ನಮ್ಮ ಪಡೆಯ ಮೇಲೆ ಪಾಕ್ ಸೇನೆ ಗುಂಡು
ನವದೆಹಲಿ, ಅ. 9– ಜಮ್ಮು ಮತ್ತು ಕಾಶ್ಮೀರದ ಉರಿ ವಿಭಾಗದಲ್ಲಿ ಪಾಕಿಸ್ತಾನ್ ಸೇನಾಪಡೆ ಇಂದು ಬೆಳಿಗ್ಗೆ 8.30ಕ್ಕೆ ಭಾರತೀಯ ಪಹರೆ ದಳದ ಮೇಲೆ ಯಾವ ಪ್ರಚೋದನೆಯೂ ಇಲ್ಲದೆ ಗುಂಡು ಹಾರಿಸಿತೆಂದು ರಕ್ಷಣಾ ಸಚಿವ ಶಾಖೆ ವಕ್ತಾರರು ತಿಳಿಸಿದ್ದಾರೆ.
ಕದನ ವಿರಾಮ ರೇಖೆಯ ತಮ್ಮ ಪಾರ್ಶ್ವದಲ್ಲಿ ಸ್ಥಾಪಿಸಿಕೊಂಡಿರುವ ನೆಲೆಗಳಿಂದ ಪಾಕಿಸ್ತಾನಿ ಸೈನಿಕರು ಗುಂಡು ಹಾರಿಸಿದರು. ಭಾರತೀಯ ಸೈನಿಕರು ಪ್ರತಿಯಾಗಿ ಗುಂಡು ಹಾರಿಸಿದರೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ.
ಈ ವಿಭಾಗದಲ್ಲಿ 1965ರ ಕದನದ ಬಳಿಕ ಪಾಕಿಸ್ತಾನಿಗಳು ಗಡಿ ಘರ್ಷಣೆ ಆರಂಭಿಸಿದುದು ಇದೇ ಮೊದಲು.
ಪ್ರಧಾನಿ ಯೂರೋಪ್ ಪ್ರವಾಸ ಕಾಲಕ್ಕೆ ಚೀನಾ ಅಪಪ್ರಚಾರ
ನವದೆಹಲಿ, ಅ. 9– ಭಾರತದ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಪೂರ್ವ ಯೂರೋಪ್ ಪ್ರವಾಸದ ಕಾಲಕ್ಕೆ ಸರಿಯಾಗಿ ಭಾರತದ ವಿರುದ್ಧ ಚೀನಾ ಪುನಃ ಅಪಪ್ರಚಾರ ಆರಂಭಿಸಿದೆ.
ನವದೆಹಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಸಿಬ್ಬಂದಿ ಮೇಲೆ ಭಾರತ ಸರ್ಕಾರವು ನಿರ್ಬಂಧ ಕ್ರಮಗಳನ್ನು ವಿಧಿಸಿರುವುದಾಗಿ ಪೀಕಿಂಗ್ ರೇಡಿಯೋ ಮಾಡಿದ ಪ್ರಸಾರವನ್ನು ಪಾಕಿಸ್ತಾನ್ ರೇಡಿಯೋ ಇಂದು ಬೆಳಿಗ್ಗೆ ಪುನಃ ಪ್ರಸಾರ ಮಾಡಿತು.
ಚೀನಾ ಕೈಗೊಂಡಿರುವ ಕ್ರಮಕ್ಕೆ ಪ್ರತಿಯಾಗಿ ಭಾರತ ಸರ್ಕಾರವು ಈ ಕ್ರಮವನ್ನು ಅನುಸರಿಸುತ್ತಿರುವುದಾಗಿ ಅನೇಕ ಭಾರಿ ಅಧಿಕೃತವಾಗಿ ಸ್ಪಷ್ಟಪಡಿಸಿದ್ದರೂ, ತನ್ನ ರಾಯಭಾರಿ ಕಚೇರಿ ಸಿಬ್ಬಂದಿಗೆ ನ್ಯಾಯವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಭಾರತ ಸರ್ಕಾರ ಮೊಟಕು ಮಾಡಿದೆಯೆಂದು ಪೀಕಿಂಗ್ ಪ್ರಸಾರ ಮಾಡಿದೆ.
ಕಳೆದ ನಾಲ್ಕು ದಿನಗಳಲ್ಲಿ ಚೀನಾ ಹೀಗೆ ಪ್ರಸಾರ ಮಾಡುತ್ತಿರುವುದು ಇದು ಎರಡನೆಯ ಬಾರಿ.