356ನೇ ವಿಧಿ ಬಳಕೆ: ಒಮ್ಮತ ಅಭಿಪ್ರಾಯಕ್ಕೆ ಪ್ರಧಾನಿ ಕರೆ
ನವದೆಹಲಿ, ಜ. 22 (ಪಿಟಿಐ, ಯುಎನ್ಐ)– ರಾಜ್ಯ ಸರ್ಕಾರಗಳನ್ನು ವಜಾ ಮಾಡಲು ಅಧಿಕಾರ ನೀಡುವ ಸಂವಿಧಾನದ 356ನೇ ವಿಧಿಯ ಬಗ್ಗೆ ಒಮ್ಮತದ ಅಭಿಪ್ರಾಯವನ್ನು ಮೂಡಿಸಲು ವ್ಯಾಪಕವಾದ ಚರ್ಚೆ ನಡೆಯಬೇಕೆಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಸೂಚಿಸಿದರು.
‘ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರ ಅಧ್ಯಕ್ಷತೆಯಲ್ಲಿ ಈ ಸಂಬಂಧ ರಚಿಸಿರುವ ಸಮಿತಿಯ ಸಭೆಯಲ್ಲಿ ಒಮ್ಮತ ಮೂಡದಿರುವುದರಿಂದ ವ್ಯಾಪಕ ಚರ್ಚೆಯ ಅಗತ್ಯವಿದೆ’ ಎಂದು ಅಂತರರಾಜ್ಯ ಮಂಡಳಿಯ ಐದನೇ ಸಭೆಗೆ ಅವರು ತಿಳಿಸಿದರು.
__________
ನೆರವು ನಿಲ್ಲಿಸಲು ಇವರಾರು: ಪಟೇಲ್
ನವದೆಹಲಿ, ಜ. 22– ‘ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದು ವಿಳಂಬವಾದರೆ, ಅದನ್ನು ಆಧಾರವಾಗಿ ಇಟ್ಟುಕೊಂಡು ಕೇಂದ್ರದಿಂದ ಬರಬೇಕಾದ ಹಣವನ್ನು ನಿಲ್ಲಿಸಲು ಇವರಾರು?’
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಖಾತೆ ಸಚಿವ ಬಾಬಾ ಗೌಡ ಪಾಟೀಲ ಅವರಿಗೆ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ನೇರ ಪ್ರಶ್ನೆ ಇದು.
ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ನಡೆಸದೆ ಮುಂದೂಡಿರುವುದರಿಂದ ಕೇಂದ್ರದ ಹಣವನ್ನು ನಿಲ್ಲಿಸುವುದಾಗಿ ಪಾಟೀಲ ಅವರು ನೀಡಿರುವ ಎಚ್ಚರಿಕೆ ಬಗೆಗೆ ಕೇಳಿದ ಪ್ರಶ್ನೆಗೆ ಪಟೇಲ್ ಸಿಡುಕಿನಿಂದಲೇ ಉತ್ತರಿಸಿದರು.