ನವದೆಹಲಿ, ಮೇ 27– ಗರ್ಭಪಾತವನ್ನು ಕಾನೂನುಬದ್ಧವಾಗಿ ಮಾಡುವ ಮಸೂದೆಯನ್ನು ರಾಜ್ಯಸಭೆ ಇಂದು ಅಂಗೀಕರಿಸಿತು.
ಮಸೂದೆಯು ಸಭೆಯಲ್ಲಿ ಜನಸಂಘ ಮತ್ತು ಸ್ವತಂತ್ರ ಪಕ್ಷಗಳನ್ನು ಬಿಟ್ಟು ಮಿಕ್ಕ ಎಲ್ಲಾ ವರ್ಗದವರ ಬೆಂಬಲ ಗಳಿಸಿತು.
ಮಸೂದೆ ಮೇಲೆ ನಡೆದ ಚರ್ಚೆ ಸಮಯದಲ್ಲಿ ಶ್ರೀ ಎ.ಡಿ.ಮಣಿ (ಪಕ್ಷೇತರ ಸದಸ್ಯ) ಅವರು ಮಾತನಾಡುತ್ತ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಗರ್ಭಪಾತ ಚಿಕಿತ್ಸೆ ನಡೆಸಬೇಕೆಂದು ತಿಳಿಸಿದರು.
ಶ್ರೀಮತಿ ಪೂರಬಿ ಮುಖರ್ಜಿ (ಆಡಳಿತ ಕಾಂಗ್ರೆಸ್) ಅವರು, ಕುಟುಂಬ ಯೋಜನೆಯ ಕ್ರಮವಾಗಿ ಗರ್ಭಪಾತ ಚಿಕಿತ್ಸೆ ನಡೆಸುವುದರ ವಿರುದ್ಧ ಎಚ್ಚರಿಕೆ ನೀಡಿದರು. ಕಾನೂನಿಗೆ ಬದ್ಧವಾಗಿರಲು ಒಪ್ಪಿಕೊಂಡ ಪಕ್ಷದಲ್ಲಿ ಖಾಸಗಿ ಆಸ್ಪತ್ರೆಗಳಿಗೂ ಗರ್ಭಪಾತ ಚಿಕಿತ್ಸೆ ನಡೆಸಲು ಅವಕಾಶ ನೀಡಬೇಕೆಂದರು.
ರಾಜ್ಯಪಾಲರ ನೇಮಕ: ರಾಜ್ಯ ಸಂಪುಟ ಸಮಾಲೋಚನೆಗೆ ಸಲಹೆ
ಮದ್ರಾಸ್, ಮೇ 27– ರಾಜ್ಯ ಸಂಪುಟ ಮತ್ತು ರಾಜ್ಯದ ಉನ್ನತ ಅಧಿಕಾರಿಯ ನಡುವೆ ಸೌಹಾರ್ದಯುತ ಸಂಬಂಧ ಇರುವಂತೆ ಮಾಡಲು ರಾಜ್ಯಪಾಲರ ನೇಮಕದ ವಿಚಾರದಲ್ಲಿ ರಾಜ್ಯ ಸಂಪುಟದ ಜೊತೆ ಸಮಾಲೋಚಿಸುವುದು ಸೂಕ್ತ ಮತ್ತು ಅಗತ್ಯ ಎಂದು ತಮಿಳುನಾಡು ಸರ್ಕಾರ ರಚಿಸಿದ ಕೇಂದ್ರ–ರಾಜ್ಯಗಳ ಸಂಬಂಧ ಕುರಿತ ಸಮಿತಿ ಶಿಫಾರಸು ಮಾಡಿದೆ.
ಅಥವಾ ಉನ್ನತಾಧಿಕಾರಿ ಸಮಿತಿಯೊಂದಿಗೆ ರಾಷ್ಟ್ರಪತಿಗಳು ಸಮಾಲೋಚಿಸಿದ ನಂತರ ನೇಮಿಸಬೇಕು ಎಂದೂ ಸಮಿತಿಯು ಸಲಹೆ ಮಾಡಿದೆ.