ಗೋವಾ: ರಾಜ್ಯಪಾಲರ ಅಪೂರ್ವ ಕ್ರಮ –ಡಿಸೋಜ ಸಂಪುಟ ವಜಾ: ನಾಯಕ್ ಮತ್ತೆ ಅಧಿಕಾರಕ್ಕೆ
ಪಣಜಿ, ಏ. 2– ಅತ್ಯಂತ ಆಶ್ಚರ್ಯಕರ ರಾಜಕೀಯ ಬೆಳವಣಿಗೆಯೊಂದರಲ್ಲಿ, ಇಂದು ಗೋವಾದ ರಾಜ್ಯಪಾಲ ಭಾನುಪ್ರಕಾಶ್ ಸಿಂಗ್ ಅವರು ಡಾ. ವಿಲ್ಫ್ರೆಡ್ ಡಿಸೋಜ ಅವರ ನೇತೃತ್ವದ ಮಂತ್ರಿಮಂಡಲವನ್ನು ವಜಾ ಮಾಡಿ, ಈ ಹಿಂದಿನ ಮುಖ್ಯಮಂತ್ರಿ ರವಿನಾಯಕ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದ್ದಾರೆ.
ಶುಕ್ರವಾರ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದ ಕೃಷಿ ಸಚಿವ ಫ್ರಾನ್ಸಿಸ್ಕೊ ಸರ್ಡಿನ್ಹಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿಯೂ ರಾಜ್ಯಪಾಲರು ನೇಮಿಸಿದ್ದಾರೆ.
ಅಯೋಡಿನ್ ಇಲ್ಲದ ಉಪ್ಪಿಗೆ ನಿಷೇಧ
ಬೆಂಗಳೂರು, ಏ. 2– ಈ ಬಾರಿಯ ಯುಗಾದಿ ದಿನದಿಂದ ರಾಜ್ಯದಾದ್ಯಂತ ಅಯೋಡಿನ್ಯುಕ್ತ ಉಪ್ಪು ಮಾರಾಟ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.
ಅಯೋಡಿನ್ ಕೊರತೆಯಿಂದ ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಗುರುತಿಸಿ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ಅಯೋಡಿನ್ ರಹಿತ ಉಪ್ಪು ಮಾರುವುದನ್ನು ನಿಷೇಧಿಸಲಾಗಿದೆ. ಈ ತಿಂಗಳ 11 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಯೋಡಿನ್ ರಹಿತ ಉಪ್ಪು ಮಾರಾಟ ನಿಷೇಧಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.