ಬೆಂಗಳೂರು, ಏ. 29– ರಾಜ್ಯದ ಚೆಕ್ಪೋಸ್ಟ್ ವ್ಯವಸ್ಥೆಯನ್ನು ಸುಧಾರಿಸಿ, ದಕ್ಷಗೊಳಿಸುವ ದಿಸೆಯಲ್ಲಿ ಚರ್ಚಿಸಲು ಸಂಬಂಧಪಟ್ಟವರ ಸಭೆಯನ್ನು ಸದ್ಯದಲ್ಲಿಯೇ ತಾವು ಕರೆಯಲಿರು ವುದಾಗಿ ಅರ್ಥಮಂತ್ರಿ ಎಂ.ವೈ. ಘೋರ್ಪಡೆ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ಪ್ಲಾಸ್ಟಿಕ್ ಕೈಬಳೆಗಳ ಮೇಲೆ ವಿಧಿಸಲಾಗಿರುವ ಮಾರಾಟ ತೆರಿಗೆಯನ್ನು ರದ್ದುಗೊಳಿಸುವ ಸೂಚನೆಯನ್ನು ತಾವು ಪರಿಶೀಲಿಸುವುದಾಗಿ ಅವರು ಹೇಳಿದರು.
ತಮಗೆ ಸಂಬಂಧಿಸಿದ ಇಲಾಖೆಗಳ ಬೇಡಿಕೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಚಿವರು, ಆಹಾರಧಾನ್ಯಗಳ ಮೇಲಿನ ಅತ್ಯಲ್ಪ ಮಾರಾಟ ತೆರಿಗೆ 5–6 ಕೋಟಿ ರೂಪಾಯಿ ವರಮಾನ ತರುವುದರಿಂದ, ಸದ್ಯದ ಪರಿಸ್ಥಿತಿಯಲ್ಲಿ ಅದರ ರದ್ದು ಸಾಧ್ಯವಿಲ್ಲ ಎಂದರು.
ನ್ಯಾಯಾಲಯಗಳಲ್ಲಿ ಎಲ್ಲ ಹಂತದಲ್ಲಿ ಕನ್ನಡ
ಬೆಂಗಳೂರು, ಏ. 29– ಇನ್ನೆರಡು ವರ್ಷಗಳಲ್ಲಿ ಹೈಕೋರ್ಟನ್ನುಳಿದು ಇತರ ಎಲ್ಲ ಹಂತಗಳಲ್ಲಿ ಕನ್ನಡವೇ ನ್ಯಾಯಾಲಯದ ಭಾಷೆಯಾಗಲಿದೆ.
ಕಾನೂನು ಮತ್ತು ಪೌರಾಡಳಿತ ಬಾಬುಗಳ ಬೇಡಿಕೆ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಇಂದು ಉತ್ತರ ನೀಡಿದ ಪೌರಾಡಳಿತ ಸಚಿವ ಡಿ.ಕೆ. ನಾಯ್ಕರ್ ಅವರು, ಜನಭಾಷೆಯಲ್ಲೇ ನ್ಯಾಯದಾನ ನೀಡುವ ಬಗ್ಗೆ, ಭಾಷಾಂತರ ಆಯೋಗವು ತನ್ನ ಕೆಲಸ ಮುಗಿಸಿದ ತತ್ಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು
ಹೇಳಿ, ಇನ್ನೆರಡು ವರ್ಷಗಳಲ್ಲಿ ಅದು ಪೂರೈಕೆಯಾಗುವ ಆಶಾಭಾವನೆ ವ್ಯಕ್ತ ಮಾಡಿದರು.