ನವದೆಹಲಿ, ಮಾ. 5– ಕರ್ನಾಟಕಕ್ಕೆ ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ತೀರಾ ಅನ್ಯಾಯವಾಗಿದೆ ಎಂದು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯದ ಸಂಸತ್ ಸದಸ್ಯರ ಸಭೆಯು, ಪ್ರಧಾನಿ ಮತ್ತು ರೈಲ್ವೆ ಸಚಿವರನ್ನು ಭೇಟಿಯಾಗಿ ಚರ್ಚಿಸಲು ಇಂದು ನಿರ್ಧರಿಸಿತು.
ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಲ್ಲಿನ ಕರ್ನಾಟಕ ಭವನದಲ್ಲಿ ಕರೆದಿದ್ದ ರಾಜ್ಯದ ಸಂಸತ್ ಸದಸ್ಯರ ಸಭೆಯಲ್ಲಿ, ರೈಲ್ವೆಯಲ್ಲಿ ರಾಜ್ಯಕ್ಕೆ ಈ ಬಾರಿ ತೀರಾ ಅನ್ಯಾಯವಾಗಿದೆ ಎಂಬ ಅಸಮಾಧಾನ ವ್ಯಕ್ತವಾಯಿತು.
ಆರಂಭದಲ್ಲಿ ಮಾತನಾಡಿದ ದೆಹಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಬಸವರಾಜ ರಾಯಾರೆಡ್ಡಿ, ರಾಜ್ಯದಲ್ಲಿ ಈ ವರ್ಷ ಎತ್ತಿಕೊಳ್ಳಬೇಕಾಗಿದ್ದ ಹಲವಾರು ರೈಲ್ವೆ ಯೋಜನೆಗಳ ಬಗೆಗೆ ಮುಖ್ಯಮಂತ್ರಿ ಅವರು ಹಲವಾರು ಪತ್ರಗಳನ್ನು ಬರೆದು ವಿವರಿಸಿದ್ದರು. ತಾವು ಸಹ ರೈಲ್ವೆ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಮಾತನಾಡಿದ್ದೆ. ಆದರೆ, ಬಜೆಟ್ನಲ್ಲಿ ರಾಜ್ಯದಲ್ಲಾಗಬೇಕಾಗಿದ್ದ ಹಲವಾರು ಯೋಜನೆಗಳನ್ನು ಕಡೆಗಣಿಸಲಾಗಿದೆ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಉಚಿತ ನಿವೇಶನದ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ
ಬೆಂಗಳೂರು, ಮಾ.5– ಕಂದಾಯ ಇಲಾಖೆಯ ಇಬ್ಬರು ನೌಕರರು ಆಶ್ರಯ ಯೋಜನೆಯಲ್ಲಿ ಉಚಿತ ನಿವೇಶನ ಕೊಡಿಸುವುದಾಗಿ ಮುಗ್ದ ಜನರನ್ನು ನಂಬಿಸಿ ದಾಖಲೆ ಪತ್ರಗಳಿಗೆಂದು ಲಕ್ಷಾಂತರ ರೂಪಾಯಿ ಹಣ ಪಡೆದು ನಕಲಿ ಹಕ್ಕುಪತ್ರಗಳನ್ನು ನೀಡಿ ವಂಚಿಸಿರುವ ಭಾರಿ ಹಗರಣವೊಂದು ಬೆಳಕಿಗೆ ಬಂದಿದೆ.
ವಿಭಾಗೀಯ ಆಯುಕ್ತರ ಕಚೇರಿಯಲ್ಲಿನ ಉಪ ತಹಶೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಕಂದಾಯ ವಿಭಾಗದ ನಾಲ್ಕನೇ ದರ್ಜೆ ನೌಕರರೊಬ್ಬರು ಈ ಪ್ರಕರಣದ ಆಪಾದಿತರು. ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.