ಒರಿಸ್ಸಾ: ಕ್ರೈಸ್ತ ಧರ್ಮ ಪ್ರಚಾರಕ ಇಬ್ಬರು ಮಕ್ಕಳ ಸಜೀವ ದಹನ
ಮನೋಹರಪುರ (ಒರಿಸ್ಸಾ), ಜ. 23 (ಪಿಟಿಐ): ಒರಿಸ್ಸಾದ ಕೇವಂಜಾರ್ ಜಿಲ್ಲೆಯ ಬುಡಕಟ್ಟು ಹಳ್ಳಿಯಾದ ಇಲ್ಲಿ ನಿನ್ನೆ ಮಧ್ಯರಾತ್ರಿ ನಂತರ ಆಸ್ಟ್ರೇಲಿಯಾದ ಒಬ್ಬ ಕ್ರೈಸ್ತ ಧರ್ಮ ಪ್ರಚಾರಕ ಮತ್ತು ಅವರ ಇಬ್ಬರು ಮಕ್ಕಳನ್ನು ಬಜರಂಗದಳ ಕಾರ್ಯಕರ್ತರು ಜೀವಂತವಾಗಿ ಸುಟ್ಟುಹಾಕಿದ ಆಘಾತಕಾರಿ ಘಟನೆ ನಡೆದಿದೆ.
ಈ ಹಳ್ಳಿಯಲ್ಲಿ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎಂದು ಆಪಾದಿಸಿ ಈ ಕೃತ್ಯ ಎಸಗಲಾಗಿದೆ. ಬಿಲ್ಲು ಮತ್ತು ಬಾಣಗಳನ್ನು ಹಿಡಿದಿದ್ದ ಕಾರ್ಯಕರ್ತರು ಜೀಪಿನೊಳಗೆ ನಿದ್ರಿಸುತ್ತಿದ್ದ 58 ವರ್ಷ ವಯಸ್ಸಿನ ಗ್ರಹಾಂ ಸ್ಟಿವರ್ಟ್ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರಾದ ಫಿಲಿಪ್ಸ್ (9) ಮತ್ತು ತಿಮೋಥಿ (7) ಅವರನ್ನು ಜೀವಂತವಾಗಿ ದಹಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
***
ರಾಜೀನಾಮೆ ಕೊಟ್ಟಿದ್ದು ನಿಜ: ಸಚಿವ
ಬೆಂಗಳೂರು, ಜ. 23: ಗ್ರಾಮ ಪಂಚಾಯ್ತಿಗಳ ಚುನಾವಣೆ ಮುಂದೂಡಿದುದನ್ನು ವಿರೋಧಿಸಿ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ನಿಜವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಂ.ಪಿ. ಪ್ರಕಾಶ್ ಇಂದು ಇಲ್ಲಿ ಹೇಳಿದರು.
ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ, ಚುನಾವಣೆಯನ್ನು ಮುಂದೂಡುವ ಬಗ್ಗೆ ಪ್ರಸ್ತಾಪ ಬಂದಾಗ ತಾವು ಅದನ್ನು ಪ್ರಬಲವಾಗಿ ವಿರೋಧಿಸಿದುದಾಗಿ ಪತ್ರಕರ್ತರಿಗೆ ತಿಳಿಸಿದರು.