ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿನ ಜೀವ ವೈವಿಧ್ಯ ವಿಭಾಗದಲ್ಲೊಂದು ಫಲಕ ಗಮನ ಸೆಳೆಯುವಂತಿತ್ತು. ಭಾರತದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಉತ್ಪಾದಿಸಿದ ಭತ್ತದ ಇಳುವರಿಯನ್ನು ವಿವರಿಸುವಂಥದು. ‘ಏನೆಲ್ಲ ಸುರಿದರೂ ಇಳುವರಿ ಎಕರೆಗೆ 35 ಕ್ವಿಂಟಲ್ ಸಿಗೋದಿಲ್ಲ. ಅಂಥದ್ದರಲ್ಲಿ ಇಷ್ಟು ಉತ್ಪಾದನೆ ಆಗ್ತಿತ್ತಲ್ಲ! ಗ್ರೇಟ್!’ ಎಂದು ಉದ್ಗರಿಸಿದ ಆಂಧ್ರದ ಕೃಷಿಕನೊಬ್ಬ.
ಟ್ರ್ಯಾಕ್ಟರ್ ಲೋಡ್ಗಟ್ಟಲೇ ರಾಸಾಯನಿಕ ಸುರಿದು, ತಲೆ ಮೇಲೆ ಮೂಟೆ ಹೊರುವಷ್ಟು ಭತ್ತ ತರುವ ಇಂದಿನ ಸಮಯದಲ್ಲಿ ತಮಿಳುನಾಡಿನ ಶಾಸನಗಳು ಬೆರಗಾಗುವಂಥ ಮಾಹಿತಿಯನ್ನು ನೀಡುತ್ತವೆ. ರಾಮನಾಥಪುರಂ ಪ್ರದೇಶದಲ್ಲಿ ಎಕರೆಗೆ ಎಂಬತ್ತು ಕ್ವಿಂಟಲ್, ತಂಜಾವೂರಿನಲ್ಲಿ 60 ಕ್ವಿಂಟಲ್ ಭತ್ತ ಇಳುವರಿ ಪಡೆದ ಮಾಹಿತಿ ಅದರಲ್ಲಿದೆ. ‘ಅದೆಲ್ಲ ಶಿಲಾಶಾಸನದ ಮಾಹಿತಿ...’ ಎಂದು ಮೂಗು ಮುರಿಯುವವರಿಗೆ 19ನೇ ಶತಮಾನದಲ್ಲಿ ಬ್ರಿಟಿಷ್ ಗೆಝೆಟಿಯರ್ನಲ್ಲಿ ದಾಖಲಾದ ಸಂಗತಿಯೂ ಕಾಣಿಸುತ್ತದೆ: ‘ಭತ್ತದ ಇಳುವರಿ ಎಕರೆಗೆ 52 ಕ್ವಿಂಟಲ್’!
ಇಂಥ ಸಮೃದ್ಧ ಕೃಷಿ ಇತಿಹಾಸವನ್ನು ಇಂದಿನ ಕೃಷಿಗೆ ಹೋಲಿಸಿ ನೋಡಿದಾಗ, ಎಲ್ಲವನ್ನೂ ಕಳೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಹೊಸ ತಳಿಗಳನ್ನು ಬಿಡುಗಡೆ ಮಾಡಿದ್ದೇವೆಂದು ಕೃಷಿ ವಿಜ್ಞಾನಿಗಳು ಬೀಗುತ್ತಾರಾದರೂ, ಆ ತಳಿಗಳು ಹಳೆಯ ಕಾಲದ ತಳಿಗಳ ಇಳುವರಿ ಸಮೀಪಕ್ಕೆ ಕೂಡ ಹೋಗುವುದಿಲ್ಲ! ಹಸಿರು ಕ್ರಾಂತಿಯನ್ನು ಸದಾ ಜಪಿಸುತ್ತಿರುವವರ ಕಣ್ಣಿಗೆ ಕಾಣಿಸದ ಇನ್ನೊಂದು ಭಾಗವಿದೆ.
ಒಂದು ಪ್ರದೇಶದ ಹವಾಗುಣಕ್ಕೆ ಪೂರಕವಾಗಿ ಅಲ್ಲಿನ ಆಹಾರ ಪದ್ಧತಿಯೂ ಬದಲಾಗುತ್ತ ಹೋಗುತ್ತದೆ. ಈ ಆಹಾರ ಪದ್ಧತಿಗೆ ಅನುಗುಣವಾಗಿ ಕೃಷಿ ವಿಧಾನ ರೂಪುಗೊಂಡಿರುತ್ತದೆ. ಭತ್ತ ಹಾಗೂ ಗೋಧಿಯನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡ ಹಸಿರು ಕ್ರಾಂತಿ ಕೆಲವೇ ದಶಕಗಳಲ್ಲಿ ಆಹಾರ ವೈವಿಧ್ಯವನ್ನೂ, ಕೃಷಿ ವಿಧಾನವನ್ನೂ ಪಕ್ಕಕ್ಕೆ ಸರಿಸಿದೆ. ‘ಬರಗಾಲದ ಮಿತ್ರ’ ಎಂದು ಹೆಸರಾದ ಸಿರಿಧಾನ್ಯಗಳು ಎಂಥದೇ ವಾತಾವರಣದಲ್ಲೂ ಬೆಳೆಯಬಲ್ಲಂಥವು.
ಅಕ್ಕಿ, ಗೋಧಿ ಭರಾಟೆಯಲ್ಲಿ ನವಣೆ, ಸಜ್ಜೆ, ಹಾರಕ, ಸಾಮೆಯಂಥ ಧಾನ್ಯಗಳನ್ನು ಮೂಲೆಗುಂಪು ಮಾಡಲಾಯಿತು. ಪೌಷ್ಟಿಕಾಂಶಭರಿತ ಸಿರಿಧಾನ್ಯಗಳನ್ನು ‘ತೃಣಧಾನ್ಯ,’ ‘ಕಿರುಧಾನ್ಯ’ಗಳೆಂದು ಜರಿದ ಆಧುನಿಕ ಕೃಷಿ ವಿಜ್ಞಾನದ ಮಹಾನುಭಾವರು, ಈಗ ‘ಹವಾಮಾನ ಬದಲಾವಣೆಯನ್ನು ಎದುರಿಸುವ ಸಾಮರ್ಥ್ಯವುಳ್ಳ ಸಿರಿಧಾನ್ಯ ಬೆಳೆಯಿರಿ’ ಎಂದು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಇದು ನಮ್ಮ ಆಧುನಿಕ ಕೃಷಿ ವಿಜ್ಞಾನದ ವಿಪರ್ಯಾಸ!
ಅಕ್ಕಿ– ಗೋಧಿಯನ್ನು ವೋಟ್ಬ್ಯಾಂಕ್ ಮಾಡಿಕೊಂಡ ರಾಜಕೀಯ ಪಕ್ಷಗಳು, ಅಗ್ಗದ ದರದಲ್ಲಿ ಪಡಿತರ ವ್ಯವಸ್ಥೆಯಡಿ ಈ ಧಾನ್ಯ ವಿತರಿಸಲು ಪೈಪೋಟಿ ನಡೆಸಿವೆ. ಇಂಥ ಜನಪ್ರಿಯ ಯೋಜನೆಗಳಿಗೆ ಹೆಚ್ಚೆಚ್ಚು ಉತ್ಪಾದನೆಯಾಗಬೇಕು. ಹೀಗಾಗಿ ಎಲ್ಲರೂ ಇಳುವರಿ ಹೆಚ್ಚಳದತ್ತ ಗಮನ ಹರಿಸುತ್ತಾರೆಯೇ ಹೊರತು ಆರೋಗ್ಯದತ್ತ ಅಲ್ಲ. ಸ್ಥಳೀಯ ಆಹಾರ ಪದ್ಧತಿಗೆ ಅನುಗುಣವಾಗಿ ಸ್ಥಳೀಯವಾಗಿ ಬೆಳೆದ ಧಾನ್ಯ ವಿತರಿಸುವುದನ್ನು ಬಿಟ್ಟು, ದೂರದ ರಾಜ್ಯಗಳಿಂದ ತರಿಸುವ ಅಕ್ಕಿ ಹಾಗೂ ಗೋಧಿಯನ್ನು ಕೊಡುತ್ತಿವೆ.
‘ಸರ್ಕಾರ ಆಹಾರಧಾನ್ಯ ಕೊಡುತ್ತಿದೆ ಎಂದರೆ ಅದೊಂದು ಸುಳ್ಳು ಹೇಳಿಕೆ ಅಷ್ಟೇ. ಪಡಿತರ ವ್ಯವಸ್ಥೆ ಹೆಸರಿನಲ್ಲಿ ಕೊಡುತ್ತಿರುವುದು ಮೌಂಟೇನ್ ಆಫ್ ಸ್ಟಾರ್ಚ್, ಅಂದರೆ ಪಿಷ್ಟದ ಬೆಟ್ಟ! ಹೀಗಾಗಿ, ನಗರದ ಕಾಯಿಲೆಗಳೆನಿಸಿದ ಮಧುಮೇಹ, ರಕ್ತದೊತ್ತಡ ಈಗ ಹಳ್ಳಿಗೂ ಕಾಲಿಟ್ಟಿವೆ’ ಎನ್ನುತ್ತಾರೆ ಆಹಾರ ತಜ್ಞ ಡಾ. ಕೆ.ಸಿ. ರಘು.
ಹೆಚ್ಚೇನೂ ಅಲ್ಲ; ಐದಾರು ದಶಕದ ಹಿಂದಿನ ದಿನಗಳನ್ನು ನೆನಪಿಸಿಕೊಂಡರೆ ಸಾಕು. ಆಗ ಹೊಲದಲ್ಲಿ ಸಿಗುತ್ತಿದ್ದ ಬಗೆಬಗೆಯ ತರಕಾರಿ, ಹಣ್ಣು, ಸೊಪ್ಪುಗಳು ಶರೀರದ ಪೋಷಕಾಂಶ ಅಗತ್ಯ ಪೂರೈಸುತ್ತಿದ್ದವು. ಹಸಿರು ಕ್ರಾಂತಿ ಚಾಲ್ತಿಗೆ ಬಂದ ಬಳಿಕ ಆದ ಬದಲಾವಣೆಯಲ್ಲಿ ಈ ಸಹಜ ತರಕಾರಿಗಳು ಹೇಳಹೆಸರಿಲ್ಲದಂತೆ ಕಾಣೆಯಾದವು. ಎಲ್ಲಿ ನೋಡಿದರೂ ಏಕಬೆಳೆ... ಏಕಬೆಳೆ. ಆಹಾರ ಉತ್ಪಾದನೆ ಹೆಚ್ಚಿಸಿದ ಹಸಿರು ಕ್ರಾಂತಿಯನ್ನು ಸಾಕಷ್ಟು ಮಂದಿ ಹೊಗಳುತ್ತಾರೆ.
ಅದು ನಿಜ. ಆದರೆ ಈ ಮಹನೀಯರು ಮರೆಯುವ ಸಂಗತಿ ಎಂದರೆ, ಏನೇನೂ ವೆಚ್ಚವಿಲ್ಲದೇ ಸಹಜವಾಗಿ ಬೆಳೆಗಳ ಮಧ್ಯೆ ಕಳೆಯಾಗಿ ಬೆಳೆಯುತ್ತಿದ್ದ ಬೆರಕೆಸೊಪ್ಪು, ಅಣ್ಣೆಸೊಪ್ಪು, ಕಿರಕಸಾಲಿ, ಬೇಲಿಯ ಸಾಲಿನಲ್ಲಿ ಬೆಳೆಯುತ್ತಿದ್ದ ಬಿದಿರುಕಳಲೆ, ಸೀಗೇ ಸೊಪ್ಪು, ಗೊಟ್ಟೆಗೆಡ್ಡೆ ಇವೆಲ್ಲ ಹಸಿರುಕ್ರಾಂತಿ ಪರಿಧಿಗೆ ಬರಲೇ ಇಲ್ಲ.
ಕನ್ನಡ ನಾಡಿನ ವಿಶಿಷ್ಟ ‘ಅಕ್ಕಡಿ ಪದ್ಧತಿ’ ಮನೆಗೆ ಬೇಕಾದ ಎಲ್ಲ ಬಗೆಯ ಆಹಾರ ಧಾನ್ಯ, ಎಣ್ಣೆ, ಬೇಳೆಕಾಳು, ಜಾನುವಾರುಗಳಿಗೆ ಮೇವು ಬೆಳೆದುಕೊಳ್ಳುವ ಅಪರೂಪದ ವಿಧಾನ. ಅದು ರೈತನ ಕುಟುಂಬದ ಆಹಾರಭದ್ರತೆಯೂ ಆಗಿತ್ತು. ಅಂಥ ವಿಧಾನಗಳನ್ನು ಆಚೆ ಸರಿಸಿ, ಏಕಬೆಳೆಯೊಂದನ್ನೇ ಮುಖ್ಯವಾಗಿಟ್ಟುಕೊಂಡ ಹಸಿರು ಕ್ರಾಂತಿ ಏನೇನೆಲ್ಲ ಕಸಿದುಕೊಂಡುಬಿಟ್ಟಿತಲ್ಲ! ಹಸಿದ ಹೊಟ್ಟೆಗೆ ಪೌಷ್ಟಿಕಾಂಶಭರಿತ, ಸವಿಯಾದ ಆಹಾರ ಕೊಡ-ಬೇಕೇ ಹೊರತು, ತಿಂದರೆ ದೇಹವು ರೋಗಗಳ ಗೂಡಾಗುವಂಥ ಆಹಾರ ಉತ್ಪಾದಿ-ಸುವುದು ಎಂಥ ಸಾಧನೆ!
ಹಸಿರು ಕ್ರಾಂತಿಯ ಭಾರ ಹೊತ್ತು, ಮೈಮುದುರಿಕೊಂಡು ಸಬ್ಸಿಡಿಯಲ್ಲಿ ಸಿಗುವ ಬೀಜ, ಗೊಬ್ಬರಕ್ಕಾಗಿ ಅಂಗಲಾಚುತ್ತ ಕೊನೆಗೆ ಪೊಲೀಸರ ಗುಂಡೇಟು ತಿಂದು ಜೀವ ಬಿಡುವ ಸ್ಥಿತಿ ನಮ್ಮ ಅನ್ನದಾತನದು. ಈಚಿನ ಸಮೀಕ್ಷೆಯೊಂದರ ಪ್ರಕಾರ, ಅವಕಾಶ ಸಿಕ್ಕರೆ ಕೃಷಿಗೆ ವಿದಾಯ ಹೇಳಿ, ನಗರಗಳತ್ತ ಗುಳೇ ಹೋಗಲು ಶೇ 60ರಷ್ಟು ರೈತರು ಸಿದ್ಧವಾಗಿದ್ದಾರೆ. ‘ಹಸಿರುಕ್ರಾಂತಿ’ ಪಿತಾಮಹ ನಾರ್ಮನ್ ಬೊರ್ಲಾಗ್ ಕಂಡ ಕನಸು ಖಂಡಿತ ಇದಾಗಿರಲಿಲ್ಲವೇನೋ?!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.