತ್ವವನ್ನೇ ನಿರ್ಲಕ್ಷಿಸುತ್ತದೆ’ ಎಂಬ ಕಟುಸತ್ಯವನ್ನು ಮನವರಿಕೆ ಮಾಡಲೆತ್ನಿಸಿದ್ದರು. ಅವರಲ್ಲಿ ಪ್ರಕೃತಿಯೊಟ್ಟಿಗಿನ ನವಿರು ಸಂಬಂಧಕ್ಕೂ ಸಕಲ ಜೀವರಾಶಿಗಳಲ್ಲಿನ ದೈವತ್ವಭಾವಕ್ಕೂ ಪ್ರಾಧಾನ್ಯವಿತ್ತು.

ಗಾಂಧೀಜಿ ಬೋಧಿಸಿದ ದುಡಿಮೆರಹಿತ ಸಂಪತ್ತು, ಆತ್ಮಸಾಕ್ಷಿರಹಿತ ಭೋಗ, ನೀತಿರಹಿತ ವಾಣಿಜ್ಯ, ತತ್ವರಹಿತ ರಾಜಕೀಯ, ಶೀಲವಿಲ್ಲದ ಶಿಕ್ಷಣ, ತ್ಯಾಗವಿಲ್ಲದ ಪೂಜೆ, ಮಾನವೀಯತೆ ಇಲ್ಲದ ವಿಜ್ಞಾನಗಳೆಂಬ ಏಳು ಸಾಮಾಜಿಕ ಪಾಪಗಳನ್ನು ಜಗತ್ತು ಮರೆತರೆ ಅಪಾಯ. ಬರೀ ಚಿತ್ರಪಟಗಳನ್ನಿಟ್ಟು, ವಿಗ್ರಹ ಮಾಡಿ ನಿಲ್ಲಿಸಿ ಅವರಿಗೆ ದೇವರ ಪಟ್ಟ ಕಟ್ಟಿ ಆರಾಧಿಸುವ ಬದಲು ಯುವ ಮನಸುಗಳ ಎದೆಯೊಳಗೆ ಗಾಂಧಿಚಿಂತನೆಯನ್ನು ಬಿತ್ತಬೇಕಾದ್ದು ಇವತ್ತಿನ ಜರೂರು.

ಜಗತ್ತಿನ ಬಹುತೇಕ ದೇಶಗಳಲ್ಲಿನ ರಸ್ತೆ, ಸ್ಮಾರಕ, ಸಂಸ್ಥೆಗಳಿಗೆ ಗಾಂಧಿಯ ಹೆಸರಿಟ್ಟಿರುವುದು, ವಿವಿಧ ದೇಶಗಳ ಪ್ರಮುಖ ಎರಡುನೂರ ಎಪ್ಪತ್ತು ವಿಶ್ವವಿದ್ಯಾ ಲಯಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರಗಳಿರುವುದು ಅವರ ಪ್ರಸ್ತುತತೆಗೆ ನಿದರ್ಶನ. ಗಾಂಧಿಯವರ ಬೋಧನೆ, ತತ್ವಾದರ್ಶಗಳಿಗೆ ಸಾರ್ವಕಾಲಿಕ ಮಹತ್ವವಿದೆ. ಇತರ ದೇಶಗಳೆಲ್ಲಾ ತಮ್ಮಲ್ಲಿಗೆ ಭೇಟಿ ನೀಡುವ ಗಾಂಧಿ ದ್ವೇಷಿಗಳನ್ನೂ ‘ಗಾಂಧಿ ನಾಡಿನಿಂದ ಬಂದವರು’ ಎಂದೇ ಆದರಣೀಯವಾಗಿ ನಡೆಸಿಕೊಳ್ಳುತ್ತವೆ!

ಹುತಾತ್ಮರಾದ ಎಪ್ಪತ್ತೈದು ವರ್ಷಗಳ ನಂತರವೂ ಗಾಂಧಿಯೆಂಬ ಅರಿವಿನ ಬೆಳಕಿನಲ್ಲಿ ನಾವೆಲ್ಲ ಒಳಗಿನ ಆತ್ಮಾನುಸಂಧಾನದ ಮತ್ತು ಆತ್ಮಶುದ್ಧಿಯ ದಿವ್ಯಮಾರ್ಗವನ್ನು ಅರಸಬೇಕಾದ್ದು, ಅನುಸರಿಸಬೇಕಾದ್ದು ಅಗತ್ಯ. ಗಾಂಧಿಸ್ಮೃತಿಯು ಸಾತ್ವಿಕಪ್ರಜ್ಞೆಯಾಗಿ, ಆತ್ಮ
ಸಾಕ್ಷಿಯಾಗಿ ಎಲ್ಲ ಕಾಲಕ್ಕೂ ಉಳಿದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT