ಪಿರಿಯಾಪಟ್ಟಣದಲ್ಲಿ ಬ್ಯಾಂಕ್ ದರೋಡೆ
ಪಿರಿಯಾಪಟ್ಟಣ, ಫೆ. 11– ಪಟ್ಟಣದ ಹೊರವಲಯದ ಅಬ್ಬೂರಿನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ವ್ಯವಸಾಯ ಅಭಿವೃದ್ಧಿ ಶಾಖೆಗೆ ಇಂದು ಮಧ್ಯಾಹ್ನ ಹಠಾತ್ತನೆ ಮೂವರು ಬಂದೂಕುಧಾರಿಗಳು ಪ್ರವೇಶಿಸಿ ಗುಂಡು ಹಾರಿಸಿ ಕ್ಯಾಷ್ ಕೌಂಟರ್ನಲ್ಲಿದ್ದ ಹಣವನ್ನಲ್ಲದೆ ನೌಕರರ ಬಳಿಯಿದ್ದ
ಹಣ, ಒಡವೆ ದೋಚಿಕೊಂಡು ಪರಾರಿಯಾಗಿದ್ದಾರೆ.
ದರೋಡೆಕೋರರು ಹಾರಿಸಿದ ಗುಂಡು ತಗುಲಿ ಬ್ಯಾಂಕ್ ನೌಕರರೊಬ್ಬರು ಗಾಯಗೊಂಡಿದ್ದಾರೆ.
ಕೃಷ್ಣಾ ಮೇಲ್ದಂಡೆ: 2000 ಇಸವಿ ಒಳಗೆ ರಾಜ್ಯದ ಪಾಲಿನ ನೀರು ಬಳಕೆ– ಪಾಟೀಲ್
ಬಳ್ಳಾರಿ, ಫೆ. 11– ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ 2000 ಇಸವಿ ಒಳಗೆ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಸರ್ವಸನ್ನದ್ಧರಾಗಿರುವುದಾಗಿ ಮುಖ್ಯಮಂತ್ರಿ
ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ತಿಳಿಸಿದರು.
ಆಲಮಟ್ಟಿ ಅಣೆಕಟ್ಟಿನ ಕಾಮಗಾರಿಯ ಪ್ರಗತಿ ವೀಕ್ಷಿಸಿ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯ ತಂಗಿದ್ದ ಅವರು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು.
‘2000 ಇಸವಿ ಒಳಗೆ ಯೋಜನೆ ಮುಗಿಸುತ್ತೇವೆ ಎಂದು ಹೇಳುತ್ತಿದ್ದೀರಿ. ಆದರೆ, ಉಳಿದಿರುವ 20–22 ತಿಂಗಳಲ್ಲಿ ಯೋಜನೆ ಪೂರ್ಣಗೊಂಡು ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವ ಸಾಧ್ಯತೆ ಬಗ್ಗೆ ಜನತೆ ಆತಂಕಗೊಂಡಿದೆಯಲ್ಲ’ ಎಂದಾಗ, ‘ಅಣೆಕಟ್ಟೆಗೆ ಗೇಟ್ ಕೂರಿಸಿದರೆ ನಮ್ಮ ಪಾಲಿನ ನೀರು ಉಳಿಸಿಕೊಂಡಂತೆಯೇ’ ಎಂದರು.