ಗೋಹತ್ಯೆ ನಿಷೇಧ ಒತ್ತಾಯಕ್ಕೆ ನಂದಾ ಬೆಂಬಲ
ಪಟ್ನಾ, ಜ. 3– ರಾಷ್ಟ್ರದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಒತ್ತಾಯಕ್ಕೆ ಮಾಜಿ ಗೃಹ ಸಚಿವ ಶ್ರೀ ಗುಲ್ಜಾರಿಲಾಲ್ ನಂದಾ ಇಂದು ಬೆಂಬಲವನ್ನು ನೀಡಿದರು.
ಗೋಹತ್ಯೆ ನಿಷೇಧಿಸುವ ಆಜ್ಞೆಯನ್ನು ಹೊರಡಿಸಲು ಸರ್ಕಾರ ಹಿಂಜರಿಯಬಾರದೆಂದೂ ಅವರು ನುಡಿದರು.
*
ಗೋಹತ್ಯೆ ನಿಷೇಧಕ್ಕೆ ರಾಜ್ಯಾಂಗದ ತಿದ್ದುಪಡಿ ಸಾಧ್ಯವಿಲ್ಲ: ಪ್ರಧಾನಿ ವಿವರಣೆ
ಹೈದರಾಬಾದ್, ಜ. 3– ಗೋಹತ್ಯೆಯನ್ನು ನಿಷೇಧಿಸುವ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಯಾವ ಸ್ಪಷ್ಟ ಭರವಸೆಯನ್ನು ನೀಡಲು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ನಿರಾಕರಿಸಿದರು.
ಪುರಿ ಜಗದ್ಗುರುಗಳ ಉಪವಾಸ ಮುಷ್ಕರದಿಂದ ಉಂಟಾಗಿರುವ ತೀವ್ರ ಪರಿಸ್ಥಿತಿ ಸರ್ಕಾರಕ್ಕೆ ತಿಳಿದಿದೆಯೆಂದೂ ಆದರೆ ಗೋಹತ್ಯೆಯನ್ನು ರಾಷ್ಟ್ರಾದ್ಯಂತ ನಿಷೇಧಿಸಲು ಸಾಧ್ಯವಾಗುವಂತೆ ರಾಜ್ಯಾಂಗದ ಬದಲಾವಣೆ ಸಾಧ್ಯವಿಲ್ಲವೆಂದೂ ಅವರು ಹೇಳಿದರು.
ಗೋಹತ್ಯೆ ವಿರುದ್ಧ ಚಳವಳಿಕಾರರು ಈ ಸಮಸ್ಯೆಯನ್ನು ಭಾವನಾತ್ಮಕ ದೃಷ್ಟಿಯಿಂದ ನೋಡುತ್ತಿರುವರೆಂದೂ ಆದರೆ ಸರ್ಕಾರವು ಸಮಸ್ಯೆಯ ಆರ್ಥಿಕ ಪರಿಣಾಮಗಳನ್ನೂ ವಿವೇಚಿಸಬೇಕಾಗಿದೆಯೆಂದೂ ಅವರು ಹೇಳಿದರು.