ಬೆಂಗಳೂರು ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ ಶೇಕಡ 54ರಷ್ಟು ಮತದಾನ ಆಗಿದೆ ಎಂದು ಈ ತಿಂಗಳ 17ರ ಸಾಯಂಕಾಲ ಮತದಾನ ಮುಗಿಯುತ್ತಿದ್ದಂತೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಯಿತು. ಈ ಆಘಾತಕಾರಿ, ನಾಚಿಕೆಗೇಡಿನ ಅಂಕಿಅಂಶ ಹಲವರ ಅಚ್ಚರಿಗೆ ಕಾರಣವಾಯಿತು.
ಕೇವಲ ಅಂಕಿಅಂಶಗಳನ್ನು ನೋಡಿ ಯಾವುದೇ ತೀರ್ಮಾನಕ್ಕೆ ಬರುವುದು ಸಾಧ್ಯವಿಲ್ಲ. ಸಾಮಾಜಿಕ, ಆರ್ಥಿಕ, ಜಾತಿವಾರು ವರ್ಗಗಳಲ್ಲಿ ಶೇಕಡ 54ರಷ್ಟು ಮತದಾನ ಆಗುವುದು ಸಾಮಾನ್ಯ. ದಲಿತರು, ಹಿಂದುಳಿದ ಸಮುದಾಯಗಳ ಜನ, ತುಳಿತಕ್ಕೆ ಒಳಗಾದವರು, ಕೊಳೆಗೇರಿ ನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿ (ಶೇಕಡ 90ರಷ್ಟು) ಮತದಾನದಲ್ಲಿ ಪಾಲ್ಗೊಳ್ಳುವ ಕಾರಣ, ಸುಶಿಕ್ಷಿತ ಮಧ್ಯಮ ವರ್ಗದ ಜನ, ಅಂತರ್ಜಾಲಕ್ಕೆ ಆತುಕೊಂಡಿರುವ ಯುವ ಸಮುದಾಯ ಮತದಾನ ಮಾಡದಿರುವ ಸಾಧ್ಯತೆ ಹೆಚ್ಚು. ಆದರೆ ಈ ಕುರಿತ ನಿಖರ ಮಾಹಿತಿಯನ್ನು ಫಲಿತಾಂಶ ಬಂದ ನಂತರವೇ ಹುಡುಕಬೇಕು.
ಹಗರಣಗಳ ಕಳಂಕ ಮೆತ್ತಿಕೊಂಡಿರುವ, ಕ್ರಿಮಿನಲ್ ಅಪರಾಧ ಎಸಗಿರುವ ಆರೋಪ ಹೊತ್ತಿರುವ ಕೆಟ್ಟ ರಾಜಕಾ
ರಣಿಯೊಬ್ಬ ಸುಶಿಕ್ಷಿತರು, ಮಧ್ಯಮ ವರ್ಗದವರು ಮತ್ತು ಸಿನಿಕ ಯುವ ಸಮುದಾಯಕ್ಕಿಂತ ಹೆಚ್ಚು ಒಳ್ಳೆಯವ ಎಂಬಂತೆ ಕಾಣುತ್ತಿದೆ. ಸಿನಿಕತೆ, ಯಾವುದರಲ್ಲೂ ನಂಬಿಕೆ ಇಲ್ಲದಿರುವುದು ಮತ್ತು ಉದಾಸೀನ ಮನೋಭಾವ ನಿಧಾನವಾಗಿ ಕೊಲ್ಲುವ ವಿಷವಿದ್ದಂತೆ.
ಮೆಟ್ರೊ ನಗರಿ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ವಾರ ಕಳೆಯಲು ಪಕ್ಕದ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ತೆರಳಿದರು. ಅವರು ಅಲ್ಲಿ ಕೈಯಲ್ಲಿ ಒಂದು ಪೆಗ್ ವಿಸ್ಕಿ ಹಿಡಿದುಕೊಂಡು ನಮ್ಮಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿರಬಹುದು, ನಮ್ಮ ಮೂಲ ಸೌಕರ್ಯ ವ್ಯವಸ್ಥೆಯ ಕುಂದು ಕೊರತೆಯ ಬಗ್ಗೆ ದೂರಿಕೊಂಡಿರ ಬಹುದು, ರಾಜಕಾರಣಿಗಳನ್ನು ದೂಷಿಸಿರಬಹುದು, ಝಗಮಗಿಸುವ ದುಬೈ, ಸಿಂಗಪುರ, ಸುಂದರ ಸ್ವಿಟ್ಜರ್ಲೆಂಡ್ ಬಗ್ಗೆ ಕನಸು ಕಂಡಿರಬಹುದು.
ಬೆಂಗಳೂರು ನಗರದಲ್ಲಿ ಆಗಿರುವ ಅತಿ ಕಡಿಮೆ ಪ್ರಮಾಣದ ಮತದಾನ ಚುನಾವಣಾ ವಿಶ್ಲೇಷಕರಲ್ಲಿ ಆಶ್ಚರ್ಯ ಮೂಡಿಸಿದೆ. ದೆಹಲಿ ವಿಧಾನಸಭೆಗೆ ನಡೆದ ಚುನಾವಣೆ ವೇಳೆ ಆಮ್ ಆದ್ಮಿ ಪಕ್ಷ ಬೆಂಗಳೂರಿಗರಿಂದ ಎರಡನೆಯ ಅತಿ ಹೆಚ್ಚಿನ ಪ್ರಮಾಣದ ದೇಣಿಗೆ ಪಡೆದುಕೊಂಡಿತ್ತು ಎಂಬುದನ್ನು ನೆನಪಿಡಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಬೆಂಗಳೂರಿನಲ್ಲಿ ತಕ್ಕಮಟ್ಟಿಗೆ ಒಳ್ಳೆಯ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ್ದವು. ಅವರಲ್ಲಿ ಇನ್ಫೊಸಿಸ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್ ಅವರೂ ಇದ್ದರು. ಅಣ್ಣಾ ಹಜಾರೆ ಅವರು ಜನ ಲೋಕಪಾಲ ಮಸೂದೆಗೆ ಒತ್ತಾಯಿಸಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ದೆಹಲಿ ನಂತರ ಅತಿಹೆಚ್ಚಿನ ಜನಸ್ಪಂದನ ದೊರೆತಿದ್ದು ಬೆಂಗಳೂರಿನಲ್ಲಿ. ಇದನ್ನೆಲ್ಲ ಗಮನಿಸಿ ಕಾಂಗ್ರೆಸ್ ಪಕ್ಷ ನಂದನ್ ನಿಲೇಕಣಿ ಅವರಂಥ ಶುದ್ಧಹಸ್ತದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು.
ಹೆಸರಾಂತ ಸಾಮಾಜಿಕ ಕಾರ್ಯಕರ್ತ ರಮೇಶ್ ರಾಮನಾಥನ್ ನೇತೃತ್ವದ ಸರ್ಕಾರೇತರ ಸಂಸ್ಥೆ ‘ಜಾಗೋ ರೇ’ ಹೆಸರಿನಲ್ಲಿ ಚುನಾವಣೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಕಾರ್ಯಕ್ರಮ ರೂಪಿಸಿತು. ಈ ಕಾರ್ಯಕ್ರಮ ಕಳೆದ ಬಾರಿಯ ಲೋಕಸಭಾ ಚುನಾವಣೆಗೂ ಮುನ್ನವೇ ಆರಂಭವಾಗಿತ್ತು. ಉದ್ಯಮಿ ಕಿರಣ್ ಮಜುಂದಾರ್ ಷಾ ಅವರು ಟಿ.ವಿ. ಮೋಹನದಾಸ್ ಪೈ ಅವರಂಥ ವೃತ್ತಿಪರರ ಜೊತೆಗೂಡಿ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ–ಪ್ಯಾಕ್) ರಚಿಸಿಕೊಂಡು, ಚುನಾವಣೆಗಳಲ್ಲಿ ಜನರ ಸಹಭಾಗಿತ್ವ ಹೆಚ್ಚಿಸಲು ಶ್ರಮಿಸಿದರು.
ಆದರೆ ಈ ಪ್ರಯತ್ನಗಳು ನಿರೀಕ್ಷಿತ ಫಲ ನೀಡಲಿಲ್ಲ. ಸುಶಿಕ್ಷಿತ ಯುವ ಮತದಾರರು ಮತ್ತು ಮಧ್ಯಮ ವರ್ಗದ ಜನ ಹಗಲು ಕನಸು ಕಾಣುವವರಂತೆ ವರ್ತಿಸಿದರು. ದೂರದ ಪ್ರದೇಶಗಳಲ್ಲಿ ರಾತ್ರಿ ವೇಳೆ ಒಂದು ಕ್ಯಾಂಪ್ ಫೈರ್ ಸುತ್ತ ಕುಳಿತು ಹರಟೆ ಹೊಡೆಯುವ ಆಕರ್ಷಣೆ, ‘ಬಾಟಲಿ’ಯ ಸೆಳೆತವನ್ನು ತಪ್ಪಿಸಿಕೊಳ್ಳಲು ಅವರಿಂದ ಆಗಲಿಲ್ಲ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಶೇ 72ರಷ್ಟು ಮತದಾನ ಆಯಿತು. ಮತಗಟ್ಟೆ ತಲುಪಲು 3ರಿಂದ 4 ಕಿ.ಮೀ. ದಾರಿಯನ್ನು ಗುಡ್ಡ ಬೆಟ್ಟಗಳ ನಡುವೆ ಕ್ರಮಿಸಬೇಕಾದ ಅನಿವಾರ್ಯ ಇರುವ ಚಿಕ್ಕಮಗಳೂರಿನಲ್ಲಿ ಶೇ 70ರಷ್ಟು ಮತದಾನ ಆಯಿತು. ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಶೇಕಡ 68ರಷ್ಟು ಮತದಾನ ಆಗಿದೆ. ನಮ್ಮ ಹಳ್ಳಿಗಳ ರೈತರು, ಆದಿವಾಸಿಗಳು, ಕುಶಲಕರ್ಮಿಗಳು, ಕೂಲಿ ಕಾರ್ಮಿಕರು ನಗರದ ಬೆಚ್ಚನೆಯ ಗೂಡಿನಲ್ಲಿ ವಾಸಿಸುವ ನಮ್ಮಂಥವರಿಗಿಂತ ಹೆಚ್ಚಿನ ನಾಗರಿಕ ಪ್ರಜ್ಞೆ ಉಳ್ಳವರು. ನಾವು ಪಡೆದ ಶಿಕ್ಷಣದಿಂದ ಏನು ಕಲಿತೆವು?
ಆಮ್ ಆದ್ಮಿ ಪಕ್ಷದ ಅಲೆ ನಮ್ಮ ನಿರಾಶಾವಾದಿ ಐ.ಟಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಕಾಲಕಳೆಯುವ ಯುವಕರಲ್ಲಿ ಹೊಸ ಭರವಸೆ ಮೂಡಿಸುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಇದರ ಆಧಾರದಲ್ಲಿ ಪ್ರತಿಯೊಂದು ಪಕ್ಷವೂ ತನ್ನದೇ ಆದ ಚುನಾವಣಾ ಲೆಕ್ಕಾಚಾರ ನಡೆಸಿತ್ತು. ಚುನಾವಣೆಯಲ್ಲಿ ಹೆಚ್ಚಿನ ಮತದಾನ ನಡೆದು, ದೊಡ್ಡ ಪ್ರಮಾಣದ ಮತಗಳು ತನ್ನ ಕಿಸೆಗೆ ಬೀಳುತ್ತವೆ ಎಂದು ಎಎಪಿ ಅಂದಾಜಿಸಿತ್ತು. ನರೇಂದ್ರ ಮೋದಿ ಅವರ ಚರಿಷ್ಮಾ, ಅವರ ಪರವಾದ ಅಲೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ಮತದಾನ ಆಗುವಂತೆ ಮಾಡುತ್ತದೆ, ಆ ಮತಗಳೆಲ್ಲ ತನಗೇ ಬರುತ್ತವೆ ಎಂದು ಬಿಜೆಪಿ ಲೆಕ್ಕಹಾಕಿತ್ತು. ರಾಹುಲ್ ಗಾಂಧಿ ಅವರ ‘ಯುವ ಹವಾ’ ತನಗೆ ಮತ ತಂದುಕೊಡುತ್ತದೆ ಎಂದು ಕಾಂಗ್ರೆಸ್ ನಿರೀಕ್ಷೆ ಮಾಡಿತ್ತು. ಆದರೆ ಈ ಎಲ್ಲ ನಿರೀಕ್ಷೆಗಳು ತಲೆ ಕೆಳಗಾಗಿವೆ, ತಿರುಕ ಕಂಡ ಕನಸಿನಂತೆ ಆಗಿದೆ.
ದೆಹಲಿಯಲ್ಲಿ ಅಧಿಕಾರ ಹಿಡಿದಿದ್ದ ಎಎಪಿ, ಜವಾಬ್ದಾರಿಯಿಂದ ನುಣುಚಿಕೊಂಡಿತು ಎಂಬ ಭಾವ ಸುಶಿಕ್ಷಿತ ಮತದಾರರಲ್ಲಿ ಮೂಡಿ, ಅಪನಂಬಿಕೆ, ಸಿನಿಕತೆ ಬೆಳೆಯಲು ಕಾರಣವಾಯಿತು, ಹಾಗಾಗಿ ಮತದಾನದ ಪ್ರಮಾಣ ಕಡಿಮೆ ಆಯಿತು ಎಂಬುದು ಒಂದು ವಿಶ್ಲೇಷಣೆ. ರಾಜ್ಯದಲ್ಲಿ ಮೋದಿ ಅಲೆ ಇದ್ದರೂ, ಬಿ.ಎಸ್. ಯಡಿಯೂರಪ್ಪ ಮತ್ತು ಬಳ್ಳಾರಿಯ ಬಿ. ಶ್ರೀರಾಮುಲು (ಇವರ ಆಪ್ತ, ಮಾಜಿ ಸಚಿವರೊಬ್ಬರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇನ್ನೂ ಜೈಲಲ್ಲಿದ್ದಾರೆ) ಅವರನ್ನು ಬಿಜೆಪಿಗೆ ಪುನಃ ಸೇರಿಸಿಕೊಂಡಿದ್ದು, ಶುದ್ಧ ಹಸ್ತರಾದರೂ ಉದ್ಯಮ ವಿರೋಧಿ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ಅವರ ನಡೆಗಳು ಜನರಲ್ಲಿ ‘ಯಾರಿಗೆ ಮತ ನೀಡಿದರೂ ಒಂದೇ’ ಎಂಬ ಭಾವನೆ ಮೂಡಲು ಕಾರಣವಾದವು. ಹಾಗಾಗಿ ಮತ ಚಲಾಯಿಸುವುದಕ್ಕಿಂತ ಸುತ್ತಾಟ ನಡೆಸಿ ಬರುವುದೇ ಸಮಯ ಕಳೆಯುವ ಉತ್ತಮ ಮಾರ್ಗ ಎಂದು ಜನ ಅಂದುಕೊಂಡರು.
ನಾನು ಈಗ ಆಡುವ ಮಾತು ಉಪದೇಶದಂತೆ ಕಾಣಬಹುದು. ಆದರೆ, ನಮ್ಮ ದೇಶದಲ್ಲಿ ಎಷ್ಟೇ ದೋಷಗಳಿರಲಿ ನಮ್ಮ ಭವಿತವ್ಯ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಕ್ರಿಯೆಯಲ್ಲಿ ನಾವು ಪಾಳ್ಗೊಳ್ಳದಿದ್ದರೆ ನಮ್ಮ ಭವಿಷ್ಯ ಎಂದಿಗೂ ಉಜ್ವಲ ಆಗಲಾರದು. ಮತ ಚಲಾಯಿಸುವುದು ಈ ನಿಟ್ಟಿನಲ್ಲಿ ನಾವು ಇಡಬೇಕಾದ ಮೊದಲ ಹೆಜ್ಜೆ.
ತಾವು ಸಿದ್ಧಪಡಿಸುವ ತಂತ್ರಾಂಶಗಳಿಗೆ ಕೋಡ್ಗಳನ್ನು ಬರೆಯುವ ಜೊತೆಗೆ ಭವಿಷ್ಯವನ್ನೂ ತಾವೇ ಬರೆದುಕೊಳ್ಳಬೇಕು ಎಂಬುದು ಐ.ಟಿ. ಉದ್ಯೋಗಿಗಳಿಗೆ ತಿಳಿದಿರಬೇಕು. ಯಾರೂ ದುಬೈ, ಸಿಂಗಪುರ, ಜರ್ಮನಿಯಿಂದ ಬಂದು ನಮ್ಮ ವ್ಯವಸ್ಥೆಯನ್ನು ಶುಚಿಗೊಳಿಸುವುದಿಲ್ಲ. ನಮ್ಮ ವ್ಯವಸ್ಥೆಗೆ ನಾವೇ ವಾರಸುದಾರರು, ಜವಾಬ್ದಾರರು. ಉತ್ಸಾಹ, ನಿರೀಕ್ಷೆಗಳಿಲ್ಲದ ಜೀವನ ನಿರರ್ಥಕ. ಕ್ರಿಯೆಯಲ್ಲಿ ನಮ್ಮ ಸಮಯ ಸವೆಸಬೇಕೇ ವಿನಾ ನಿರಾಸೆಯಲ್ಲಿ ಅಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.