ಬೆಂಗಳೂರು, ಡಿ. 3– ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ದಿನಗಳಲ್ಲಿ ಅದನ್ನು ಬೆಳೆಸಲು ತಮ್ಮ ಜೀವನ ಸವೆಸಿದ ದಿ. ಬೆಳ್ಳಾವೆ ವೆಂಕಟ ನಾರಾಯಣಪ್ಪ ಅವರ ನೆನಪಿನಲ್ಲಿ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಪರಿಷತ್ತಿನ ಹೊನ್ನಿನ ಹಬ್ಬಕ್ಕಾಗಿ ವಿಶಾಲ ಮಂಟಪದ ನಿರ್ಮಾಣಕ್ಕೆ ಸಿದ್ಧತೆ. ಬೆಳ್ಳಾವೆಯವರ ನಿಕಟವರ್ತಿಗಳಾಗಿದ್ದ ಹಿರಿಯ ಸಾಹಿತಿ ಶ್ರೀ ವೀ. ಸೀತಾರಾಮಯ್ಯನವರಿಂದ ಕೋಟೆ ಪ್ರೌಢಶಾಲೆಯ ಮೈದಾನದಲ್ಲಿ ಮಂಟಪ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಿತು.
54 ವರ್ಷಗಳ ಹಿಂದೆ ಬೆಳ್ಳಾವೆಯವರ ಕಾಲದಲ್ಲಿ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದದ್ದು ಬಿಟ್ಟರೆ ಈವರೆಗೆ ಅದು ನಗರದಲ್ಲಿ ಸಮಾವೇಶಗೊಂಡಿರಲಿಲ್ಲ. ಆಗ ಪರಿಷತ್ತು ಇನ್ನೂ ಸಸಿ. ಈಗ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಹೊರನಾಡಿನಲ್ಲಿ ವ್ಯಾಪಿಸಿರುವ ಹೆಮ್ಮರ. ಎಳೆಯದರಲ್ಲಿ ಸಸಿಯನ್ನು ಬೆಳೆಸಲು ಜೀವನವನ್ನು ಧಾರೆ ಎರೆದ ಹಿರಿಯರನ್ನು ಶ್ರೀ ವೀ.ಸೀ ಸ್ಮರಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ವಿಳಂಬ ಮಾಡದೆ ಕಾರ್ಯಗತ ಮಾಡಬೇಕೆಂದು ಧರ್ಮವೀರ
ಗುಲ್ಬರ್ಗ, ಡಿ. 3– ಬಿಜಾಪುರ, ರಾಯಚೂರು ಮತ್ತು ಗುಲ್ಬರ್ಗ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ವಿಳಂಬ ಮಾಡದೆ ಕೈಗೊಳ್ಳಬೇಕಾದ ಅಗತ್ಯವನ್ನು ರಾಜ್ಯಪಾಲ ಧರ್ಮವೀರ ಅವರು ಇಂದು ಇಲ್ಲಿ ಒತ್ತಿ ಹೇಳಿದರು.