ನೈಸರ್ಗಿಕ ಗೊಬ್ಬರದ ಬಳಕೆ ಅಗತ್ಯ ರೈತರಿಗೆ ಮನವರಿಕೆ ಮಾಡಿಕೊಡಲು ಕರೆ
ಬೆಂಗಳೂರು, ಏ. 14– ರಾಸಾಯನಿಕ ಗೊಬ್ಬರದ ಕೊರತೆ ಇರುವಾಗ, ಪರ್ಯಾಯವಾಗಿ ಅಷ್ಟೇ ಉಪಯುಕ್ತವಾಗಿರುವ ನೈಸರ್ಗಿಕ ಗೊಬ್ಬರದ ಬಳಕೆಯ ಅಗತ್ಯವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ರೈತರಿಗೆ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಮನವರಿಕೆ ಮಾಡಿಕೊಡಬೇಕೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ಹೇಳಿದರು.
ರಾಜ್ಯ ಸಮುದಾಯ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಮುಖ್ಯಮಂತ್ರಿಗಳು, ಹಸಿರುಗೊಬ್ಬರ, ಗುಂಡಿಗೊಬ್ಬರ ಮತ್ತು ಕೆರೆಯ ಗೋಡುಮಣ್ಣು ಮುಂತಾದ ನೈಸರ್ಗಿಕ ಗೊಬ್ಬರವನ್ನು ಮತ್ತೆ ಜನಪ್ರಿಯಗೊಳಿಸಬೇಕಾದ ಕಾಲ ಸನ್ನಿಹಿತ ಆಗಿದೆ ಎಂದರು.
40 ಲಕ್ಷ ಜನರಿಂದ ಕುಂಭಮೇಳ ಸ್ನಾನ
ಹರಿದ್ವಾರ, ಏ. 14– ದೇಶದಾದ್ಯಂತ ಹಲವು ಊರುಗಳಿಂದ ಆಗಮಿಸಿದ್ದ ಸುಮಾರು 40 ಲಕ್ಷ ಜನ ಇಂದು ಕುಂಭಮೇಳದ ಸಂದರ್ಭದಲ್ಲಿ ಪವಿತ್ರ ಗಂಗಾಸ್ನಾನ ಮಾಡಿದರು. ಹರಕಿ ಪೌರೀ ಸ್ನಾನಘಟ್ಟ ವೊಂದರಲ್ಲೇ 20 ಲಕ್ಷ ಜನ ಮುಳುಗಿ ಎದ್ದರು.
ಹನ್ನೆರಡು ವರ್ಷಗಳಿಗೊಮ್ಮೆ ಆಗುವ ಕುಂಭಮೇಳವು ಸರತಿಯಂತೆ ಹರಿದ್ವಾರ, ಅಲಹಾಬಾದ್, ಉಜ್ಜಯಿನಿ ಮತ್ತು ನಾಸಿಕದಲ್ಲಿ ನಡೆಯುತ್ತದೆ.