ನಾಗಪುರ, ಆ. 21– ಅಮರಾವತಿ ಟೌನಿನ ಜವಹರ್ ಗೇಟ್ ಪ್ರದೇಶದಲ್ಲಿ ಸೇರಿದ್ದ ಮೂರು ಸಾವಿರ ಮಂದಿಯ ಗುಂಪನ್ನು ಚದುರಿಸಲು ಪೊಲೀಸರು ಇಂದು ಸಂಜೆ ಗುಂಡು ಹಾರಿಸಿದಾಗ ನಾಲ್ಕು ಮಂದಿ ಸತ್ತರು.
ಗೋಲಿಬಾರ್ ನಡೆದ ನಂತರ ಅಮರಾವತಿ ಟೌನಿನಲ್ಲಿ ಸಂಜೆಯಿಂದ ಬೆಳಗಿನವರೆಗೆ ಕರ್ಫ್ಯೂ ವಿಧಿಸಲಾಗಿದೆ. ಗುಂಡಿನೇಟಿನಿಂದಾಗಿ ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ಸೇರಿಸಲಾಗಿದೆಯೆಂದು ಇಲ್ಲಿಗೆ ಬಂದ ಮೊದಲ ವರದಿ ತಿಳಿಸಿದೆ.
ಸೇನೆಗೆ ಕರೆ
ನಾಗಪುರ, ಆ. 21– ಅಮರಾವತಿ ಗಲಭೆ ಹತೋಟಿಯಲ್ಲಿ ಪೊಲೀಸರಿಗೆ ನೆರವಾಗಲು ಸೇನೆಗೆ ಕರೆ ನೀಡಲಾಗಿದೆ.
ಮಾತುಕತೆಗೆ ಗಿಲ್ ಸಿದ್ಧವಿಲ್ಲ
ಚಂಡೀಗಢ, ಆ. 21– ತಮಗೆ ಆಹ್ವಾನ ಬರುವವರೆಗೂ ತಾವು ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆಗೆ ಹೋಗುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಲಚಮನ್ಸಿಂಗ್ ಗಿಲ್ ಇಂದು ಇಲ್ಲಿ ತಿಳಿಸಿದರು.
ಸೆಲಿಬೆಸ್ನಲ್ಲಿ ಭೂಕಂಪ: ಇನ್ನೂರು ಸಾವು
ಜಕಾರ್ತಾ, ಆ. 21– ಮಧ್ಯ ಸೆಲಿಬೆಸ್ನ ಡೊಂಗಲಾದ ಪಶ್ಚಿಮ ಕರಾವಳಿಯಲ್ಲಿ ಪ್ರಬಲ ಭೂಕಂಪ ಉಂಟಾಗಿದ್ದರಿಂದ 200 ಮಂದಿ ಸತ್ತರು ಎಂದು ಸಮಾಜ ವ್ಯವಹಾರ ಖಾತೆ ಇಂದು ಪ್ರಕಟಿಸಿದೆ.
ಸಚಿವರು–ಸದಸ್ಯರ ಮಧ್ಯೆ ಚಕಮಕಿ
ನವದೆಹಲಿ, ಆ. 21– ಸಂಸತ್ ಸದಸ್ಯರಿಗೆ ವಸತಿ ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆಯಲ್ಲಿ ಸಂಸತ್ ವ್ಯವಹಾರಗಳ ಖಾತೆ ಸಚಿವ ರಾಮ ಸುಭಾಗ್ ಸಿಂಗ್ ಮತ್ತು ಕೆಲವರು ಸದಸ್ಯರ ನಡುವೆ ಘರ್ಷಣೆ ಉಂಟಾಯಿತು.
ಮನೆಗಳ ಹಂಚಿಕೆ ಬಗ್ಗೆ ಸ್ವಜನ ಪಕ್ಷಪಾತ ತೋರಲಾಗುತ್ತಿದೆ ಎಂದು ಸದಸ್ಯರು ಆಪಾದಿಸಿದರು.
ಚಿನ್ನ ನಿಯಂತ್ರಣ ಮಸೂದೆ: ಕಾಂಗ್ರೆಸ್ಸಿನಲ್ಲೇ ಭಿನ್ನಾಭಿಪ್ರಾಯ
ನವದೆಹಲಿ, ಆ. 21– ಸುವರ್ಣ ನಿಯಂತ್ರಣ ಮಸೂದೆ ಬಗ್ಗೆ ಕಾಂಗ್ರೆಸ್ ಸದಸ್ಯರಲ್ಲೇ ಭಿನ್ನಾಭಿಪ್ರಾಯವಿರುವುದು ಇಂದು ಲೋಕಸಭೆಯಲ್ಲಿ ಈ ಬಗ್ಗೆ ನಡೆದ ಅಪೂರ್ಣ ಚರ್ಚೆಯಲ್ಲಿ ವ್ಯಕ್ತಪಟ್ಟಿತು.