ಪುಣೆ, ಆ. 20– ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಇಂದು ಇಲ್ಲಿ ವಿದ್ಯಾರ್ಥಿ ಅಶಿಸ್ತಿನ ಬಗ್ಗೆ ತೀವ್ರ ಎಚ್ಚರಿಕೆ ನೀಡಿ, ವಿದ್ಯಾರ್ಥಿಗಳನ್ನು ರಾಜಕೀಯ ಚಳವಳಿಗಳಿಗೆ ಎಳೆಯಕೂಡದೆಂದು ರಾಜಕಾರಣಿಗಳಿಗೆ ವಿಶೇಷವಾಗಿ ಮನವಿ ಮಾಡಿಕೊಂಡರು.
ರಾಷ್ಟ್ರದ ಮುಂದಿನ ನಾಯಕರಾದ ವಿದ್ಯಾರ್ಥಿಗಳು ರಾಜಕೀಯ ಬೆಳವಣಿಗೆಗಳನ್ನು ವಿವೇಚನೆಯಿಂದ ಪರಿಶೀಲಿಸಿ, ಅರ್ಥಮಾಡಿಕೊಳ್ಳಬೇಕಾದುದು ಅಗತ್ಯವಾದರೂ ರಾಜಕೀಯದಲ್ಲಿ ವಿದ್ಯಾರ್ಥಿಗಳ ಸಕ್ರಿಯ ಪಾತ್ರ ಸಲ್ಲದೆಂದು ರಾಷ್ಟ್ರಪತಿಗಳು ಹೇಳಿದರು.
ವಿದ್ಯೆ, ವ್ಯಾಸಂಗಗಳಲ್ಲಿ ಅತ್ಯುತ್ತಮ ಮಟ್ಟ ಪಡೆಯುವುದೇ ವಿದ್ಯಾರ್ಥಿಗಳ ಏಕೈಕ ಗುರಿಯಾಗಿರಬೇಕು. ಈ ಸಾಧನೆಯಲ್ಲಿ ಶಿಸ್ತಿನ ವರ್ತನೆ ಅತ್ಯಗತ್ಯ‘ ಎಂದೂ ಅವರು ಡಕ್ಕನ್ ಕಾಲೇಜ್ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಯ 150ನೇ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸುತ್ತಾ ಹೇಳಿದರು.
ರಾಮಚರಿತ ಮಾನಸ: ಯುನೆಸ್ಕೊ ಕಾರ್ಯಕ್ರಮಕ್ಕೆ ಸೇರಿಸಲು ಶಿಫಾರಸು
ನವದೆಹಲಿ, ಆ. 20– 1973ರಲ್ಲಿ ನಡೆಯುವ ರಾಮಚರಿತ ಮಾನಸದ ನಾಲ್ಕನೇ ಶತಮಾನೋತ್ಸವ ಸಮಾರಂಭವನ್ನು ಯುನೆಸ್ಕೊ ಕಾರ್ಯಕ್ರಮದಲ್ಲಿ ಅಡಕ ಮಾಡುವಂತೆ ಯುನೆಸ್ಕೊ ಬಗ್ಗೆ ಭಾರತೀಯ ರಾಷ್ಟ್ರೀಯ ಆಯೋಗದ ಸಾಮೂಹಿಕ ಸಂಪರ್ಕದ ಉಪ ಸಮಿತಿಯು ಶಿಫಾರಸು ಮಾಡಿದೆ.
ರಾಮಾಯಣದ ಬಗ್ಗೆ ಭಾರತದಲ್ಲಿ ವಿಶ್ವ ಸಮ್ಮೇಳನದ ವ್ಯವಸ್ಥೆ ಮಾಡುವುದಕ್ಕೆ ಯುನೆಸ್ಕೊ ಆರ್ಥಿಕ ನೆರವು ನೀಡುವಂತೆಯೂ ಶ್ರೀ ಡಿ.ಆರ್. ಮಂಕೇಕರ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಉಪ ಸಮಿತಿ ಸಭೆ ಶಿಫಾರಸು ಮಾಡಿತು.