ನವದೆಹಲಿ, ಮಾರ್ಚ್ 31– ಬಹಳ ದಿನಗಳಿಂದ ನಿರೀಕ್ಷಿಸಲಾಗಿದ್ದ ಕೇಂದ್ರ ನೌಕರರ ತೃತೀಯ ವೇತನ ಆಯೋಗದ ವರದಿಯನ್ನು ಅದರ ಅಧ್ಯಕ್ಷ ನ್ಯಾಯಮೂರ್ತಿ ಶ್ರೀ ರಘುವರ್ ದಯಾಳ್ ಅವರು ಇಂದು ಕೇಂದ್ರ ಹಣಕಾಸು ಮಂತ್ರಿ ಶ್ರೀ ವೈ.ಬಿ.ಚವಾಣ್ ಅವರಿಗೆ ಸಲ್ಲಿಸಿದರು.
ಶೇಕಡಾ 5ರಿಂದ ಶೇಕಡಾ 10ರವರೆಗೆ ವೇತನ ಏರಿಕೆ ಮಾಡುವಂತೆ ಆಯೋಗ ಶಿಫಾರಸು ಮಾಡಿದೆ ಎಂದು ಗೊತ್ತಾಗಿದೆ.
200 ರೂಪಾಯಿಗಿಂತ ಕಡಿಮೆ ಸಂಬಳ ಬರುವವರಿಗೆ ಶೇಕಡಾ 10 ರಷ್ಟು ಹಾಗೂ 200 ರೂಪಾಯಿಗಿಂತ ಮೇಲ್ಪಟ್ಟು ಸಂಬಳ ಬರುವವರಿಗೆ ಶೇ 5ರಷ್ಟು ವೇತನ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ.
ವೇತನ ಆಯೋಗದ ವರದಿಯನ್ನು ಮುಂದಿನವಾರ ಲೋಕಸಭೆಯಲ್ಲಿ ಮಂಡಿಸುವ ಸಂಭವವಿದೆ.
ಸದ್ಯಕ್ಕೆ ಆಕ್ಟ್ರಾಯ್ ರದ್ದಿಲ್ಲ
ಬೆಂಗಳೂರು, ಮಾರ್ಚ್ 31– 15ಕೋಟಿ ರೂಪಾಯಿಗಳಿಗೆ ಅನ್ಯ ವರಮಾನ ದಾರಿ ತೋರದೇ, ರಾಜ್ಯದಲ್ಲಿ ಆಕ್ಟ್ರಾಯಿ ರದ್ದು ಸಾಧ್ಯವಿಲ್ಲ ಎಂದು ಪೌರಾಡಳಿತ ಮಂತ್ರಿ ಶ್ರೀ ಬಸವಲಿಂಗಪ್ಪನವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.
‘ಆಕ್ಟ್ರಾಯಿ ತೆಗೆಯಲು ಸಾಧ್ಯವಿಲ್ಲ. ಇದರಲ್ಲಿ ಯಾರಾದರೂ ರಾಜಕೀಯ ಮಾಡಿದರೆ ನಾವು ನೋಡಿಕೊಳ್ಳುತ್ತೇವೆ’ ಎಂದು ಅವರು ತಮ್ಮ ಇಲಾಖೆಯ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದಾಗ ತಿಳಿಸಿದರು. ಉತ್ತರದ ನಂತರ 6 ಕೋಟಿ ರೂಪಾಯಿಗಳ ಬೇಡಿಕೆಗೆ ಸಭೆ ಅಂಗೀಕಾರ ನೀಡಿತು.