ಭೂಸುಧಾರಣೆ ವಿಧೇಯಕಕ್ಕೆ ಇನ್ನೊಂದು ವಾರದಲ್ಲಿ ರಾಷ್ಟ್ರಪತಿ ಸಹಿ?
ಬೆಂಗಳೂರು, ಜ. 21– ಗೇಣಿದಾರರು ಮತ್ತು ಭೂಹೀನ ರೈತರು, ಕಳೆದ ಎಂಟು ತಿಂಗಳುಗಳಿಂದ ಬಕಪಕ್ಷಿಗಳಂತೆ ಕಾದಿರುವ ಕರ್ನಾಟಕದ ಭೂಸುಧಾರಣಾ ವಿಧೇಯಕವು ಇನ್ನೊಂದು ವಾರದಲ್ಲಿ ರಾಷ್ಟ್ರಪತಿಯವರ ಸಹಿ ಪಡೆದುಬರಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ವಿಧೇಯಕವು ಕಳೆದ ವಾರ ಕೇಂದ್ರ ಕಾನೂನು ಇಲಾಖೆಯಿಂದ ಗೃಹ ಇಲಾಖೆಗೆ ಹೋಗಿದ್ದು, ಅಲ್ಲಿಯೂ ಪರಿಶೀಲನೆ ಅಂತಿಮ ಘಟ್ಟದಲ್ಲಿದೆ. ಇನ್ನೊಂದು ವಾರದಲ್ಲಿ ಇದೆಲ್ಲ ಮುಗಿದು, ರಾಷ್ಟ್ರಪತಿಯವರ ಒಪ್ಪಿಗೆ ವಿಧೇಯಕಕ್ಕೆ ದೊರಕಲಿದೆ ಎಂದು ಸರ್ಕಾರಿ ವಕ್ತಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
***
ಕೊಲ್ಲಿಬೆಟ್ಟ ಅಣೆ ನಿರ್ಮಾಣಕ್ಕೆ ತಮಿಳುನಾಡಿಗೆ ಕೇಂದ್ರ ಅನುಮತಿ ನಿರಾಕರಣೆ
ಮದ್ರಾಸ್, ಜ. 21– ಕಾವೇರಿ ಜಲ ವಿವಾದ ಇನ್ನೂ ಇತ್ಯರ್ಥವಾಗಬೇಕಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಯೋಜನೆಗೂ ಅನುಮತಿ ನೀಡಲಾಗದು ಎಂದು ಕೇಂದ್ರ ಸರ್ಕಾರವು ತಮಿಳುನಾಡಿಗೆ ತಿಳಿಸಿದೆ ಎಂದು ಕಾಮಗಾರಿ ಸಚಿವ ಪಿ.ಯು. ಷಣ್ಮುಗಂ ಅವರು ಇಂದು ರಾಜ್ಯ ವಿಧಾನಸಭೆಗೆ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.
ತಮಿಳುನಾಡು ಸರ್ಕಾರವು ಕೊಲ್ಲಿ ಬೆಟ್ಟ ಜಲಾಶಯ ಯೋಜನೆ ನಿರ್ಮಾಣಕ್ಕಾಗಿ ಕೇಂದ್ರ ಜಲ ಮತ್ತು ವಿದ್ಯುತ್ ಆಯೋಗಕ್ಕೆ ಬರೆದು ತಾಂತ್ರಿಕ ಅನುಮತಿ ಕೋರಿದಾಗ ಕೇಂದ್ರವು ಈ ರೀತಿಯ ಉತ್ತರ ನೀಡಿದೆ.