ದಳ ನಾಯಕತ್ವ ಬದಲಾವಣೆಗೆ ಹಿರಿಯ ಸಚಿವರ ವಿರೋಧ
ಬೆಂಗಳೂರು, ಡಿ. 28– ‘ರಾಜ್ಯದ ವಿಧಾನ ಸಭೆಗೆ ಚುನಾವಣೆ ನಡೆಯಲು ಇನ್ನು ಕೇವಲ ಹತ್ತು ತಿಂಗಳಿರುವಾಗ ದಳ ನಾಯಕತ್ವ ಬದ ಲಾವಣೆ ವಿಚಾರವು ಪಕ್ಷದ ಹಿತದೃಷ್ಟಿಯಿಂದ ಸಾಧುವಲ್ಲ’ ಎಂಬ ಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೆ ತಿಳಿಸಲು ರಾಜ್ಯದ ಕೆಲವು ಹಿರಿಯ ಸಚಿವರು ತೀರ್ಮಾನಿಸಿದ್ದಾರೆ.
‘ವಿಧಾನಸಭೆ ಚುನಾವಣೆ ಇಷ್ಟು ಹತ್ತಿರದಲ್ಲಿರುವಾಗ ಮುಖ್ಯಮಂತ್ರಿ ಜೆ.ಎಚ್.ಪಟೇಲರ ನಾಯಕತ್ವ ಬದಲಾವಣೆಯಾಗಲಿ, ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಸಚಿವರನ್ನು ಕೈಬಿಡುವುದಾಗಲಿ ಸರಿಯಾದ ಕ್ರಮವಾಗುವುದಿಲ್ಲ. ಇದರಿಂದ ಭಿನ್ನಮತ ಇನ್ನಷ್ಟು ಹೆಚ್ಚಿ ಪಕ್ಷ ನೆಲಕಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂಬ ಅಭಿಪ್ರಾಯ ಹಿರಿಯ ಸಚಿವರ ಸಭೆಯಲ್ಲಿ ವ್ಯಕ್ತವಾಯಿತು ಎಂದು ಹೇಳಲಾಗಿದೆ.
ಎಡದಂಡೆ ಕಾಲುವೆ ದುರಸ್ತಿ ಪೂರ್ಣ
ಬೆಂಗಳೂರು, ಡಿ. 28 – ಮುನಿರಾಬಾದ್ನಲ್ಲಿ ಈ ತಿಂಗಳ 22ರಂದು ಒಡೆದುಹೋಗಿದ್ದ ತುಂಗಭದ್ರಾ ಎಡದಂಡೆ ಕಾಲುವೆಯನ್ನು ದುರಸ್ತಿ ಮಾಡಿ, ಇಂದಿನಿಂದ ನೀರು ಬಿಡುವ ಕಾರ್ಯ ಆರಂಭವಾಗಿದೆ.
ಈ ಕಾಲುವೆ ಪದೇ ಪದೇ ಒಡೆಯದಂತೆ ಶಾಶ್ವತ ಕಾಮಗಾರಿ ಕೈಗೊಳ್ಳಲು ನೂರು ಕೋಟಿ ರೂಪಾಯಿಗಳ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಭಾರಿ ನೀರಾವರಿ ಸಚಿವ ಕೆ.ಎನ್.ನಾಗೇಗೌಡ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.