ಬಿದರೆ, ಆ.4– ಗಾಂಧಿ ಶತಮಾನೋತ್ಸವ ಸಮಾರಂಭವನ್ನು ಯಶಸ್ವಿಯಾಗಿ ಮಾಡಲು ಕರೆ ನೀಡಿದ ಅಧಿಕೃತ ನಿರ್ಣಯ ಇಂದು ಇಲ್ಲಿ ಎಂಪಿಸಿಸಿ ಅಧಿವೇಶನದಲ್ಲಿ ಉಗ್ರ ಟೀಕೆಗೆ ಕಾರಣವಾಯಿತು.
ಈ ನಿರ್ಣಯ ತೀರಾ ಅಸ್ಪಷ್ಟ ಎಂದು ಕೆಲವರು, ಗಾಂಧಿಯ ಮಹತ್ವದ ಆದರ್ಶವಾದ ಪಾನ ನಿರೋಧವನ್ನು ಸಡಿಲಿಸಿದ ಬಗ್ಗೆ ಇನ್ನು ಕೆಲವರು ಸರ್ಕಾರವನ್ನು ಖಂಡಿಸಿದರು.
ವಿಳಂಬವಾದರೆ ರಾಜ್ಯದಲ್ಲಿ ತೀವ್ರ ಅಶಾಂತಿ, ಚಳವಳಿ: ಕೇಂದ್ರ ಸರ್ಕಾರಕ್ಕೆ ಎಂ.ಪಿ.ಸಿ.ಸಿ. ಎಚ್ಚರಿಕೆ
ಬಿದರೆ, ಆ. 4– ಮಹಾಜನ್ ವರದಿಯ ಶಿಫಾರಸನ್ನು ವಿಳಂಬವಿಲ್ಲದೆ ಜಾರಿಗೆ ತರಬೇಕೆಂದು ಇಲ್ಲಿ ಸಮಾವೇಶಗೊಂಡಿರುವ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ಅಧಿವೇಶನ ಇಂದು ಕೇಂದ್ರ ಸರ್ಕಾರವನ್ನು ಆಗ್ರಹಪೂರ್ವಕವಾಗಿ ಒತ್ತಾಯಪಡಿಸಿತು.
ಅಧಿವೇಶನ ಅಂಗೀಕರಿಸಿದ ಅಧಿಕೃತ ನಿರ್ಣಯದಲ್ಲಿ ಗಡಿ ವಿವಾದಗಳನ್ನು ಇತ್ಯರ್ಥಮಾಡುವ ಮಾರ್ಗದಲ್ಲಿ ಹೊಸ ಸೂತ್ರಗಳನ್ನು ತಂದೊಡ್ಡುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಹಂತಕನ ಗುಂಡಿಗೆ ಚೀನ ವಿರೋಧಿ ಗುಪ್ತ ನಾಗಾ ನಾಯಕ ಕೈಟೊ ಬಲಿ
ಕೊಹಿಮಾ, ಆ. 4– ಭಿನ್ನಮತೀಯ ಗುಪ್ತ ನಾಗಾಗಳ ನಾಯಕ ‘ಜನರಲ್’ ಕೈಟೊ ಅವರು ಇಂದು ಸಂಜೆ ಇಲ್ಲಿರುವ ಭಾರತೀಯ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.
ಹೇಡಿತನದ ಕೃತ್ಯ ಎಂದು ಅಂಗಾಮಿ
ಕೊಹಿಮಾ, ಆ.4– ಗುಪ್ತ ನಾಗಾಗಳ ನಾಯಕ ಕೈಟೊ ಹತ್ಯೆಯನ್ನು ಹೇಡಿತನದ ಕೃತ್ಯ ಎಂದು ನಾಗಾ ರಾಜ್ಯದ ಮುಖ್ಯಮಂತ್ರಿ ಟಿ.ಎನ್. ಅಂಗಾಮಿ ಇಂದು ಹೇಳಿದರು.
ಪ್ರಾಣಿದಯಾ ಸಪ್ತಾಹ ಉದ್ಘಾಟನೆ
ಬೆಂಗಳೂರು, ಆ. 4– ರಾಷ್ಟ್ರಪತಿ ಗೌರವ ‘ಪ್ರಾಣಿಮಿತ್ರ’ ಪ್ರಶಸ್ತಿ ಪಡೆದ ಭಾರತ ಪ್ರಾಣಿದಯಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿದೇವಿ ಅರುಂಡೇಲ್ ಅವರಿಗೆ ನಮನ ಅರ್ಪಿಸಲು ನಗರದಲ್ಲಿ ನಡೆದ ಸುಂದರ ಸಮಾರಂಭದಲ್ಲಿ ರಾಜ್ಯಪಾಲರು ಪ್ರಾಣಿದಯಾ ಸಪ್ತಾಹವನ್ನು ಉದ್ಘಾಟಿಸಿದರು.