ಪುನರ್ರಚಿತವಾದ ಪ್ರದೇಶ ಆಡಳಿತ ಕಾಂಗ್ರೆಸ್ ಸಮಿತಿಗೆ ಅರಸು ಅಧ್ಯಕ್ಷತೆ ಸಂಭವ
ನವದೆಹಲಿ, ಜೂನ್ 23– ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಪುನರ್ರಚನೆ ಕುರಿತು ಪಕ್ಷದ ಸರ್ವೋಚ್ಚ ನಾಯಕರ ಜೊತೆ ಮಾತುಕತೆಗಾಗಿ ಮೈಸೂರಿನ ಆಡಳಿತ ಕಾಂಗ್ರೆಸ್ ನಾಯಕರು ಈಗ ದೆಹಲಿಗೆ ಆಗಮಿಸಿದ್ದಾರೆ.
ಮಾತುಕತೆ ನಾಳೆ ಆರಂಭವಾಗಲಿದೆ. ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾ ವಣೆಗೆ ಪಕ್ಷವನ್ನು ಸಿದ್ಧಗೊಳಿಸುವುದು ಈ ಪುನರ್ರಚನೆ ಪ್ರಯತ್ನದ ಮುಖ್ಯ ಉದ್ದೇಶ.
ರಾಜ್ಯ ಆಡಳಿತ ಕಾಂಗ್ರೆಸ್ ಅಡ್ಹಾಕ್ ಸಮಿತಿಯ ಸಂಚಾಲಕರಾದ ಶ್ರೀ ದೇವರಾಜ ಅರಸು ಅವರು ಪುನರ್ರಚಿತ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗುವ ಸಂಭವವಿದೆ. ಇಬ್ಬರು ಉಪಾಧ್ಯಕ್ಷರು ಮತ್ತು ಮೂವರು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗುವುದು.
ಪೊಲೀಸರಿಗೆ ‘ಮಾಮೂಲು’: ಪ್ರಯಾಣಿಕರಿಗೆ ಪರದಾಟ
ಬೆಂಗಳೂರು, ಜೂನ್ 23–‘ನಗರದ ರೈಲ್ವೆನಿಲ್ದಾಣದ ಎದುರು ರಸ್ತೆಯ ಮೇಲೆ ಕೆಲವು ಬಾಲಕರು ನಿಂತು, ಪೊಲೀಸರ ಪರವಾಗಿ ಆಟೋರಿಕ್ಷಾ ಚಾಲಕರಿಂದ ‘ಮಾಮೂಲು’ ವಸೂಲಿ ಮಾಡುತ್ತಿದ್ದಾರೆ’
ಇಂದು ಬೆಳಿಗ್ಗೆ ಸೇರಿದ ಪತ್ರಿಕಾಗೋಷ್ಠಿ ಯಲ್ಲಿ ವರದಿಗಾರರೊಬ್ಬರು ಪೊಲೀಸ್ ಕಮೀಷನರರ ಗಮನಕ್ಕೆ ತಂದಾಗ, ಈ ಬಗ್ಗೆ ತತ್ಕ್ಷಣ ತನಿಖೆ ನಡೆಸಲು ಪೊಲೀಸ್ ಕಮೀಷನರ್ ಶ್ರೀ ಎಚ್. ವೀರಭದ್ರಯ್ಯ ಅವರು ಆದೇಶ ನೀಡಿದರು.
‘ಪೊಲೀಸರಿಗೆ ಕೊಡಬೇಕು’ ಎಂದು ಹೇಳಿ ಈ ಬಾಲಕರು ಆಟೋರಿಕ್ಷಾ ಚಾಲಕರಿಂದ ತಲಾ ಹತ್ತು ಪೈಸೆ ವಸೂಲಿ ಮಾಡುತ್ತಿದ್ದಾರೆ’ ಎಂದು ವರದಿಗಾರರು ಕಮೀಷನರರ ಗಮನಕ್ಕೆ ತಂದರು.