ಭಾರತಕ್ಕೆ ಸಂಕಷ್ಟ ಒದಗಿದಾಗ ಸರ್ವ ನೆರವು: ಬ್ರೆಜ್ನೇವ್
ನವದೆಹಲಿ, ನ.27– ಭಾರತದ ಜತೆ ಎಂದೆಂದಿಗೂ ಅದರಲ್ಲೂ ವಿಶೇಷವಾಗಿ ಸಂಕಷ್ಟಗಳು ಎದುರಾದಾಗ ಭುಜಕ್ಕೆ ಭುಜ ಕೊಟ್ಟು ನಿಲ್ಲುವ ಭರವಸೆಯನ್ನು ಸೋವಿಯತ್ ಕಮ್ಯುನಿಸ್ಟ್ ಪಕ್ಷದ ನಾಯಕ ಬ್ರೆಜ್ನೇವ್ ಅವರು ಇಂದು ಇಲ್ಲಿ ನೀಡಿದರು.
ಕೆಂಪುಕೋಟೆಯಲ್ಲಿ ಇಂದು ದೆಹಲಿ ಪೌರರು ನೀಡಿದ ಸನ್ಮಾನ ಸಮಾರಂಭದಲ್ಲಿ ಭಾಷಣ ಮಾಡುತ್ತಾ, ಭಾರತ ಮತ್ತು ರಷ್ಯಾ ನಡುವಣ ಸ್ನೇಹವು ಇಂದು ಭಿಲಾಯ್ನಲ್ಲಿ ಉತ್ಪಾದಿಸುವ ಉಕ್ಕಿನಷ್ಟೇ ಗಟ್ಟಿಮುಟ್ಟಾಗಿ
ಇರುವುದೆಂದು ಹೇಳಿದರು.
ವಿಶ್ವಶಾಂತಿ ಅದರಲ್ಲೂ ವಿಶೇಷವಾಗಿ ಉಭಯ ರಾಷ್ಟ್ರಗಳ ಭದ್ರತೆ ಹಿತದೃಷ್ಟಿಯಿಂದ ಭಾರತ–ರಷ್ಯಾ ಸ್ನೇಹಕ್ಕೆ ಹೆಚ್ಚಿನ ಮಹತ್ವ ಇರುವುದೆಂದರು.
______________________________________
ಕಾಳಿ ಯೋಜನೆ: 79ರ ಕೊನೆಗೆ ನಿರ್ಮಾಣ ಕಾರ್ಯ ಪೂರ್ಣ
ನವದೆಹಲಿ, ನ.27– ದೇಶದಲ್ಲೇ ಅತ್ಯಂತ ಅಗ್ಗದ ವಿದ್ಯುತ್ ಉತ್ಪಾದನಾ ಕೇಂದ್ರವಾಗುವ ನಿರೀಕ್ಷೆ ಇರುವ ಕಾಳಿ ನದಿ ಜಲವಿದ್ಯುತ್ ಯೋಜನೆಯು 1979 ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ನೀರಾವರಿ ಮತ್ತು ವಿದ್ಯುತ್ ಖಾತೆ ಸಹಾಯಕ ಸಚಿವ ಸಿದ್ದೇಶ್ವರ ಪ್ರಸಾದ್ ಇಂದು ಲೋಕಸಭೆಗೆ ತಿಳಿಸಿದರು.
ಕಾಳಿ ನದಿ ಯೋಜನೆ ಮೊದಲನೇ ಮತ್ತು ಎರಡನೇ ಹಂತದ ನಿರ್ಮಾಣ ವೆಚ್ಚ ₹81.52 ಕೋಟಿ ಎಂದು ಅಂದಾಜು ಮಾಡಲಾಗಿದೆ ಎಂದರು.