ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಪ್ರತಿಭಟನೆ ವಾಪಸಿಗೆ ಠಾಕ್ರೆ ಒಪ್ಪಿಗೆ
ಮುಂಬೈ, ಜ. 21 (ಪಿಟಿಐ–ಯುಎನ್ಐ)– ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮನವಿ ಮೇರೆಗೆ, ಪಾಕಿಸ್ತಾನ ಕ್ರಿಕೆಟ್ ತಂಡದ ಭಾರತ ಪ್ರವಾಸಕ್ಕೆ ಒಂದು ವರ್ಷ ಕಾಲ ಅಡ್ಡಿಯುಂಟು ಮಾಡದಿರಲು ಶಿವಸೇನಾ ಮುಖಂಡ ಬಾಳಾ ಠಾಕ್ರೆ ಒಪ್ಪಿಗೆ ನೀಡುವುದರೊಂದಿಗೆ ಭಾರತ–ಪಾಕಿಸ್ತಾನದ ನಡುವಣ ಕ್ರಿಕೆಟ್ ಸರಣಿಗೆ ಇದ್ದ ಆತಂಕ ನಿವಾರಣೆಯಾದಂತಾಗಿದೆ.
ತಮ್ಮ ಮನವಿ ಮೇರೆಗೆ ಶಿವಸೇನಾ ಕಾರ್ಯಕರ್ತರು ಗುಂಡುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಬುಧವಾರವಷ್ಟೇ ಬಾಳಾ ಠಾಕ್ರೆ ಅವರು ಹೇಳಿದ್ದರು. ಆದರೆ ಇಂದು ನವದೆಹಲಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಆಗಮಿಸುವ ಕೆಲ ಗಂಟೆಗಳ ಮೊದಲು ಗೃಹ ಸಚಿವ ಎಲ್.ಕೆ.ಅಡ್ವಾಣಿ ಅವರು ಪ್ರತಿಭಟನೆ ವಾಪಸು ಪಡೆಯುವಂತೆ ಠಾಕ್ರೆ ಅವರ ಮನವೊಲಿಸುವಲ್ಲಿ ಸಫಲರಾದರು.
***
ಗಾಡಿಯಲ್ಲಿ ಸೀಮೆಎಣ್ಣೆ ಮಾರಾಟ ರದ್ದು
ಬೆಂಗಳೂರು, ಜ. 21– ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಗಾಡಿಗಳ ಮುಖಾಂತರ ಬೀದಿಯಲ್ಲಿ ಸೀಮೆಎಣ್ಣೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ.
ಸೀಮೆಎಣ್ಣೆಗಾಗಿ ಕೂಪನ್ ತೆಗೆದುಕೊಂಡ ಮೇಲೂ ನಮಗೆ ಸರಿಯಾಗಿ ಸೀಮೆಎಣ್ಣೆ ದೊರೆಯುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಬಸವಣ್ಣೆಪ್ಪ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.