ಭಾರತದಲ್ಲಿ ಪ್ರತಿ ಬಾರಿ ಚುನಾವಣೆ ನಡೆದಾಗಲೆಲ್ಲ ದೇಶ ಭ್ರಷ್ಟಾಚಾರದ ಕಡಾಯಿಗೆ ತಳ್ಳಲ್ಪಡುತ್ತದೆ. ಪಕ್ಷಗಳಲ್ಲಿ ಬಂಡಾಯ, ಅಸಹನೆ, ಅಪರಾಧಕ್ಕೆ ಸಂಬಂಧಪಟ್ಟ ಘಟನೆಗಳು ಅತೀ ಹೆಚ್ಚು ನಡೆಯುತ್ತವೆ. ಹಲವು ಸಂದರ್ಭಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಕೊನೆ ಕ್ಷಣದಲ್ಲಿ ಘೋಷಿಸಲಾಗುತ್ತದೆ. ಇದರಿಂದ ಮತದಾರರಿಗೆ ತಮ್ಮ ಭವಿಷ್ಯದ ನಾಯಕರ ಜತೆ ಮುಖಾಮುಖಿಯಾಗಿ ಅವರೊಂದಿಗೆ ಸಂವಾದ ನಡೆಸುವ ಅವಕಾಶ ಕೂಡ ಲಭಿಸುವುದಿಲ್ಲ.
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಈ ರೀತಿಯ ಗೊಂದಲಗಳ ಅಗತ್ಯವಿದೆಯೇ? ಅಥವಾ ನಾವು ಕೆಲವು ಸುಧಾರಣೆಗಳನ್ನು ತರಬೇಕಿದೆಯೇ? ಈ ಸಂದರ್ಭದಲ್ಲಿ ನಾವು ಭಾರತದ ಹತ್ತನೇ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್ ಅವರು ಮಾಡಿದ್ದ ಕ್ರಾಂತಿಕಾರಕ ಬದಲಾವಣೆಗಳನ್ನು ಮರೆಯಲು ಸಾಧ್ಯವಿಲ್ಲ. ಚುನಾವಣಾ ವೆಚ್ಚದ ಮೇಲೆ ನಿಗಾ ಮತ್ತು ಪ್ರಚಾರಕ್ಕಾಗಿ ಅವ್ಯಾಹತವಾಗಿ ಪೋಸ್ಟರ್ ಮತ್ತು ವಾಹನಗಳ ಬಳಕೆ ಮೇಲೆ ಕೆಲ ಕಡಿವಾಣಗಳನ್ನು ಅವರು ಹಾಕಿದ್ದರು.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರ ಖರೀದಿ ಮತ್ತು ಅಕ್ರಮ ಹಣ ವರ್ಗಾವಣೆಯಂತಹ ಅಕ್ರಮ ಚಟುವಟಿಕೆಗಳು ಬಿರುಸುಗೊಳ್ಳುತ್ತವೆ. ಟಿಕೆಟ್ ಹಂಚಿಕೆಯ ಸಂದರ್ಭದಲ್ಲಂತೂ ಕೈಯಿಂದ ಕೈಗೆ ಕೋಟ್ಯಂತರ ರೂಪಾಯಿ ಹರಿದಾಡುತ್ತದೆ. ಅಭ್ಯರ್ಥಿಗಳು ಹಣ ಮಾಡಲು ಎದುರು ನೋಡುತ್ತಾರೆ ಅಥವಾ ಹಣ ಇರುವ ಅಭ್ಯರ್ಥಿಗಳನ್ನು ಪಕ್ಷಗಳು ಎದುರು ನೋಡುತ್ತವೆ!
ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ಒಂದು ವೇಳೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರೆ ಈ ಭ್ರಷ್ಟ ಪ್ರಕ್ರಿಯೆ ಅಥವಾ ವ್ಯವಸ್ಥೆಯನ್ನು ಸ್ವಚ್ಛ ಮಾಡಬಹುದು. ಒಂದು ಅಂದಾಜಿನ ಪ್ರಕಾರ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಒಬ್ಬ ಅಭ್ಯರ್ಥಿ ತನ್ನ ಕ್ಷೇತ್ರದಲ್ಲಿ ಸುಮಾರು 12,000ದಿಂದ 14,000 ಗ್ರಾಮಗಳನ್ನು ಸಂಪರ್ಕಿಸಬೇಕಾಗುತ್ತದೆ.
ಆತ ಅಥವಾ ಆಕೆ 10ರಿಂದ 15 ಲಕ್ಷ ಮತದಾರರೊಂದಿಗೆ ಸಂಪರ್ಕಕಕ್ಕೆ ಬರಬೇಕಾಗುತ್ತದೆ. ಆ ಪೈಕಿ ಕನಿಷ್ಠ ಶೇ 10ರಷ್ಟು ಜನರೊಂದಿಗಾದರೂ ಕೈ ಕುಲುಕಲು ಅಭ್ಯರ್ಥಿಗೆ ಸಮಯ ಬೇಕಾಗುತ್ತದೆ. ಆದರೆ, ಕೇವಲ ಮೂರು ಅಥವಾ ನಾಲ್ಕು ವಾರಗಳಲ್ಲಿ ಇಷ್ಟೊಂದು ಜನರನ್ನು ಒಬ್ಬ ಅಭ್ಯರ್ಥಿ ತಲುಪುವುದಾದರೂ ಹೇಗೆ?
ಬಹಳ ಮುಂಚಿತವಾಗಿಯೇ ಅಭ್ಯರ್ಥಿಗಳ ಹೆಸರನ್ನು ಘೋಷಿಸುವುದರಿಂದ ಆ ಕ್ಷೇತ್ರದ ಮತದಾರರು ತಾವು ಆಯ್ಕೆ ಮಾಡಲಿರುವ ವ್ಯಕ್ತಿಯ ಗುಣ ಮತ್ತು ವರ್ತನೆಯ ಬಗ್ಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ. ಅಭ್ಯರ್ಥಿಯೂ ಎಲ್ಲರನ್ನು ಸೂಕ್ತ ರೀತಿಯಲ್ಲಿ ತಲುಪಲು ಸಾಧ್ಯವಾಗುತ್ತದೆ.
ಇದರಿಂದ ರಾಜಕೀಯ ಪಕ್ಷಗಳಿಗೂ ಸಹಾಯವಾಗುತ್ತದೆ. ಒಂದು ವೇಳೆ ಅಭ್ಯರ್ಥಿ ಅದಕ್ಷ ಎಂಬುದು ಸಾಬೀತಾದರೆ ಅಥವಾ ಜನರಿಗೆ ಸಮ್ಮತವಾಗದಿದ್ದರೆ, ಆಕೆ ಅಥವಾ ಆತನ ವಿರುದ್ಧ ದೂರುಗಳಿದ್ದರೆ ಈ ಕುರಿತು ಮರು ಚಿಂತಿಸಲು ಪಕ್ಷಕ್ಕೆ ಸಮಯ ಇರುತ್ತದೆ. ಮತ್ತು ಬೇರೊಬ್ಬ ಅಭ್ಯರ್ಥಿಯ ಹೆಸರನ್ನು ಘೋಷಿಸಬಹುದು. ಇದರಿಂದ ಜನರು ತಮ್ಮ ಪ್ರತಿನಿಧಿ ಆಗುವವರ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ. ಇದಕ್ಕೆ ಸಮಯ ಅವರಿಗೆ ಇರುತ್ತದೆ.
ಒಬ್ಬ ನಾಯಕ ಜನರ ಹೃದಯವನ್ನು ಗೆಲ್ಲುವ ಮೂಲಕ ತಳಮಟ್ಟದಿಂದ ಮೇಲೆ ಬರಬೇಕೇ ಹೊರತು ಪಕ್ಷದ ಹೈಕಮಾಂಡ್ ಅಭ್ಯರ್ಥಿಯನ್ನು ಹೇರಬಾರದು. ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಜನಪ್ರತಿನಿಧಿಗಳಾಗುವವರು ನಾವು ಯಾರನ್ನು ಪ್ರತಿನಿಧಿಸಲಿದ್ದೇವೆ ಎನ್ನುವುದು ಅವರಿಗೆ ತಿಳಿದಿರಬೇಕು. ಇದೇ ರೀತಿ ಜನರಿಗೆ ಕೂಡ ಅವರ ನಾಯಕರು ಎಂಥವರು ಎನ್ನುವುದು ಗೊತ್ತಿರಬೇಕು.
ಈಗ ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಎಷ್ಟೋ ಬಾರಿ ಅಭ್ಯರ್ಥಿಗಳ ಅಂತಿಮ ಪಟ್ಟಿ ನೋಡಿದ ಬಳಿಕ ಪಕ್ಷದ ಕಾರ್ಯಕರ್ತರು ತೀವ್ರ ನಿರಾಸೆಗೆ ಒಳಗಾಗುತ್ತಾರೆ. ಪಕ್ಷಕ್ಕಾಗಿ ಸಾಕಷ್ಟು ಶ್ರಮ ವಹಿಸಿದರೂ ಅವರ ಕೂಗನ್ನು ಯಾರು ಕೇಳಿಸಿಕೊಳ್ಳುವುದಿಲ್ಲ. ಆಗ ಅವರು ಬಂಡಾಯ ಏಳುತ್ತಾರೆ.
ಯಾವಾಗಲೂ ಅಭ್ಯರ್ಥಿ ಸ್ಥಳೀಯ ವ್ಯಕ್ತಿ ಆಗಿರಬೇಕೆಂದೇನೂ ಇಲ್ಲ. ಒಂದುವೇಳೆ ಹೊರಗಿನವರ ಹೆಸರನ್ನು ಪಕ್ಷ ಘೋಷಿಸಿದರೆ ಆ ಅಭ್ಯರ್ಥಿ ಆ ಕ್ಷೇತ್ರದಲ್ಲಿ ನೆಲೆಸಿರಬೇಕು. ಜನರನ್ನು ತಲುಪಬೇಕು ಮತ್ತು ಅವರ ಸಂಪರ್ಕದಲ್ಲಿರಬೇಕು. ಇದಕ್ಕಾಗಿ ಸಮಯದ ಅಗತ್ಯ ಇರುತ್ತದೆ.
ಸದ್ಯ ಪರಿಸ್ಥಿತಿ ಹೇಗಿದೆಯೆಂದರೆ, ಜಾತಿ ಸಮೀಕರಣ, ಹಣ ಬಲ ಸೇರಿದಂತೆ ಇತರ ಅಂಶಗಳ ಆಧಾರದ ಮೇಲೆ ಪಕ್ಷದ ಚುನಾವಣಾ ಸಮಿತಿಗಳು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುತ್ತವೆ. ಹಲವು ಸಂದರ್ಭಗಳಲ್ಲಂತೂ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ.
ಇದರಿಂದ ಎದುರಾಳಿಗೆ ಸುಲಭವಾಗಿ ಗೆಲುವು ದಕ್ಕುತ್ತದೆ. ದೀರ್ಘಕಾಲದಿಂದ ಪಕ್ಷಗಳ ಮಧ್ಯೆ ನಡೆದುಕೊಂಡು ಬಂದಿರುವ ಈ ಅಕ್ರಮ ಒಳ ‘ಒಪ್ಪಂದ’ವನ್ನು ಜಗಜ್ಜಾಹೀರು ಮಾಡಬಹುದು ಮತ್ತು ತಡೆಯಬಹುದಾಗಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ವಿಕೇಂದ್ರೀಕರಣ ಆರಂಭಿಸಿದರೆ ಅದು ಮಾದರಿಯಾಗಬಲ್ಲದು.
ಅನೇಕ ವೇಳೆ ಟಿಕೆಟ್ ಹಂಚಿಕೆ ಹಣ ಮಾಡುವ ದಂಧೆಯಾಗಿರುತ್ತದೆ. ಕೆಲ ಸಂದರ್ಭಗಳಲ್ಲಂತೂ ಎದುರಾಳಿ ಅಭ್ಯರ್ಥಿಯನ್ನು ಆತನ ವಿರೋಧಿಗಳೇ ಖರೀದಿಸುತ್ತಾರೆ. ಒಂದುವೇಳೆ ಟಿಕೆಟ್ ಹಂಚಿಕೆ ವ್ಯವಸ್ಥೆ ಸರಳಗೊಳಿಸಿದರೆ ಮತ್ತು ಮುಂಚಿತವಾಗಿ ಸೂಕ್ತ ರೀತಿಯಲ್ಲಿ ನಡೆದರೆ ಚುನಾವಣಾ ಪ್ರಕ್ರಿಯೆ ಕೂಡ ಬಹಳ ಸರಳವಾಗುತ್ತದೆ. ಚುನಾವಣಾ ಸಂಬಂಧಿ ಹಲವು ಅಪರಾಧ ಮತ್ತು ಹಿಂಸಾಚಾರಗಳನ್ನು ತಡೆಯಬಹುದು. ಇಂಡೊನೇಷ್ಯಾದಲ್ಲಿ ಇಂದು ಚುನಾವಣೆ ನಡೆದಿದ್ದು, ಆ ದೇಶದಲ್ಲಿ ಕಳೆದ ಆಗಸ್ಟ್ನಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿತ್ತು.
ಬಹಳಷ್ಟು ಮುಂಚಿತವಾಗಿಯೇ ತಮ್ಮ ಪ್ರತಿಸ್ಪರ್ಧಿ ಯಾರೆಂಬುದು ಒಂದುವೇಳೆ ಅಭ್ಯರ್ಥಿಗಳಿಗೆ ಗೊತ್ತಾದರೆ ಕ್ಷೇತ್ರದ ಜನರ ಸೇವೆ ಮಾಡುವುದಕ್ಕೆ ಸಂಬಂಧಿಸಿದಂತೆ ಅವರಲ್ಲಿಯೇ ಸಕಾರಾತ್ಮಕವಾದ ಸ್ಪರ್ಧೆಗೆ ಕಾರಣವಾಗುತ್ತದೆ.
ಇಡೀ ಒಂದು ರಾಷ್ಟ್ರ, ಅದರ ನಾಗರಿಕ ಸಮಾಜ, ಶಾಸಕಾಂಗ ಮತ್ತು ನ್ಯಾಯಾಂಗದ ಅಂಗಗಳು ಸೇರಿ ಆರೋಗ್ಯವಂತ ಪ್ರಜಾಸತ್ತಾತ್ಮಕ ರಾಷ್ಟ್ರ ನಿರ್ಮಾಣ ಮಾಡಬಹುದು.
ಉತ್ತಮ ಸರ್ಕಾರಕ್ಕಾಗಿ ನಮ್ಮ ಮನ ನಿಜವಾಗಲೂ ಹಾತೊರೆದಿದೆಯೇ? ಎಂಬ ಪ್ರಶ್ನೆ ಎದುರಾಗುತ್ತದೆ. ಈ ಬಗ್ಗೆ ನಾವು ಗಂಭೀರವಾಗಿದ್ದೇವೆಯೇ? ನಾವು ಎಂದೆಂದಿಗೂ ಜಾತಿ ಮತ್ತು ಧರ್ಮ ಆಧಾರಿತ ರಾಜಕಾರಣದಿಂದ ಹೊರಬರಲು ಸಾಧ್ಯವಿಲ್ಲವೇ? ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚಾಗಿ ನಮ್ಮನ್ನು ಕಾಡುತ್ತಿವೆ. ಏನೇ ಇರಲಿ ಈ ಪ್ರಶ್ನೆಗಳನ್ನು ಸದಾ ನಮ್ಮನ್ನು ನಾವು ಕೇಳುತ್ತಲೇ ಇರಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.