ನವದೆಹಲಿ, ಜ. 24– ಆಹಾರಧಾನ್ಯಗಳ ಬೆಲೆ ಇಳಿಸಲು ಭಾರತದ ಆಹಾರ ಕಾರ್ಪೊರೇಷನ್ ಇಂದು ಮೊದಲ ಬಾರಿಗೆ ಪೇಟೆಯಲ್ಲಿ ಮಾರಾಟಕ್ಕೆ ಇಳಿಯಿತು.
ವಿವಿಧ ರಾಜ್ಯಗಳ 60 ಮಂಡಿಗಳಲ್ಲಿ ಅದು ಮಾರಾಟ ಪ್ರಾರಂಭಿಸಿತು. ಇದರ ಪರಿಣಾಮವಾಗಿ ಗೋಧಿಯ ಬೆಲೆ ಕ್ವಿಂಟಾಲಿಗೆ ಆರು ರೂ.ಗಳಷ್ಟು ಇಳಿಯಿತು.
ಇನ್ನು 7ರಿಂದ 10 ದಿನಗಳೊಳಗೆ ಸ್ವದೇಶಿ ಗೋಧಿ ಬೆಲೆಯನ್ನು ಕ್ವಿಂಟಾಲಿಗೆ82 ರೂ.ಗಳಿಗೆ ಇಳಿಸುವುದಾಗಿ ಕಾರ್ಪೊರೇಷನ್ ಅಧ್ಯಕ್ಷ ಶ್ರೀ ಇಕ್ಬಾಲ್ ಸಿಂಗ್ ಅವರು ಇಂದು ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು. ಈಗ ಅದರ ಬೆಲೆ 90ರಿಂದ 100 ರೂ.ಗಳವರೆಗೆ ಇದೆ.
ಎರಡು ವರ್ಷಗಳಲ್ಲಿ ದೆಹಲಿ ಬೆಂಗಳೂರು ನಡುವೆ ನೇರ ರೈಲು ಪ್ರಯಾಣ ಸಾಧ್ಯ
ಕೆಂಗಲ್, ಜ. 24– ಇನ್ನೆರಡು ವರ್ಷಗಳಲ್ಲಿ ಕೇರಳದ ರಾಜಧಾನಿ ತಿರುವನಂತಪುರ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರುಗಳಿಂದ ನೇರವಾಗಿ ದೆಹಲಿಗೆ ರೈಲು ಪ್ರಯಾಣ ಸೌಲಭ್ಯ ದೊರೆಯಲಿದೆ.