ನವದೆಹಲಿ, ಏ. 19– ರಾಷ್ಟ್ರದಲ್ಲಿ ಸೌಂದರ್ಯ ವರ್ಧಕ ವಸ್ತುಗಳು ಮತ್ತಿತರ ನಕಲಿ ವಸ್ತುಗಳ ಉತ್ಪಾದನೆ ಹಾಗೂ ಅವುಗಳ ಮಾರಾಟದಿಂದ ವರ್ಷಕ್ಕೆ 170 ಕೋಟಿ ರೂಪಾಯಿ ತೆರಿಗೆ ವಂಚನೆಯಾಗುತ್ತಿರುವುದನ್ನು ಭಾರತದ ಬಳಕೆದಾರರ ಮಂಡಲಿಯು ಅಂಕಿಅಂಶಗಳಿಂದ ಪ್ರತ್ಯಕ್ಷಪಡಿಸಿದೆ.
ವ್ಯಾಪಾರಸ್ಥರಿಗೆ ನಗದು ರಸೀತಿ ಕೊಡದೆ ಮಾರಾಟ ತೆರಿಗೆ ಹಾಗೂ ಆದಾಯ ತೆರಿಗೆಗಳಿಂದ ನುಸುಳಿಕೊಳ್ಳುವ ಸಾಚಾ ಅಲ್ಲದ ಅನೇಕ ವಸ್ತುಗಳ ವಹಿವಾಟು ನಡೆಯುತ್ತಿರು ವುದನ್ನು ಇಂದು ಇಲ್ಲಿ ಹಣಕಾಸು ಮತ್ತು ಇತರ ಸಚಿವ ಶಾಖೆಗಳಿಗೆ ಸಲ್ಲಿಸಿದ ಮನವಿ ವಿಶ್ಲೇಷಿಸಿದೆ.
ಅನೇಕ ನಕಲಿ ವಸ್ತುಗಳ ಉತ್ಪಾದನೆಗೆ ದೆಹಲಿ, ಮುಂಬೈ, ಅಹಮದಾಬಾದ್, ಕಲ್ಕತ್ತ, ತಿರುವನಂತಪುರ, ಮದ್ರಾಸ್, ಲಖನೌ, ಭೋಪಾಲ್ ಮತ್ತಿತರ ನಗರಗಳು ಕೇಂದ್ರಸ್ಥಳಗಳಾಗಿದ್ದು ರಾಷ್ಟ್ರದ ನಾನಾ ಭಾಗಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ನಡೆಯುತ್ತಿರುವುದನ್ನು ಎತ್ತಿ ತೋರಿಸಲಾಗಿದೆ.
ಜೆ.ಪಿ. ಬೆಂಬಲಕ್ಕೆ ಮೌನ ಜಾಥಾ
ಬೆಂಗಳೂರು, ಏ. 19– ‘ಭ್ರಷ್ಟಾಚಾರ ಮತ್ತು ದಾರಿದ್ರ್ಯದ ಸಂಕೇತವಾಗಿರುವ ಪ್ರಸಕ್ತ ಸಮಾಜ ವ್ಯವಸ್ಥೆಯನ್ನು ನಾಶ ಮಾಡಲು’ ತೀರ್ಮಾನಿಸಿರುವ ಶ್ರೀ ಜಯಪ್ರಕಾಶ ನಾರಾಯಣ್ ಅವರಿಗೆ ಬೆಂಬಲ ಸೂಚಿಸಲು, ಸಮಾಜವಾದಿ ಯುವಜನ ಸಭಾದ ರಾಜ್ಯಶಾಖೆ ಮಂಗಳವಾರ (ಏ. 23) ನಗರದಲ್ಲಿ ಮೌನ ಮೆರವಣಿಗೆ ನಡೆಸಲಿದೆ.